ಯುಗಾದಿ ಪ್ರಯುಕ್ತ ವಿಶೇಷ ಕೆಎಸ್ಆರ್ಟಿಸಿ ಬಸ್ಸುಗಳು
ಬೆಂಗಳೂರು, ಮಾ. 20 : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮಾರ್ಚ್ 20 ಮತ್ತು 21 ರಂದು ಯುಗಾದಿ ಪ್ರಯುಕ್ತ ವಿಶೇಷ ಬಸ್ಸುಗಳ ವ್ಯವಸ್ಥೆಯನ್ನು ಮಾಡಿದೆ. ಸಂಚಾರಿ ಪೊಲೀಸರು ಮೆಜೆಸ್ಟಿಕ್ ಸುತ್ತಮುತ್ತ ವಾಹನ ನಿಲುಗಡೆಯಲ್ಲಿಯೂ ಕೆಲವು ಬದಲಾವಣೆಗಳನ್ನು ಮಾಡಿದ್ದಾರೆ.
ಮಾ.20ರ ಶುಕ್ರವಾರ 866 ಮತ್ತು ಮಾ.21ರ ಶನಿವಾರ 546 ಹೆಚ್ಚುವರಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದ್ದು ಇವುಗಳು ಬೆಂಗಳೂರಿನ ವಿವಿಧ ಪ್ರದೇಶದಿಂದ ಸಂಚಾರ ನಡೆಸಲಿವೆ. ಸುಗಮ ಸಂಚಾರದ ದೃಷ್ಟಿಯಿಂದ ಶುಕ್ರವಾರ ಮತ್ತು ಶನಿವಾರ ಕೆಲವು ರಸ್ತೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಿ ಸಂಚಾರ ವಿಭಾಗದ ಡಿಸಿಪಿ ಎಸ್.ಗಿರೀಶ್ ಆದೇಶ ಹೊರಡಿಸಿದ್ದಾರೆ. [ಪೀಣ್ಯದ ಬಸವೇಶ್ವರ ನಿಲ್ದಾಣ ಸ್ಥಳಾಂತರ]

ಯಾವ ಬಸ್ಸುಗಳು ಎಲ್ಲಿಂದ ಕಾರ್ಯಾಚರಣೆ : ಮೈಸೂರು, ಕೊಡಗು ಮತ್ತು ಕೇರಳಕ್ಕೆ ತೆರಳುವ ಬಸ್ಸುಗಳು ಮೈಸೂರು ರಸ್ತೆ ನಿಲ್ದಾಣದಿಂದ, ತಮಿಳುನಾಡು ಕಡೆಗೆ ಹೋಗುವ ಬಸ್ಸುಗಳು ಶಾಂತಿನಗರ ನಿಲ್ದಾಣದಿಂದ, ದಾವಣಗೆರೆ ಕಡೆಗೆ ತೆರಳುವ ಬಸ್ಸುಗಳು ಚಿಕ್ಕಲಾಲ್ಬಾಗ್ ನಿಲ್ದಾಣದ ಮೂಲಕ ಸಂಚಾರ ಆರಂಭಿಸಲಿವೆ. [487 ಟಾಟಾ ಬಸ್ ಖರೀದಿ ಮಾಡಲಿದೆ ಸಾರಿಗೆ ಇಲಾಖೆ]
ಉಳಿದಂತೆ ಪೀಣ್ಯದ ಬಸವೇಶ್ವರ ಬಸ್ ನಿಲ್ದಾಣ, ಪೀಣ್ಯ, ವಿಜಯನಗರ ಟಿಟಿಎಂಸಿ, ಗಂಗಾನಗರ, ಮಲ್ಲೇಶ್ವರಂ 18ನೇ ಕ್ರಾಸ್ ಮೂಲಕವೂ ಹಲವು ಬಸ್ಸುಗಳು ಸಂಚಾರ ಆರಂಭಿಸಲಿವೆ. ಮುಂಗಡವಾಗಿ ಬುಕ್ಕಿಂಗ್ ಮಾಡದ ಬಸ್ಸುಗಳು ಮೆಜೆಸ್ಟಿಕ್ನಿಂದ ಸಂಚಾರ ನಡೆಸಲಿವೆ.
ವಾಹನ ನಿಲುಗಡೆ ನಿಷೇಧ : ಮೆಜೆಸ್ಟಿಕ್ಗೆ ಶುಕ್ರವಾರ ಮತ್ತು ಶನಿವಾರ ಹೆಚ್ಚಿನ ಜನರು ಆಗಮಿಸುವುದರಿಂದ ಧನ್ವಂತರಿ ರಸ್ತೆ, ರೈಲು ನಿಲ್ದಾಣ ರಸ್ತೆ, ಟ್ಯಾಂಕ್ ಬಂಡ್ ರಸ್ತೆ, ಪ್ಲಾಟ್ಫಾರಂ ರಸ್ತೆ ಮತ್ತು ಖೋಡೇಸ್ ಜಂಕ್ಷನ್ನಲ್ಲಿ ಖಾಸಗಿ ವಾಹನಗಳ ನಿಲುಗಡೆ ನಿಷೇಧಿಸಲಾಗಿದೆ.












Click it and Unblock the Notifications