ಸಿಎಂ ಯಡಿಯೂರಪ್ಪ ಭೇಟಿಗೆ ಅವಕಾಶ ಸಿಗದೆ ಹಿಂದಿರುಗಿದ ಮಾಜಿ ಸಚಿವ ಎಂಟಿಬಿ!
ಬೆಂಗಳೂರು, ಜೂ. 04: ಪರಿಷತ್ ಚುನಾವಣೆ ಸಮೀಪಿಸುತ್ತಿದ್ದಂತೆಯೆ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಕೊರೊನಾ ವೈರಸ್, ಲಾಕ್ಡೌನ್ನಿಂದಾಗಿ ಬಿಜೆಪಿಯಲ್ಲಿ ಕಳೆಗುಂದಿದ್ದ ರಾಜಕೀಯ ಮತ್ತೆ ಶುರುವಾಗಿದೆ. ರಾಜ್ಯಸಭಾ, ವಿಧಾನ ಪರಿಷತ್ ಚುನಾವಣೆ ಹಾಗೂ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗುತ್ತದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯಲ್ಲಿ ಚಟುವಟಿಕೆಗಳು ಬಿರುಸಾಗಿವೆ.
ಇದೇ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆಯ ರಾಜಕೀಯ ಕೂಡ ಆರಂಭವಾಗಿದೆ. ತಮಗೆ ಮಂತ್ರಿಸ್ಥಾನ ಹಾಗೂ ಸಹೋದರನಿಗೆ ರಾಜ್ಯಸಭಾ ಚುನಾವಣೆಗೆ ಮಾಜಿ ಸಚಿವ ಉಮೇಶ್ ಕತ್ತಿ ಈಗಾಗಲೇ ಆಪ್ತ ಹಿರಿಯ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ. ಜಿತೆಗೆ ನಿನ್ನೆ ರಾತ್ರಿ (ಜೂನ್ 03) ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರು ತಮ್ಮ ಆಪ್ತರಿಗೆ ಬೆಂಗಳೂರಿನಲ್ಲಿ ಔತಣ ಏರ್ಪಡಿಸಿದ್ದರು. ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಎಂಟಿಬಿ ನಾಗರಾಜ್ ಸಿಎಂ ಭೇಟಿ ಮಾಡದೆ ಹಿಂದಿರುಗಿದ್ದಾರೆ.
ಕತ್ತಿ ಸಭೆ ಬಳಿಕ ಜಾಕಿಹೊಳಿ
ಲೋಕಸಭಾ ಚುನಾವಣೆ ಸಂದರ್ಭ ಹಾಗೂ ಸಂಪುಟ ವಿಸ್ತರಣೆ ಸಮಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟಿದ್ದ ಮಾತನ್ನು ನೆನಪಿಸಲು ಮಾಜಿ ಸಚಿವ ಉಮೇಶ್ ಕತ್ತಿ ಸಭೆ ನಡೆಸಿದ್ದರು ಎನ್ನಲಾಗಿತ್ತು. ಬೆಳಗಾವಿ ಜಿಲ್ಲಾ ಉಸ್ತುವಾರಿ ಸಿಕ್ಕಿದ್ದರಿಂದ ಆಪ್ತರಿಗೆ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ನಿನ್ನೆ ರಾತ್ರಿ ಔತಣಕೂಟ ಏರ್ಪಡಿಸಿದ್ದರು. ಆದರೆ ಅದನ್ನು ಬಿಜೆಪಿ ವಲಯದಲ್ಲಿ ಉಮೇಶ್ ಕತ್ತಿ ಸಭೆಗೆ ಪರ್ಯಾವಾಗಿ ನಡೆಸಿದ ಬಲ ಪ್ರದರ್ಶನ ಎಂದೇ ವಿಶ್ಲೇಷಣೆ ಮಾಡಲಾಗಿದೆ. ಅದಾದ ಬಳಿಕ ಇವತ್ತು (ಜೂನ್ 04) ಮಾಜಿ ಸಚಿವ ಎಂಟಿಬಿ ನಾಗರಾಜ್ ಅವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಲು ಸಿಎಂ ಅಧಿಕೃತ ನಿವಾಸ ಕಾವೇರಿಗೆ ಆಗಮಿಸಿದ್ದರು. ಆದರೆ ಸಿಎಂ ಸಭೆಗಳಲ್ಲಿ ಬ್ಯೂಸಿ ಆಗಿದ್ದರಿಂದ ಭೇಟಿ ಮಾಡದೆ ಹಿಂದಿರುಗಿದ್ದಾರೆ.
'ನಾವು ರಾಜೀನಾಮೆ ಕೊಡದಿದ್ದರೆ ರಾಜ್ಯದಲ್ಲಿ 50 ಸಾವಿರ ಜನರು ಸಾಯುತ್ತಿದ್ದರು'
ತ್ಯಾಗಕ್ಕೆ ಬೆಲೆ ಸಿಗಲಿದೆ
ತ್ಯಾಗಕ್ಕೆ ಬೆಲೆ ಸಿಗುವ ಸಮಯ ಬಂದಾಗ ಸಿಗುತ್ತದೆ, ಅದಕ್ಕೆ ಕಾದು ನೋಡಬೇಕು ಎಂದು ಸಿಎಂ ಭೇಟಿ ಬಳಿಕ ಎಂಟಿಬಿ ನಾಗರಾಜ್ ಹೇಳಿದ್ದಾರೆ. ಸಿಎಂ ಅಧಿಕೃತ ನಿವಾಸ ಕಾವೇರಿ ಬಳಿ ಮಾಜಿ ಸಚಿವ ಎಂಟಿಬಿ ನಾಗರಾಜ್ ಮಾತನಾಡಿದ್ದಾರೆ. ಶೇಕಡಾ ನೂರರಷ್ಟು ಇನ್ನೂ ಕಾಯುವ ತಾಳ್ಮೆ ಇದೆ. ವಿಧಾನಸಭೆಗೆ ಜನರಲ್ ಎಲೆಕ್ಷನ್ ಬೇಕಾದರೂ ಬರಲಿ, ಅದಕ್ಕೂ ಬೇಕಾದರೂ ಒಂದು ಸಲ ನಿಂತುಬಿಡೋಣ. ಯಡಿಯೂರಪ್ಪ ಕೊಟ್ಟ ಮಾತು, ಭರವಸೆ ಈಡೇರಿಸಿದ್ದಾರೆ. ಉಪ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಕೊಟ್ಟಿದ್ದಾರೆ, ನಾವು ಸೋತಿದ್ದೇವೆ. ಕೆಲವು ಕಾರಣಗಳಿಂದ ನಾನು ಸೋತಿದ್ದೇನೆ, ಇಲ್ಲದಿದ್ದರೆ ನಾನು ಯಾಕೆ ಸೋಲುತ್ತಿದ್ದೆ? ಎಂದಿದ್ದಾರೆ.
ಬಚ್ಚೇಗೌಡ ಸೋಲಿಸಿದ್ದು
ಎಂಟಿಬಿಯನ್ನು ಸೋಲಿಸಬೇಕು ಅಂತಾನೇ ಸಿದ್ದರಾಮಯ್ಯ ನಮ್ಮ ಜಾತಿಯವರನ್ನೇ ತಂದು ನಿಲ್ಲಿಸಿದ್ದರು. ಡಿ.ಕೆ. ಶಿವಕುಮಾರ್, ಕುಮಾರಸ್ವಾಮಿ ಎಲ್ಲರೂ ನನ್ನನ್ನು ಸೋಲಿಸಲು ಪ್ರಯತ್ನ ಪಟ್ಟಿದ್ದಾರೆ. ಇಲ್ಲಿ ಸಂಸದ ಬಚ್ಚೇಗೌಡರು ಮತ್ತು ಅವರ ಮಗ ಯಡಿಯೂರಪ್ಪ ಅವರೊಂದಿಗೆ ಒಪ್ಪಿಕೊಂಡು ಹೋಗಿ ಕೊನೆಗೆ ಉಲ್ಟಾ ಹೊಡೆದರು.
ಅಖಾಡಕ್ಕಿಳಿದ ಡಿಕೆಶಿ; ಹೊಸಕೋಟೆಯಲ್ಲೊಂದು ಬ್ರೇಕಿಂಗ್ ನ್ಯೂಸ್!
ಸೋಲಿಸಿದ್ದು ಬಿಜೆಪಿಯವರಲ್ಲ, ಬಚ್ಚೇಗೌಡ ಮತ್ತು ಅವರ ಮಗ. ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಅಂತಾ ಹೇಳಿದ್ದೇನೆ, ಪಕ್ಷ ಏನು ಮಾಡುತ್ತದೆಯೊ ನೋಡೋಣ. ರಾಜಕಾರಣದಲ್ಲಿ ಸೋಲು, ಗೆಲುವು, ಅಧಿಕಾರ ಎಲ್ಲಾ ಸಾಮಾನ್ಯ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.
ಕಾಯ್ದು ಮುಂದಿನ ತೀರ್ಮಾನ
ಮುಂದೆ ಏನಾಗುತ್ತದೆ ಎಂಬುದನ್ನು ನೋಡಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಹಿಂದೆ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ವಿಧಾನ ಪರಿಷತ್ ಪ್ರವೇಶಿಸುವುದು ಹಣೆಬರಹದಲ್ಲಿ ಬರೆದಿದ್ದರೆ ಆಗುತ್ತದೆ, ಇಲ್ಲದಿದ್ದರೆ ಆಗಲ್ಲ. ಹಣೆ ಬರೆಹದಲ್ಲಿ ಬರೆದಿರಬೇಕು, ದೇವರ ಅನುಗ್ರಹ ಜೊತೆಗೆ ಪಕ್ಷದ ಮುಖಂಡರ ಆಶೀರ್ವಾದ ಇದ್ದಲ್ಲಿ ಮಾತ್ರ ಎಲ್ಲವೂ ಸಿಗುತ್ತದೆ. ಏನಾಗುತ್ತದೆ ಅಂತಾ ಮುಂದೆ ನೋಡೋಣ. ಬಿಜೆಪಿಯವರು ಸೋಲಿಸಿದ್ದಾರೆ ಅಂತಾ ನಾನು ಎಲ್ಲೂ ಹೇಳಿಲ್ಲ. ಏನೇನು ಆಗುತ್ತದೆಯೋ ಆಗಲಿ ಎಂದು ಎಂಟಿಬಿ ನಾಗರಾಜ್ ಹೇಳಿದ್ದಾರೆ.