ಬೆಂಗಳೂರು : ಬಿಲ್ಡರ್ಗಳ ಅಪಹರಣ, ಹತ್ಯೆಯ ಕಾರಣ ಬಹಿರಂಗ
ಬೆಂಗಳೂರು, ಆಗಸ್ಟ್ 06 : ಬೆಂಗಳೂರಿನ ಇಬ್ಬರು ಬಿಲ್ಡರ್ಗಳ ಅಪಹರಣ, ಹತ್ಯೆಗೆ ಹಣವೇ ಕಾರಣವಾಗಿದೆ. ಹೌದು, ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಮೂವರು ಆರೋಪಿಗಳಿಂದ ಹಲವು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.
ಬಿಲ್ಡರ್ಗಳಾದ ಪ್ರಸಾದ್ ಬಾಬು (47), ಬಾಲಾಜಿ (44) ಅಪಹರಣ, ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಸ್, ಮಣಿ ಮತ್ತು ಅನಿಲ್ ಎಂಬ ಆರೋಪಿಗಳನ್ನು ಬಂಧಿಸಲಾಗಿದ್ದು, ಎಲ್ಲರೂ ಪೊಲೀಸರು ವಶದಲ್ಲಿದ್ದಾರೆ.
50 ಲಕ್ಷ ಹಣ : ಸೈಟ್ ಮಾರಾಟಕ್ಕೆ ಸಂಬಂಧಿಸಿದಂತೆ ಪ್ರಸಾದ್ ಬಾಬು ಮತ್ತು ಬಾಲಾಜಿ ಅವರಿಗೆ ಆರೋಪಿ ತೇಜಸ್ 50 ಲಕ್ಷ ಹಣ ಕೊಡಬೇಕಾಗಿತ್ತು. ಹಣವನ್ನು ನೀಡುವಂತೆ ಪ್ರಸಾದ್ ಬಾಬು ಮತ್ತು ಅವರ ಸ್ನೇಹಿತ ಬಾಲಾಜಿ ಪದೇ-ಪದೇ ಪೀಡಿಸುತ್ತಿದ್ದರು.

ಜೂನ್ 27ರಂದು ಬೆಳಗ್ಗೆ 9.30ಕ್ಕೆ ತೇಜಸ್ ಇಬ್ಬರಿಗೂ ಕರೆ ಮಾಡಿ ಜೆ.ಪಿ.ನಗರದ ಕಚೇರಿಗೆ ಬರುವಂತೆ ಸೂಚಿಸಿದ್ದರು. 11 ಗಂಟೆಗೆ ಪ್ರಸಾದ್ ಬಾಬು ಮತ್ತು ಬಾಲಾಜಿ ಕಚೇರಿಗೆ ಆಗಮಿಸಿದರು. ಮಧ್ಯಾಹ್ನ 3.30ರ ತನಕ ಮೂವರು ಅಲ್ಲೇ ಇದ್ದರು.
ಅಂಜನಾಪುರಕ್ಕೆ ಹೋಗಿ ಬರೋಣ, ಹಣ ಅಲ್ಲಿದೆ ಎಂದು ತೇಜಸ್ ಪ್ರಸಾದ್ ಬಾಬು ಮತ್ತು ಬಾಲಾಜಿ ಅವರನ್ನು ಕರೆದುಕೊಂಡು ಹೋಗುತ್ತಾರೆ. ಆದರೆ, ಮಾರ್ಗ ಮಧ್ಯದಲ್ಲಿ ಇತರ ಸಹಚರರ ಸಹಾಯದಿಂದ ಪ್ರಸಾದ್ ಬಾಬು ಮತ್ತು ಬಾಲಾಜಿಯನ್ನು ಅಪಹಣ ಮಾಡಿ ತಲಘಟ್ಟಪುರದ ತೋಟದ ಮನೆಗೆ ಕರೆದುಕೊಂಡು ಹೋಗುತ್ತಾರೆ.
ತೋಟದ ಮನೆಯಲ್ಲಿ ಪ್ರಸಾದ್ ಬಾಬು ಮತ್ತು ಬಾಲಾಜಿಗೆ ಸುಮಾರು 2 ಗಂಟೆಗಳ ಕಾಲ ಎಲ್ಲರೂ ಥಳಿಸುತ್ತಾರೆ, ವಿಕೃತ ಹಿಂಸೆ ನೀಡುತ್ತಾರೆ, ಬಳಿಕ ಅವರನ್ನು ಹತ್ಯೆ ಮಾಡುತ್ತಾರೆ. ರಾತ್ರಿ 7.30ರ ಸುಮಾರಿಗೆ ಹಾರೋಹಳ್ಳಿ ಬಳಿಗೆ ಅವರ ಮೃತದೇಹವನ್ನು ತೆಗೆದುಕೊಂಡು ಬರುತ್ತಾರೆ.
ಬಳಿಕ ಕತ್ತಲಾದ ಮೇಲೆ ಶವಗಳನ್ನು ಪೆಟ್ರೋಲ್ ಹಾಕಿ ಸುಡುತ್ತಾರೆ. ಆರೋಪಿ ಅನಿಲ್ ಶವಗಳನ್ನು ಸುಡಲು ಸುಮಾರು 20 ಲೀಟರ್ ಪೆಟ್ರೋಲ್ ತಂದಿರುತ್ತಾರೆ. ಜೆ.ಪಿ.ನಗರದಿಂದ ಜೆಸಿಬಿ ತರಿಸುತ್ತಾರೆ. ಶವಗಳನ್ನು ಸುಟ್ಟ ಬಳಿಕ ಅವಶೇಷಗಳನ್ನು ಹೂತು ಹಾಕುತ್ತಾರೆ.
ಆ.5ರ ಭಾನುವಾರ ಪೊಲೀಸರು ಆರೋಪಿಗಳನ್ನು ಸ್ಥಳಕ್ಕೆ ಕರೆದುಕೊಂಡು ಹೋಗಿ ಮಹಜರ್ ನಡೆಸಿದರು. ಶವಗಳನ್ನು ಮೂಳೆಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ.












Click it and Unblock the Notifications