Leopard in Bengaluru : ಬೆಂಗಳೂರಲ್ಲಿ ಮುಂದುವರಿದ ಚಿರತೆ ಹಾವಳಿ, ನಾಯಿ ಕೊಂದ ಚಿರತೆಯಿಂದ ಗ್ರಾಮಸ್ಥರಲ್ಲಿ ಆತಂಕ
ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಚಿರತೆ ಹಾವಳಿ, ಜನರ ಆತಂಕ ಪರಿಸ್ಥಿತಿ ಮತ್ತೆ ಮುಂದುವರಿದಿದೆ. ಬೆಂಗಳೂರಿನ ಗೊಂಗಡಿಪುರ ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಈ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ.
ಬೆಂಗಳೂರು, ಫೆಬ್ರುವರಿ 02: ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಚಿರತೆ ಹಾವಳಿ, ಜನರ ಆತಂಕ ಪರಿಸ್ಥಿತಿ ಮತ್ತೆ ಮುಂದುವರಿದಿದೆ. ಬೆಂಗಳೂರಿನ ಗೊಂಗಡಿಪುರ ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದೆ. ಈ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ.
ಬೆಂಗಳೂರಿನ ನೈಸ್ ರಸ್ತೆಯ ಕೊಡುಗೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂಗಡಿಪುರ ಗ್ರಾಮದ ಬಳಿ ಬುಧವಾರ ರಾತ್ರಿ ಚಿರತೆ ಓಡಾಡಿರುವುದನ್ನು ಜನರು ಗಮನಿಸಿದ್ದಾರೆ. ತನ್ನ ಎರಡು ಮರಿಗಳ ಜೊತೆಗೆ ಕಳೆದ ಎರಡು ತಿಂಗಳಿನಿಂದ ಇದೇ ಭಾಗದಲ್ಲಿ ಚಿರತೆ ಪ್ರತ್ಯಕ್ಯವಾಗುತ್ತಿದೆ. ಜನರು ಮನೆಯಿಂದ ಹೊರಹೋಗದ ಸ್ಥಿತಿ ಎದುರಾಗಿದ್ದು, ಮಹಿಳೆಯರು, ಮಕ್ಕಳ ಭಯಬೀತರಾಗಿದ್ದಾರೆ.
ಎರಡು ವಾರದ ಹಿಂದಷ್ಟೇ ಇದೇ ಚಿರತೆ ನೈಸ್ ರಸ್ತೆ ಪಕ್ಕದಲ್ಲಿ ಓಡಾಡಿತ್ತು. ಆಗಲೂ ಈ ಗ್ರಾಮದಲ್ಲಿ ಇಂತದ್ದೇ ಭಯದವಾತಾವರಣ ನಿರ್ಮಾಣವಾಗಿತ್ತು. ಮತ್ತೆ ಬುಧವಾರ ಕಾಣಿಸಿಕೊಂಡ ಚಿರತೆ, ರಾತ್ರಿ ವೇಳೆ ನಾಯಿಯನ್ನು ಎಳೆದೊಯ್ದಿದೆ ಎಂದು ಗೊಂಗಡಿಪುರ ಗ್ರಾಮಸ್ಥರು ತಿಳಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳು/ಸರ್ಕಾರ ಈ ಬಗ್ಗೆ ಸೂಕ್ತ ಕ್ರಮವಹಿಸಿ ಚಿರತೆ ಸೆರೆಹಿಡಿದು ಸಂಭವನೀಯ ಅಪಾತ ತಪ್ಪಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಎರಡು ತಿಂಗಳ ಹಿಂದಷ್ಟೇ ಡಿಸೆಂಬರ್ನಲ್ಲಿ ಬೆಂಗಳೂರಿನ ಸೋಮಾಪುರ ಬಳಿ ತುರಹಳ್ಳಿಯಲ್ಲಿ ಎರಡು ಸಲ ಚಿರತೆ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಭೀತಿ ಸೃಷ್ಟಿ ಮಾಡಿತ್ತು.
ಇನ್ನೂ ಇತ್ತೀಚೆಗಷ್ಟೇ ಜನವರಿ 11ರ ಆಸುಪಾಸು ದಿನ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ವಿವಿ ಆವರಣದಲ್ಲಿ ಎನ್ಎಸ್ಎಸ್ ಭವನದ ಹಿಂಭಾಗದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಭಯಬೀತರಾಗಿದ್ದ ವಿದ್ಯಾರ್ಥಿಗಳಿಗೆ ವಿವಿ ಆಡಳಿತ ಮಂಡಳಿ ಧೈರ್ಯ ತುಂಬಿ ಜಾಗೃತಿ ವಹಿಸುವಂತೆ ತಿಳಿಸಿತ್ತು. ಆದರೆ ಈ ಬಗ್ಗೆ ಅರಣ್ಯಾಧಿಕಾರಿಗಳು ಚಿರತೆ ಓಡಾಡಿದ್ದರ ಬಗ್ಗೆ ಖಚಿತಪಡಿಸಿರಲಿಲ್ಲ ಎನ್ನಲಾಗಿದೆ.