Breaking; ಬೆಂಗಳೂರಿನ ಆರ್. ಆರ್. ನಗರದಲ್ಲಿ ಗುಡ್ಡ ಕುಸಿತ, ಆತಂಕ
ಬೆಂಗಳೂರು, ಸೆಪ್ಟೆಂಬರ್ 09: ಬೆಂಗಳೂರು ನಗರದಲ್ಲಿ ಸುರಿಯುತ್ತಿರುವ ಮಳೆಯ ನಡುವೆಯೇ ರಾಜರಾಜೇಶ್ವರಿ ನಗರಲ್ಲಿ ಗುಡ್ಡ ಕುಸಿತವಾಗಿದೆ. ಯಾವುದೇ ಹಾನಿಯಾಗದಿದ್ದರೂ ಅಕ್ಕಪಕ್ಕದ ಮನೆಗಳ ನಿವಾಸಿಗಳು ಆತಂಕಗೊಂಡಿದ್ದಾರೆ.
ರಾಜರಾಜೇಶ್ವರಿ ನಗರದ ಗಿರಿಧಾಮ ಲೇಔಟ್ನಲ್ಲಿ ಗುಡ್ಡ ಕುಸಿದಿದೆ. ಸುಮಾರು 15 ದೊಡ್ಡ ಕಲ್ಲುಗಳು ಕೆಳಕ್ಕೆ ಜಾರಿವೆ. ದೊಡ್ಡ ಸದ್ದು ಕೇಳಿಸಿದ್ದು, ಜನರು ಹೊರಗೆ ಬಂದು ನೋಡಿದಾಗ ಗುಡ್ಡ ಕುಸಿದಿತ್ತು.
Recommended Video
ಈ ಘಟನೆ ಕುರಿತು ಸ್ಥಳೀಯ ನಿವಾಸಿಗಳು ತಕ್ಷಣ ಬಿಬಿಎಂಪಿ, ಬೆಸ್ಕಾಂ ಮತ್ತು ಪೊಲೀಸರಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿತ್ರಗಳನ್ನು ತೆಗೆದುಕೊಂಡು ಹೊರಟು ಹೋದರು.

ಸ್ಥಳೀಯ ನಿವಾಸಿ ಕಿಶೋರ್ ಮಾತನಾಡಿ, "ಬಿಬಿಎಂಪಿ ಅಧಿಕಾರಿಗಳು ಘಟನೆ ಬಗ್ಗೆ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ನಮ್ಮಲ್ಲಿ ಇನ್ನೂ ಭಯವಿದೆ" ಎಂದು ಹೇಳಿದರು.
ಮೂರು ವರ್ಷದ ಹಿಂದೆ ಗಿರಿಧಾಮ ಲೇಔಟ್ನ ಗುಡ್ಡದಲ್ಲಿ ಹೀಗೆ ಭೂ ಕುಸಿತವಾಗಿತ್ತು. ಆಗಲೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ಬಳಿಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ದೂರಿದ್ದಾರೆ.
ಘಟನೆ ಬಗ್ಗೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದು, "ಭೂ ಕುಸಿತದ ಕುರಿತು ಬಂದಿರುವ ದೂರುಗಳ ಬಗ್ಗೆ ತಕ್ಷಣ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನಾವು ಪರಿಸ್ಥಿತಿ ಅವಲೋಕಿಸಿದ್ದೇವೆ. ಘಟನೆಯಿಂದ ಜೀವ ಹಾನಿಯಾಗಿಲ್ಲ, ಯಾವುದೇ ಅನಾಹುತವಾಗಿಲ್ಲ. ಆದರೂ ನಾವು ಪರಿಶೀಲನೆ ನಡೆಸುತ್ತೇವೆ" ಎಂದು ಹೇಳಿದ್ದಾರೆ.
ಆರ್. ಆರ್. ನಗರ ವಿಭಾಗದ ಬಿಬಿಎಂಪಿ ಜಂಟಿ ಆಯುಕ್ತ ನಾಗರಾಜು ಸಿದ್ದಪ್ಪ ಮಾಧ್ಯಮಗಳ ಜೊತೆ ಮಾತನಾಡಿ, "ಭೂ ಕುಸಿತ ಆದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ" ಎಂದು ತಿಳಿಸಿದ್ದಾರೆ.
"ಪ್ರಾಥಮಿಕ ವರದಿ ಅನ್ವಯ ಭೂ ಕುಸಿತ ಉಂಟಾಗಿ ಕೆಲವು ಬಂಡೆಗಳು ಜಾರಿ ಬಂದಿವೆ. ಗುಡ್ಡದ ಸುತ್ತಲೂ ಮನೆಗಳಿವೆ. ದೊಡ್ಡ ಪ್ರಮಾಣದಲ್ಲಿ ಭೂ ಕುಸಿತವಾಗುವ ಸಾಧ್ಯತೆ ಇದ್ದರೆ ಅಕ್ಕಪಕ್ಕದ ನಿವಾಸಿಗಳನ್ನು ಸ್ಥಳಾಂತರ ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಕಂದಾಯ ಇಲಾಖೆ ಅಧಿಕಾರಿಗಳು, ತಜ್ಞರ ಜೊತೆ ಘಟನೆ ಕುರಿತು ಚರ್ಚಿಸಿದ್ದು, ಅಭಿಪ್ರಾಯ ಕೇಳಿದ್ದೇವೆ" ಎಂದು ವಿವರಣೆ ನೀಡಿದ್ದಾರೆ.
ಸ್ಥಳವನ್ನು ಪರಿಶೀಲನೆ ನಡೆಸಿದ ಬಳಿಕ ಬಿಬಿಎಂಪಿ ಅಧಿಕಾರಿಗಳು ಮುಂದಿನ ಕ್ರಮದ ಬಗ್ಗೆ ತೀರ್ಮಾನ ಕೈಗೊಳ್ಳಿ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಪತ್ರವನ್ನು ಬರೆದಿದ್ದಾರೆ.












Click it and Unblock the Notifications