ಪ್ರತ್ಯೇಕ ಧರ್ಮಕ್ಕಾಗಿ ಲಿಂಗಾಯತರಿಂದ ಮನವಿ ಬಂದಿಲ್ಲ: ಸಿಎಂ
ಬೆಂಗಳೂರು, ಜುಲೈ 26: ಲಿಂಗಾಯತ, ವೀರಶೈವ ಧರ್ಮ ವಿಚಾರವಾಗಿ ನಮ್ಮ ಸರ್ಕಾರ ರಾಜಕೀಯ ಮಾಡುತ್ತಿಲ್ಲ. ಜಾತಿವಾದಿಗಳು ಯಾರು ಎಂಬುದು ಎಲ್ಲರಿಗೂ ಗೊತ್ತಿದೆ. ಅಸಲಿಗೆ, ಪ್ರತ್ಯೇಕ ಧರ್ಮ ಮಾಡುವ ಬಗ್ಗೆ ನಮಗೆ ಯಾವುದೇ ಮನವಿ ಬಂದಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬುಧವಾರ ಘೋಷಿಸಿದರು.
ಆದರೆ, ತಮ್ಮ ಸಚಿವ ಸಂಪುಟದ ಐವರು ಸಚಿವರು ರಾಜ್ಯದೆಲ್ಲೆಡೆ ಪ್ರವಾಸ ಕೈಗೊಂಡು, ಪ್ರತ್ಯೇಕ ಧರ್ಮ ಸ್ಥಾಪನೆಗಾಗಿ ಅಭಿಪ್ರಾಯ ಸಂಗ್ರಹಿಸಲಿರುವ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಲು ಸಿದ್ದರಾಮಯ್ಯ ಅವರು ನಿರಾಕರಿಸಿದರು.

ರಾಜ್ಯ ಸಚಿವ ಸಂಪುಟ ಸಭೆಗೆ ತೆರಳುವ ಮುನ್ನ ವಿಧಾನಸೌಧದ ಮುಂದೆ ಸುದ್ದಿಗಾರರ ಜತೆ ಮಾತನಾಡುತ್ತಾ, ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ನಮಗೆ ಮನವಿಯೇ ಬಂದಿಲ್ಲ. ಹೀಗಿರುವಾಗ ಹೇಗೆ ಶಿಫಾರಸು ಮಾಡುವುದು? ಮೊದಲು ಇದಕ್ಕೆ ಸಂಬಂಧಿಸಿದವರು ಪ್ರತ್ಯೇಕ ಧರ್ಮದ ಬಗ್ಗೆ ಮನವಿ ಕೊಡಲಿ, ಆಮೇಲೆ ಅದನ್ನು ಶಿಫಾರಸು ಮಾಡುವ ಬಗ್ಗೆ ನೋಡೋಣ ಎಂದರು.
ಬಿಜೆಪಿಯವರು ಜಾತಿವಾದಿಗಳು. ಅವರು ಪ್ರತ್ಯೇಕ ಜಾತಿ ಮಾಡುತ್ತಿದ್ದಾರೆ, ಜಾತಿವಾದಿಗಳಿಗೆ ಮಾತ್ರ ಇಂತಹ ಯೋಚನೆಗಳು ಬರುತ್ತವೆ ಎಂದು ದೂರಿದರು.
ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಗಣಿಗಾರಿಕೆ ಸಚಿವ ವಿನಯ್ ಕುಲಕರ್ಣಿ, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ, ಮುನ್ಸಿಪಲ್ ಆಡಳಿತ ಸಚಿವ ಈಶ್ವರ್ ಖಂಡ್ರೆ, ತೋಟಗಾರಿಕಾ ಸಚಿವ ಎಸ್ಎ ಮಲ್ಲಿಕಾರ್ಜುನ ಅವರು ರಾಜ್ಯದೆಲ್ಲೆಡೆ ಪ್ರವಾಸ ಕೈಗೊಂಡು 'ಪ್ರತ್ಯೇಕ ಲಿಂಗಾಯತ ಧರ್ಮ' ಸ್ಥಾಪನೆ ಸಾಧ್ಯಸಾಧ್ಯತೆ ಬಗ್ಗೆ ಅಭಿಪ್ರಾಯ, ಮಾಹಿತಿ ಸಂಗ್ರಹಿಸುತ್ತಿದ್ದಾರೆ.












Click it and Unblock the Notifications