ಕರ್ನಾಟಕಕ್ಕೆ ಸಿದ್ದರಾಮಯ್ಯನವರ ಹೆಸರಿಟ್ಬಿಡಿ: ಎಚ್.ಡಿ.ಕುಮಾರಸ್ವಾಮಿ ಹಿಂಗ್ ಹೇಳಿದ್ಯಾಕೆ?
ಬೆಂಗಳೂರು, ಜನವರಿ, 05: ಮೈಸೂರಿನ ಕೆಆರ್ಎಸ್ ರಸ್ತೆಗೆ ಸಿದ್ದರಾಮಯ್ಯ ಅವರ ಹೆಸರಿಡುವ ಬಗ್ಗೆ ರಾಜ್ಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಇದಕ್ಕೆ ಕೆಲವು ಬಿಜೆಪಿ ನಾಯಕರೇ ಒಪ್ಪಿಗೆ ಸೂಚಿಸಿದ್ದು, ಹಲವರು ವಿರೋದ್ಧ ವ್ಯಕ್ತಪಡಿಸಿದ್ದರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ರಸ್ತೆಗೆ ತಮ್ಮ ಹೆಸರನ್ನಿಡುವ ವಿಷಯ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಜಾಣಮೌನಕ್ಕೆ ಶರಣಾಗಿದ್ದಾರೆ. ರಸ್ತೆಗೆ ತಮ್ಮ ಹೆಸರಿಡಬೇಕೆನ್ನುವ ಆಕಾಂಕ್ಷೆ ಬಹುಶಃ ಅವರಿಗೆ ಇರಬಹುದು. ಅದಕ್ಕೇ ಮೌನವಾಗಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಮುಂದಿಟ್ಟು ನೋಡುತ್ತಿದ್ದಾರೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದರು.

ಸುದ್ದಿಗಾರರೊಂದಿಗೆ ಪ್ರಿನ್ಸೆಸ್ ರಸ್ತೆ ನಾಮಕರಣ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರಿಗೆ ಯಾವುದಾರೂ ರಸ್ತೆ ಅಥವಾ ಬಡಾವಣೆಗೆ ತಮ್ಮ ಹೆಸರಿಡಬೇಕು ಎನ್ನುವ ಮನಸ್ಸಿದ್ದರೆ, ಇಡೀ ರಾಜ್ಯಕ್ಕೇ ಅವರ ಹೆಸರನ್ನುಟ್ಟು ಬಿಡಲಿ ಎಂದು ವ್ಯಂಗ್ಯವಾಡಿದರು. ಹೆಸರಿನ ರಾಜಕಾರಣವನ್ನು ಸಿದ್ದರಾಮಯ್ಯ ಅವರು ಮೊದಲು ಕೈ ಬಿಡಬೇಕು ಎಂದು ಆಗ್ರಹಿಸಿದರು.
ಇನ್ನು ಮತ್ತೊಂದೆಡೆ ಮೈಸೂರು ಕೆಆರ್ಎಸ್ ರಸ್ತೆ ಸಿದ್ದರಾಮಯ್ಯ ಹೆಸರಿಡುವಂತೆ ಜಿ.ಡಿ.ದೇವೇಗೌಡರು ಕೂಡ ಹೇಳಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ ಅವರು, ಜನತಾದಳದ್ದೂ ಜಿ.ಟಿ.ದೇವೇಗೌಡ ಅವರದ್ದೂ ಗಂಡ-ಹೆಂಡತಿ ಸಂಬಂಧದಂತೆ. ಜಗಳ, ಮುನಿಸು ಇದ್ದೇ ಇರುತ್ತದೆ. ಹಾಗಂತ ಸಂಬಂಧ ಏನು ಮುರಿಯುವುದಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಜೆಡಿಎಸ್ನಿಂದ ಶಾಸಕ ಜಿಟಿಡಿ ದೂರ ಉಳಿದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಆಯಾ ಸಂದರ್ಭಕ್ಕೆ ತಕ್ಕಂತೆ ಜಿ.ಟಿ. ದೇವೇಗೌಡರು ತಮಗೆ ಅನ್ನಿಸಿದ್ದನ್ನು ಹೇಳುತ್ತಾರೆ. ಅಷ್ಟಕ್ಕೆ ನಮ್ಮ-ಅವರ ಸಂಬಂಧ ಮುಗಿಯಿತು ಎಂದು ಅರ್ಥವಲ್ಲ. ಅವರು ಯಾವ ಪಕ್ಷಕ್ಕೂ ಹೋಗುವುದಿಲ್ಲ. ನಮ್ಮಲ್ಲೇ ನಮ್ಮ ಜೊತೆಗಿದ್ದಾರೆ ಎಂದರು.
ಮತ್ತೊಂದೆಡೆ ಮೈಸೂರಿನ ಪ್ರಿನ್ಸಸ್ ರಸ್ತೆಗೆ ಸಿದ್ದರಾಮಯ್ಯ ಅವೆ ಹೆಸರು ಮರು ನಾಮಕರಣ ಮಾಡುವ ವಿಚಾರವಾಗಿ ಪ್ರತಾಪ್ ಸಿಂಹ ಪ್ರತಿಕ್ರಿಯಿಸಿದ್ದಾರೆ. ರಸ್ತೆಗೆ ಅವರ ಹೆಸರು ಇಟ್ಟರೆ ತಪ್ಪೇನು ಹೇಳಿದ್ದರು. ಬಳಿಕ ಬಿಜೆಪಿ ನಾಯಕರು ಸೇರಿದಂತೆ ಹಲವರು ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಳಿಕ ಅವರು ಈ ವಿಚಾರದಲ್ಲಿ ಯೂಟರ್ನ್ ಹೊಡೆದಿದ್ದಾರೆ.
ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ ಅವರು, ಮುಡಾ ಇರುವವರೆಗೂ ಸಿಎಂ ಸಿದ್ದರಾಮಯ್ಯ ಮಾಡಿರುವ ಕೆಲಸ ಸ್ಥಿರ ಸ್ಥಾಯಿಯಾಗಿರುತ್ತದೆ. ಆದ್ದರಿಂದ ಅವರ ಹೆಸರನ್ನು ಬೇರೆ ಎಲ್ಲೂ ಇಡುವ ಅವಶ್ಯಕತೆಯಿಲ್ಲ ಎಂದು ರಸ್ತೆಗೆ ಸಿದ್ದರಾಮಯ್ಯ ಹೆಸರು ನಾಮಕರಣ ಮಾಡುವ ವಿಚಾರವಾಗಿ ಪ್ರತಾಪ್ ಸಿಂಹ ಅವರು ಇತ್ತೀಗಷ್ಟೇ ಆಕ್ರೋಶ ಹೊರಹಾಕಿದ್ದರು.












Click it and Unblock the Notifications