ಭರತನಾಟ್ಯದಲ್ಲಿ ಮಿಂಚುತ್ತಿರುವ ಅನುಷಾ; ಮಾ. 7 ಕ್ಕೆ ರಂಗಪ್ರವೇಶ
ಬೆಂಗಳೂರು, ಮಾರ್ಚ್ 2: ಭರತನಾಟ್ಯದಲ್ಲಿ ಮಿಂಚುತ್ತಿರುವ ಪ್ರತಿಭೆಯಾದ ಬೆಂಗಳೂರಿನ ಕುಮಾರಿ ಅನುಷಾ ಎಸ್ ರಂಗ ಪ್ರವೇಶಕ್ಕೆ ಸಿದ್ದರಾಗಿದ್ದಾರೆ.
ಇದೇ ಮಾರ್ಚ್ 7 ರಂದು ಬೆಂಗಳೂರಿನ ಜಯಚಾಮರಾಜ ರಸ್ತೆಯಲ್ಲಿರುವ ಎಡಿಆರ್ ರಂಗಮಂದಿರಲ್ಲಿ ಕುಮಾರಿ ಅನುಷಾ ಎಸ್ ರಂಗಪ್ರವೇಶ ಮಾಡುತ್ತಿದ್ದು ವೇದಿಕೆ ಸಿದ್ದವಾಗಿದೆ. ಅಂದು ಸಂಜೆ 6 ಗಂಟೆಗೆ "ಲಯ ಅನುಲಾಸ್ಯ" ಭರತನಾಟ್ಯ ರಂಗಪ್ರವೇಶ ನಡೆಯಲಿದೆ.
ಕಂಪ್ಯೂಟರ್ ಎಂಜಿನಿಯರಿಂಗ್ ಪದವೀಧರೆಯಾಗಿರುವ ಅನುಷಾ ಬಹುಮುಖ ಪ್ರತಿಭೆಯಾಗಿದ್ದಾರೆ. ತಮ್ಮ ತಾಂತ್ರಿಕ ಶಿಕ್ಷಣದ ಜೊತೆ ಭರತನಾಟ್ಯ ಗುರುಗಳಾದ ವಿಧೂಷಿ ಅರ್ಚನಾ ಶಾಸ್ತ್ರೀ ಅವರ ನೆರಳಿನಲ್ಲಿ ಆರನೇ ವಯಸ್ಸಿನಿಂದ ಭರತನಾಟ್ಯ ಅಭ್ಯಸಿಸಿ ಮಿಂಚುತ್ತಿದ್ದಾರೆ.
ಅನುಷಾ ಭರತನಾಟ್ಯದ ಜೊತೆ ಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯಮಟ್ಟದ ಅಬ್ಯಾಕಸ್ ಸ್ಪರ್ದೆಯಲ್ಲಿ ಸ್ವರ್ಣ ಪದಕ ಪಡೆದುಕೊಂಡಿರುವುದಲ್ಲದೇ, ಸಂಸ್ಕೃತ ಹಿಂದಿ ಭಾಷಾ ಉನ್ನತ ಪರೀಕ್ಷೆಯನ್ನು ತೇರ್ಗಡೆ ಹೊಂದಿದ್ದಾರೆ. ವ್ಯಂಗ್ಯಚಿತ್ರ ರಚನೆಯಲ್ಲೂ ಅನುಷಾ ಎತ್ತಿದ ಕೈ.
ಪೋಷಕರಾದ ಆಶಾ ಮತ್ತು ಸೋಮಶೇಖರ್ ಅವರು ಕುಮಾರಿ ಅನುಷಾಳ ಪ್ರತಿಭೆಗೆ ನಿರಂತರವಾಗಿ ನೀರುಣಿಸುತ್ತಾ ಬಂದಿದ್ದಾರೆ. ಅನುಷಾಳ ಭರತನಾಟ್ಯ ಕಲಾ ಸೇವೆಗೆ ಅನೇಕ ಸನ್ಮಾನ ಪ್ರತಿಭೆಗಳು ಒಲಿದು ಬಂದಿವೆ. ಅದರಲ್ಲಿ ವಿಶ್ವಕಲಾರತ್ನ ಪ್ರಶಸ್ತಿ ಸ್ಮರಣೀಯವಾದ್ದು ಎನ್ನುತ್ತಾರೆ ಅನುಷಾ.