ದೇವೇಗೌಡರ ಕುಟುಂಬದಿಂದ ಚುನಾವಣೆಗೆ ಇಳಿಯೋದು ಇವರಿಬ್ಬರೆ
ಬೆಂಗಳೂರು, ಡಿಸೆಂಬರ್ 02 : ದೇವೇಗೌಡ ಅವರ ಕುಟುಂಬದಿಂದ ಯಾರ್ಯಾರು ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬುದು ರಾಜ್ಯದ ಪಾಲಿಗೆ ಸದ್ಯದ ಮಿಲಿಯನ್ ಡಾಲರ್ ಪ್ರಶ್ನೆ. ಆದರೆ ಆ ಪ್ರಶ್ನೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಉತ್ತರ ನೀಡಿದ್ದಾರೆ.
ಈ ಬಾರಿ ಚುನಾವಣೆಗೆ ದೇವೇಗೌಡ ಕುಟುಂಬದಿಂದ ಇಬ್ಬರು ಮಾತ್ರವೇ ಕಣಕ್ಕಿಳಿಯಲಿದ್ದಾರಂತೆ. ಕುಮಾರಸ್ವಾಮಿ ಮತ್ತು ರೇವಣ್ಣ ಅವರು ಬಿಟ್ಟು ಕುಟುಂಬದ ಇನ್ಯಾರೂ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟಪಡಿಸಿದ್ದಾರೆ.

ನಗರದ ಜೆಡಿಎಸ್ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಷಯ ಬಹಿರಂಗ ಪಡಿಸಿದರು. ಪ್ರಜ್ವಲ್ ರೇವಣ್ಣ ಅವರಿಗೆ ಟಿಕೆಟ್ ನೀಡುವುದಿಲ್ಲ ಎಂದು ಅವರು ಕಡಾಕಂಡಿತವಾಗಿ ಹೇಳಿದರು. ಆದರೆ ಅನಿತಾ ಕುಮಾರಸ್ವಾಮಿ ಅವರು ಚನ್ನಪಟ್ಟಣದಿಂದ ಸ್ಪರ್ಧಿಸುವ ಬಗ್ಗೆ ಇನ್ನೂ ಅಂತಿಮ ನಿರ್ಧಾರವಾಗಿಲ್ಲ ಎಂದರು.
ಮಗ ನಿಖಿಲ್ ಕುಮಾರಸ್ವಾಮಿ ಚುನಾವಣೆಗೆ ನಿಲ್ಲುವುದಿಲ್ಲ ಎಂದ ಅವರು, ನಿಖಿಲ್ ಗೆ ಪಕ್ಷದ ಯಾವುದೇ ಹುದ್ದೆ ಅಥವಾ ಜವಾಬ್ದಾರಿ ನೀಡುವುದಿಲ್ಲ ಎಂದು ಹೇಳಿದರು. ಆದರೆ ನಿಖಿಲ್ ಅವರು ಚುನಾವಣಾ ಪ್ರಚಾರದಲ್ಲಿ ಮಾತ್ರ ಭಾಗವಹಿಸಲಿದ್ದಾರೆ ಎಂಬ ಮಾಹಿತಿ ನೀಡಿದರು.
ಇನ್ನು ಸುದ್ದಿಗೋಷ್ಠಿಯಲ್ಲಿ ಸಿ.ಎಂ ಸಿದ್ದರಾಮಯ್ಯ ಅವರ ಮೇಲೆ ವಾಗ್ದಾಳಿ ನಡೆಸಿದ ಅವರು, ಜೆಡಿಎಸ್ ಗೆದ್ದರೆ ದಲಿತರನ್ನು ಉಪಮುಖ್ಯಮಂತ್ರಿ ಮಾಡುವುದಾಗಿ ಹೇಳಿದ್ದೇವೆ. ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ ದಲಿತರನ್ನು ಮು.ಮಂತ್ರಿ ಮಾಡಲಿ ನೋಡೋಣ ಎಂದು ಸವಾಲ್ ಎಸೆದರು.
ಸಿದ್ದರಾಮಯ್ಯ ಅವರು ಜೆಡಿಎಸ್ ನಲ್ಲಿದ್ದಾಗ ಮತ್ತು ಪಕ್ಷ ಬಿಟ್ಟು ಹೋದಾಗ ಜೆಡಿಎಸ್ ನಯಕರ ಬಲಿ ತೆಗೆದುಕೊಂಡು ಹೋದರು ಎಂದು ಅವರು ಆರೋಪಿಸಿದರು.












Click it and Unblock the Notifications