ಭೂ ಇಕ್ಕಟ್ಟಿನಲ್ಲಿ ದಿನೇಶ್ ಗುಂಡೂರಾವ್ : ವಾದ ಪ್ರತಿವಾದ
ಬೆಂಗಳೂರು, ನ. 12: ತಮ್ಮ ಮೇಲೆ ಬಂದಿರುವ ಭೂ ಒತ್ತುವರಿ ಆರೋಪ ಕುರಿತು ಸಚಿವ ದಿನೇಶ ಗುಂಡೂರಾವ್ ಅವರು ಟ್ವೀಟ್ ಮೇಲೆ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.

ನಮ್ಮ ಹಿಡಿತದಲ್ಲಿದ್ದ ಭೂಮಿಯನ್ನು ಸರ್ಕಾರ ತನ್ನದು ಎಂದು ಹೇಳಿಕೊಂಡಾಗ ನಾವು ಪ್ರಕರಣ ದಾಖಲಿಸಿದ್ದೆವು. 47 ಎಕರೆಯಷ್ಟು ಭೂಮಿ ನಮ್ಮದೆಂಬ ವಾದವನ್ನು 2012ರಲ್ಲಿ ನ್ಯಾಯಾಲಯ ಒಪ್ಪಿಕೊಂಡಿತು. ಆಗ ನಾವು ಸರ್ವೆ ನಡೆಸಲು ಕೋರಿದೆವು. ಸರ್ಕಾರ ಸರ್ವೆ ನಡೆಸಿ ನಮ್ಮ ಭೂಮಿಯ ವ್ಯಾಪ್ತಿಯನ್ನು ಗುರುತಿಸಿತು. ಇದಕ್ಕಾಗಿಯೇ ನಾವು ಮೊದಲಿನಿಂದಲೂ ಕೋರುತ್ತಿದ್ದೆವು.
ನಂತರ ಮತ್ತೆ ಸರ್ಕಾರ ಸಂಪೂರ್ಣ ಭೂಮಿ ತಮ್ಮದು ಎಂದು ವಾದಿಸಿತು. ನಾವು ಮತ್ತೆ ಪ್ರಕರಣ ದಾಖಲಿಸಿದಾಗ ನಮ್ಮ ವಾದವನ್ನು ಸರ್ಕಾರ ಒಪ್ಪಿಕೊಂಡಿತು. ಮತ್ತೆ ಸರ್ವೆ ನಡೆಸಿ ನಮ್ಮ ಭೂಮಿಯನ್ನು ಗುರುತಿಸಲಾಯಿತು. ಈ ಭೂಮಿಯನ್ನು ನಮ್ಮ ತಂದೆ 1983ರಲ್ಲಿ ಖರೀದಿಸಿದ್ದರು. ಆ ಸಂದರ್ಭದಲ್ಲಿ ಭೂಮಿಯು ಕಡಿಮೆ ಬೆಲೆ ಹೊಂದಿತ್ತು. ಸರ್ವೆಯ ಪೋಡಿ ಇನ್ನಷ್ಟೇ ಮಾಡಬೇಕಿದೆ.
ಇದು ಬಿಟ್ಟು ಯಾವುದೇ ಹೆಚ್ಚುವರಿ ಭೂಮಿ ನಮ್ಮದು ಎಂದು ವಾದಿಸಿಲ್ಲ. ನಾವು ಕಾನೂನು ಪಾಲಿಸಿದ್ದರೂ ಈ ಪ್ರಶ್ನೆಯನ್ನು ಏಕೆ ಕೇಳಲಾಗುತ್ತಿದೆ. ಈ ಭೂಮಿ ನಮ್ಮದಲ್ಲ ಎಂದು ನಾವು ಒಪ್ಪಿಕೊಂಡಿದ್ದೇವೆ ಮತ್ತು ಅಲ್ಲಿ ಯಾವುದೇ ರೀತಿಯ ವಾಣಿಜ್ಯ ಚಟುವಟಿಕೆ ನಡೆಸಿಲ್ಲ. ನಮ್ಮ ಭೂಮಿಯ ವ್ಯಾಪ್ತಿಯನ್ನು ಗುರುತಿಸಿದರೆ ನಾವು ಅದನ್ನು ಅಭಿವೃದ್ಧಿಪಡಿಸಬಹುದು. ನಮ್ಮ ಕುಟುಂಬ ಬಯಸುತ್ತಿರುವುದೂ ಇದನ್ನೇ.
ಒನ್ಇಂಡಿಯಾಕ್ಕೆ ದೂರುದಾರ ದೀಪಕ್ ಪ್ರತಿಕ್ರಿಯೆ
ಲೋಕಾಯುಕ್ತರ ಸೂಚನೆಯಂತೆ ತಹಸೀಲ್ದಾರರು ನಡೆಸಿರುವ ಸರ್ವೆಯ ವರದಿಯನ್ನು ಸಲ್ಲಿಸಿದ್ದು, ಅದರಲ್ಲಿ ಸಚಿವ ದಿನೇಶ್ ಗುಂಡೂರಾವ್ ಕುಟುಂಬ 10 ಎಕರೆ 9 ಗುಂಟೆ ಜಮೀನು ಒತ್ತುವರಿ ಮಾಡಿದೆ ಎಂದು ತಿಳಿಸಿದ್ದಾರೆ. ಆದ್ದರಿಂದ ದಿನೇಶ್ ಗುಂಡೂರಾವ್ ಅವರ ಅಪರಾಧ ಸಾಬೀತಾದಂತಾಗಿದೆ. ಅವರನ್ನು ಸಂಪುಟದಿಂದ ಕೈಬಿಡಬೇಕು ಹಾಗೂ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕೆಂದು ಸಮಾಜ ಪರಿವರ್ತನಾ ಸಮುದಾಯದ ಸದಸ್ಯ ಹಾಗೂ ದೂರುದಾರ ನಂ. 2 ದೀಪಕ್ ಆಗ್ರಹಿಸಿದ್ದಾರೆ.
ಬೆಂಗಳೂರು ಉತ್ತರದಲ್ಲಿರುವ ಜಾಲಹೋಬಳಿ ಪ್ರದೇಶದ ನವರತ್ನ ಅಗ್ರಹಾರದಲ್ಲಿ 3 ಮತ್ತು 13ನೇ ಸರ್ವೆ ನಂಬರ್ನಲ್ಲಿ 260 ಎಕರೆಗಿಂತ ಹೆಚ್ಚು ಗೋಮಾಳ ಜಮೀನಿದ್ದು, 160 ಎಕರೆಗಿಂತ ಹೆಚ್ಚು ಭೂಮಿ ಅತಿಕ್ರಮಣಗೊಂಡಿದೆ. ಅದರಲ್ಲಿ 65 ಎಕರೆಯಷ್ಟು ಭೂ ಅತಿಕ್ರಮಣ ದಿನೇಶ್ ಗುಂಡೂರಾವ್ ಕುಟುಂಬದಿಂದಲೇ ನಡೆದಿದೆ ಎಂದು ಆರೋಪಿಸಿದರು.
2006ಕ್ಕಿಂತ ಹಿಂದೆ ಇದ್ದ ತಹಸೀಲ್ದಾರರು ನೀಡಿದ್ದ ವರದಿ ಹಾಗೂ ಎ.ಟಿ. ರಾಮಸ್ವಾಮಿ ಸಮಿತಿ ವರದಿಯಂತೆ ದಿನೇಶ್ ಗುಂಡೂರಾವ್ ಅವರ ಕುಟುಂಬ 65 ಎಕರೆ ಜಮೀನು ಒತ್ತುವರಿ ಮಾಡಿದೆ. ಆದರೆ, ಈ ವರದಿಯನ್ನು ಈಗಿನ ತಹಸೀಲ್ದಾರರು ಕಡೆಗಣಿಸಿದ್ದಾರೆ. ದಿನೇಶ್ ಗುಂಡೂರಾವ್ ವಾದದಂತೆ 47 ಎಕರೆ ಭೂಮಿ ಕೂಡ ಅವರದ್ದಲ್ಲ. ಟೈಟಲ್ ಆಗಿರುವುದು ಅಂದಿನ ವಿಶೇಷ ಜಿಲ್ಲಾಧಿಕಾರಿಗಳು ನಡೆಸಿದ ನ್ಯಾಯಾಲಯದಲ್ಲಿ. ಈ ವಿಶೇಷ ಜಿಲ್ಲಾಧಿಕಾರಿಗಳ ಆದೇಶದ ಆಧಾರದ ಮೇಲೆ ಈಗಿನ ತಹಸೀಲ್ದಾರರು ವರದಿ ನೀಡಿದ್ದಾರೆ. ಆದರೆ, ವಿಶೇಷ ಜಿಲ್ಲಾಧಿಕಾರಿಗಳು ನೀಡಿರುವ ಆದೇಶಗಳನ್ನು ವಜಾಗೊಳಿಸಿ ಹೈಕೋರ್ಟ್ ತೀರ್ಪು ನೀಡಿದೆ. ಅಲ್ಲದೆ, ಅವರ ವಿರುದ್ಧ ತನಿಖೆ ನಡೆಸಲು ಸೂಚಿಸಿದೆ ಎಂದು ದೀಪಕ್ ತಿಳಿಸಿದರು.












Click it and Unblock the Notifications