ಸ್ವಚ್ಛ ಮತ್ತು ಸುಂದರ ಬೆಂಗಳೂರಿನ ಈ ಅಂಡರ್ ಪಾಸ್!
ಬೆಂಗಳೂರು ಜೂ.27: ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ನೀಗಿಸಿ ಸವಾರರಿಗೆ ನೆರವಾಗುವ ನಿಟ್ಟಿನಲ್ಲಿ ಮಹಾದೇವಪುರ ವಲಯ ವ್ಯಾಪ್ತಿಯ ದೊಡ್ಡಾನೆಕ್ಕುಂದಿ ವಾರ್ಡ್ ವ್ಯಾಪ್ತಿಯಲ್ಲಿ ಕುಂದಲಹಳ್ಳಿ ಜಂಕ್ಷನ್ ರಸ್ತೆ ಅಂಡರ್ಪಾಸ್ ಕಾಮಗಾರಿ ಪೂರ್ಣಗೊಂಡಿದ್ದು, ಬಣ್ಣಗಳಿಂದ ಕಂಗೊಳಿಸುತ್ತಿದೆ.
ಸುಮಾರು ನಾಲ್ಕೈದು ವರ್ಷಗಳಿಂದ ಕುಂಟುತ್ತಾ ಸಾಗುತ್ತಿದ್ದ ಕಾಮಗಾರಿಗೆ ಕೊನೆಗೂ ಪೂರ್ಣಗೊಂಡಿದೆ. ಬೆಂಗಳೂರಿನಲ್ಲಿ ಪ್ರಮುಖ ಕಾರಿಡಾರ್ಗಳಲ್ಲಿ ಸುಮಾರು 600ಕ್ಕೂ ಅಧಿಕ ಜಂಕ್ಷನ್ಗಳಿವೆ. ಜನಸಂಖ್ಯೆ ಹೆಚ್ಚಿದಂತೆ ವಾಹನಗಳ ಸಂಖ್ಯೆ ನಂತರ ಸಂಚಾರ ದಟ್ಟಣೆ ಹಾಗೂ ಇನ್ನಿತರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅದರ ನಿವಾರಣೆಗಾಗಿ ಬಿಬಿಎಂಪಿ 20ಕೋಟಿ ವೆಚ್ಚದಲ್ಲಿ ಕುಂದಲಹಳ್ಳಿ ರಸ್ತೆ ಅಂಡರ್ಪಾಸ್ (ಕೆಳಸೇತುವೆ) ನಿರ್ಮಿಸಿದೆ.
ಹಳೆ ವಿಮಾನ ನಿಲ್ದಾಣ ರಸ್ತೆಯ ಕುಂದಲಹಳ್ಳಿ ಗೇಟ್ ಜಂಕ್ಷನ್ ಬೆಂಗಳೂರು ಕೇಂದ್ರ ಭಾಗ ಮತ್ತು ಪೂರ್ವ ಭಾಗ ಸಂಪರ್ಕಿಸುತ್ತದೆ. ಮಾಹಿತಿ ತಂತ್ರಜ್ಞಾನ ಪ್ರದೇಶ (ಐಟಿಪಿಎಲ್) ವೈಟ್ ಫಿಲ್ಡ್, ವರ್ತೂರು ಮತ್ತು ಹೊರವರ್ತುಲ ಪ್ರದೇಶ ಹಾಗೂಇನ್ನಿತರ ಪ್ರದೇಶಗಳಿಗೆ ಸಂಚರಿಸುವ ವಾಹನ ಸವಾರರಿಗೆ ಈ ಅಂಡರ್ ಪಾಸ್ ಸಹಕಾರಿಯಾಗಿದೆ.
ಸವಾರರ ಸಮಯ ಉಳಿತಾಯ
"ಕುಂದಲಹಳ್ಳಿ, ಮಾರತ್ತಹಳ್ಳಿ, ವರ್ತೂರು ಭಾಗ ಸುತ್ತಮುತ್ತ ಸಾಕಷ್ಟು ಕಾರ್ಖಾನೆಗಳು, ಐಟಿ ಕಂಪನಿಗಳು ಇವೆ. ಇಲ್ಲಿಗೆ ಸಾಕಷ್ಟು ಉದ್ಯೋಗಿಗಳು ನಿತ್ಯ ಸಂಚರಿಸುತ್ತಾರೆ. ಆದರೆ ಅವರಿಗೆ ಕುಂದಲಹಳ್ಳಿ ಜಂಕ್ಷನ್ನಲ್ಲಿ ಸಾಗುವುದು ತ್ರಾಸದಾಯಕವಾಗಿತ್ತು. ಸಿಗ್ನಲ್ ಹೆಚ್ಚಿರುವ ಇರುವ ಹಿನ್ನೆಲೆ ಪ್ರತಿ ಸಿಗ್ನಲ್ನಲ್ಲೂ 2-3 ನಿಮಿಷ ಕಾಯಬೇಕಿತ್ತು. ಇಲ್ಲಿ ವ್ಯವಸ್ಥಿತ ರಸ್ತೆ ಅಂಡರ್ ಪಾಸ್ ಆಗಿದ್ದರಿಂದ ಸಂಚಾರ ಸುಗಮವಾಗಿದೆ. ಅಲ್ಲದೇ ಸಮಯ ಉಳಿತಾಯವಾಗುವ ಜತೆಗೆ ವಾಹನ ದಟ್ಟಣೆಯು ಸುಧಾರಿಸಿದೆ. ಕಾಮಗಾರಿ ಆರಂಭವಿದ್ದಾಗಲೂ ಒಂದು ಕಡೆ ರಸ್ತೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು" ಎಂದು ಬಿಬಿಎಂಪಿ ಯೋಜನಾ ವಿಭಾಗದ ಮುಖ್ಯ ಅಭಿಯಂತರ ಲೋಕೇಶ್ ಮಾಹಿತಿ ನೀಡಿದರು.
ಭೂಸ್ವಾಧೀನ ಪ್ರಕ್ರಿಯೆಗೆ 48 ಕೋಟಿ
ಸಂಚಾರ ಸುಗಮಗೊಳಿಸಲು ಬಿಬಿಎಂಪಿ 2018ರ ಜುಲೈ 12ರಂದೇ ಕುಂದಲಹಳ್ಳಿ ಅಂಡರ್ ಪಾಸ್ ಕಾಮಗಾರಿ ಆರಂಭಿಸಿತ್ತು. ಆದರೆ ಭೂಮಿ ಸ್ವಾಧೀನ ಪಡಿಸಿಕೊಳ್ಳುವ ವಿಚಾರದಲ್ಲಿ ಮಾಲೀಕರಿಗೂ ಸರ್ಕಾರಕ್ಕೂ ತುರ್ತು ಹೊಂದಾಣಿಕೆ ಆಗದ ಕಾರಣ 18 ತಿಂಗಳಲ್ಲಿ ಮುಗಿಯಬೇಕಿದ್ದ ಕೆಲಸ 2022ರಲ್ಲಿ ಪೂರ್ಣಗೊಂಡಿದೆ. ಕಾಮಗಾರಿಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಒಟ್ಟು 48 ಕೋಟಿ ವೆಚ್ಚ ತಗುಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
281ಮೀಟರ್ ಉದ್ದದ ಅಂಡರ್ ಪಾಸ್
ಪ್ರಸ್ತುತ ಕುಂದಲಹಳ್ಳಿ ರಸ್ತೆ ಅಂಡರ್ಪಾಸ್ 281.47ಮೀಟರ್ ಉದ್ದವಿದೆ. ಒಟ್ಟು ನಾಲ್ಕು ಲೇನ್ಗಳ ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮಾರ್ಗದ ಒಟ್ಟು ಅಗಲ 2x7.5ಮೀಟರ್ ಇದ್ದು, 5.50ಮೀಟರ್ ಲಂಬವಾಗಿದೆ. ಅಂಡರ್ ಪಾಸ್ ಒಳಬಾಕ್ಸ್ ಭಾಗದ ಉದ್ದ 50 ಮೀಟರ್ ಇದೆ. ಇದರ ಹೊರತಾಗಿ ಉದ್ದೇಶಿತ ರಸ್ತೆ ಮಾರ್ಗದ ಉದ್ದ ಮಾರತ್ತಹಳ್ಳಿ ಜಂಕ್ಷನ್ ಕಡೆಗೆ 96.26ಮೀಟರ್ ಮತ್ತು ವರ್ತೂರು ಕಡೆಗೆ 165.1ಮೀಟರ್ ಉದ್ದವಿದೆ. ಸರ್ವೀಸ್ ರಸ್ತೆ ಉದ್ದ ಮತ್ತು ಅಗಲ ಸಮಸ್ಯೆ ಉಂಟಾಗಿತ್ತು. ಜತೆಗೆ ಕೊರೊನಾ ಮತ್ತು ಮಳೆ ಕಾರಣದಿಂದ ಕಾಮಗಾರಿ ಪೂರ್ಣಗೊಳ್ಳುವುದು ವಿಳಂಬವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಣ್ಣದಿಂದ ಕಂಗೊಳ್ಳಿಸುತ್ತಿರುವ ಅಂಡರ್ಪಾಸ್
ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಬಿಬಿಎಂಪಿ ನೀಲಿ ಮತ್ತು ಬಿಳಿ ಬಣ್ಣದಿಂದ ಅಂಡರ್ ಪಾಸ್ ಸಿಂಗರಿಸಿದೆ. ಎಲ್ಲ ರಸ್ತೆ ಕೆಳಸೇತುವೆಗಳನ್ನು ಇದೇ ರೀತಿಯೇ ನವೀಕರಿಸಿ ಎನ್ನುವಷ್ಟರ ಮಟ್ಟಿಗೆ ಸವಾರರನ್ನು ಸೆಳೆಯುತ್ತಿದೆ. ಅಂಡರ್ ಪಾಸ್ ಗೋಡೆಗೆ ಕೊಕ್ಕರೆ, ಎಲೆ, ಬಳ್ಳಿ ಹಾಗೂ ಸುಂದರ ಕಲಾಕೃತಿ ಚಿತ್ರಿಸಲಾಗಿದೆ. ಮಹಾದೇವಪುರ ವಲಯ ವ್ಯಾಪ್ತಿಯಲ್ಲಿ ಕೆರೆ ಸಾಕಷ್ಟು ಇವೆ ಕೆರೆ, ಪರಿಸರ, ಪಕ್ಷಿಗಳ ಬಗ್ಗೆ ಇಲ್ಲಿ ಜಾಗೃತಿ ಮೂಡಿಸಲಾಗಿದೆ. ಸಂಚಾರ ದಟ್ಟಣೆಯ ಒತ್ತಡಕ್ಕೆ ಸಿಲುಕಿರುವ ಪ್ರಮಾಣಿಕರಿಗೆ ಮುದ ನೀಡಲು ವಿಶೇಷವಾಗಿ ವಿನ್ಯಾಸಮಾಡಲಾಗಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ಟ್ವೀಟ್ ಮಾಡಿದ್ದಾರೆ.