'ಯಾರೇ ಕೂಗಾಡಲಿ, ಊರೆ ಹೋರಾಡಲಿ', ಕೂಲ್ ಆಗಿದ್ದಾರೆ ಸಿಎಂ!
ಬೆಂಗಳೂರು, ಜನವರಿ 15: ಇಬ್ಬರು ಪಕ್ಷೇತರ ಶಾಸಕರು ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದಿದ್ದಾರೆ. ಆರು ಕಾಂಗ್ರೆಸ್ ಶಾಸಕರು ಬಿಜೆಪಿಯ ಹೊಸ್ತಿಲಲ್ಲಿದ್ದಾರೆ, ಟಿವಿಗಳಲ್ಲಿ ನಿಮಿಷಕ್ಕೊಂದು ಬ್ರೇಕಿಂಗ್ ಬರುತ್ತಿದೆ ಆದರೆ ಸಿಎಂ ಕುಮಾರಸ್ವಾಮಿ ಮಾತ್ರ ಕೂಲ್ ಆಗಿದ್ದಾರೆ!
ಹೌದು, ರಾಜ್ಯ ರಾಜಕಾರಣದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಸಹ ಕುಮಾರಸ್ವಾಮಿ ಅವರು ಇಂದು ಆರಾಮವಾಗಿ ಮಗನ ಸಿನಿಮಾದ ದೃಶ್ಯಗಳನ್ನು ನೋಡಿ ಎಂಜಾಯ್ ಮಾಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ನಟಿಸಿರುವ 'ಕುರುಕ್ಷೇತ್ರ' ಚಿತ್ರದ ಕೆಲವು ದೃಶ್ಯಗಳನ್ನು ಸಿಎಂ ಕುಮಾರಸ್ವಾಮಿ ಇಂದು ನೋಡಿದ್ದಾರೆ. ಅದೇ ಚಿತ್ರದ ನಿರ್ಮಾಪಕ ಮುನಿರತ್ನ ಸಿಎಂ ಅವರಿಗೆ ಚಿತ್ರದ ಕೆಲವು ದೃಶ್ಯಗಳನ್ನು ತೋರಿಸಿದ್ದಾರೆ.
ಕುರುಕ್ಷೇತ್ರ ಚಿತ್ರಕ್ಕೆ 3ಡಿ ಟಚ್ ನೀಡಲಾಗಿದೆ. ಹಾಗಾಗಿ ಅದನ್ನು ಕುಮಾರಸ್ವಾಮಿ ಅವರಿಗೆ ಮುನಿರತ್ನ ತೋರಿಸಿದ್ದಾರೆ. ಕೂಲ್ ಆಗಿ ಸಿನಿಮಾದ ದೃಶ್ಯಗಳನ್ನು ನೋಡಿ ಸಿಎಂ ಎಂಜಾಯ್ ಮಾಡಿದ್ದಾರೆ.
ಇಬ್ಬರು ಶಾಸಕರು ಬೆಂಬಲ ವಾಪಸ್ ಪಡೆದ ಬಗ್ಗೆ ಕೂಲ್ ಆಗಿಯೇ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ನನಗೆ ಯಾವ ಆತಂಕವೂ ಇಲ್ಲ, ಆ ಇಬ್ಬರು ಶಾಸಕರ ಜವಾಬ್ದಾರಿ ನನ್ನದಲ್ಲ, ನನ್ನ ಸರ್ಕಾರ ನಡೆಯುತ್ತಿರುವುದು ಕಾಂಗ್ರೆಸ್ ಬೆಂಬಲದಿಂದ ಎಂದು ಹೇಳಿದ್ದಾರೆ.
ನಮ್ಮ ಸರ್ಕಾರ ಸುಭದ್ರವಾಗಿದೆ, ಯಾವ ಶಾಸಕರು ರಾಜೀನಾಮೆ ಕೊಡುತ್ತಾರೆ, ಯಾರು ಕೊಡುವುದಿಲ್ಲ ಎಂಬುದು ನನಗೆ ಪೂರ್ಣವಾಗಿ ಗೊತ್ತಿದೆ, ಹಾಗಾಗಿ ನನಗೆ ಯಾವ ಟೆನ್ಷನ್ ಸಹ ಇಲ್ಲ, ಮಾಧ್ಯಮದವರು ತಾವೂ ಟೆನ್ಷನ್ ಆಗಿ, ರಾಜ್ಯದ ಜನರಿಗೂ ಟೆನ್ಷನ್ ನೀಡುತ್ತಿದ್ದಾರೆ ಎಂದು ಹೇಳಿದರು.












Click it and Unblock the Notifications