ಬೆಂಗಳೂರು ಟು ಜೈಸಲ್ಮೇರ್ ಕೆಸ್ಸಾರ್ಟಿಸಿ ಬಸ್ ರೈಟ್ ರೈಟ್!
ಬೆಂಗಳೂರು, ಜೂನ್ 11: ಇನ್ಮುಂದೆ ರಾಜಸ್ಥಾನದ ಜೈಪುರ ಮತ್ತು ಜೈಸಲ್ಮೇರ್ ನಗರಕ್ಕೆ ಕೆಸ್ಸಾರ್ಟಿಸಿ ಬಸ್ಸಿನಲ್ಲಿ ಹೋಗಬಹುದು. ಹೌದು ಬೆಂಗಳೂರಿನಿಂದ ಹೊರಟು ದೇಶದ ಪಶ್ಚಿಮ ಭಾಗದಲ್ಲಿರುವ ಜೈಸಲ್ಮೇರ್ ನಗರಕ್ಕೆ ರಾಜ್ಯ ಕೆಸ್ಸಾರ್ಟಿಸಿ ಬಸ್ ರೌಂಡ್ಸ್ ಹೊಡೆಯಲು ಸಿದ್ಧತೆ ನಡೆಸಿದೆ.
ಅಂದಹಾಗೆ ಬೆಂಗಳೂರಿನಿಂದ ಜೈಪುರಕ್ಕೆ ಬಸ್ ಪ್ರಯಾಣ 2,000 ಕಿಮೀ ದೂರದ್ದಾಗಿದೆ. ಇನ್ನು ಬೆಂಗಳೂರಿನಿಂದ ಜೈಸಲ್ಮೇರ್ ನಗರಕ್ಕೆ 2,025 ಕಿಮೀ ಅಂತರವಿದೆ. ಸುಮಾರು 40 ಗಂಟೆಗಳ ಪ್ರಯಾಣ. ಈ ಎರಡೂ ಬಸ್ ಸಂಚಾರಗಳು ಕೈಗೂಡಿದರೆ ದೇಶದಲ್ಲಿ ಅತಿ ಹೆಚ್ಚು ದೂರ ಕ್ರಮಿಸುವ ಬಸ್ ಸಂಚಾರ ವ್ಯವಸ್ಥೆ ಇದಾಗಲಿದೆ. ಈ ಸಂಬಂಧ ಗುಜರಾತ್ ಮತ್ತು ರಾಜಸ್ತಾನ ರಾಜ್ಯಗಳ ಜತೆ ಒಪ್ಪಂದವಾಗಿದೆ.

ಅಷ್ಟೇ ಅಲ್ಲ. ಸೂರತ್, ಅಹಮದಾಬಾದ್, ಜಾಮ್ ನಗರ ಮತ್ತು ಜೋಧಪುರಕ್ಕೂ KSRTC ಬಸ್ಸುಗಳು ಸಂಚರಿಸಲಿವೆ. ಈ ರಾಜ್ಯಗಳ ಜನರು ಬೆಂಗಳೂರಿನೊಂದಿಗೆ ಹೆಚ್ಚು ಸಂಪರ್ಕ ಹೊಂದಿರುವುದರಿಂದ ಈ ಬಸ್ ಸಂಚಾರ ಲಾಭದಾಯಯಕವಾಗಲಿದೆ ಎಂದು ಕೆಎಸ್ಸಾರ್ಟಿಸಿ ಎಂಡಿ ಮಂಜುನಾಥ್ ಪ್ರಸಾದ್ ಆಶಿಸಿದ್ದಾರೆ. (ಖಾಸಗಿ ತಾಣಗಳಲ್ಲಿ ಕೆಎಸ್ಆರ್ಟಿಸಿ ಬುಕ್ಕಿಂಗ್ ಇಲ್ಲ)
ಸದ್ಯಕ್ಕೆ ಬೆಂಗಳೂರು-ಮುಂಬೈ (984 ಕಿಮೀ) ಮತ್ತು ಬೆಂಗಳೂರು-ಶಿರಡಿ (1,012 ಕಿಮೀ) ನಡುವಣ ಬಸ್ ಮಾರ್ಗವೇ ಕೆಎಸ್ಸಾರ್ಟಿಸಿಯ ಅತಿ ಹೆಚ್ಚು ದೂರದ ಪ್ರಯಾಣವಾಗಿದೆ.
ಮಾಜಿ ಪ್ರಧಾನಿ ವಾಜಪೇಯಿ ದೂರಾಲೋಚನೆಯ ಫಲವಾಗಿ ಎನ್ ಡಿಎ ಸಕಕಾರದ ಅವಧಿಯಲ್ಲಿ ಸುವರ್ಣ ಚತುಷ್ಪತ ಯೋಜನೆ ಜಾರಿಗೆ ಬಂದಿದೆ. ಹಾಗಾಗಿ, ಈ ಮಾರ್ಗಗಳಲ್ಲಿ ಬಸ್ ಸಂಚಾರ ಸುಗಮವಾಗಿದೆ. ಜತೆಗೆ, ರೈಲ್ವೆ ಸಂಚಾರವಾಗಲಿ ಅಥವಾ ವಿಮಾನ ವ್ಯವಸ್ಥೆಯಾಗಲಿ ಅನುಕೂಲವಾಗಿಲ್ಲವಾದ್ದರಿಂದ ಬಸ್ಸಿಗೆ ಜೋತು ಬೀಳುತ್ತಿದ್ದಾರೆ. ಇದನ್ನು ಮನಗಂಡು ಖಾಸಗಿ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿರುವುದನ್ನು ಲೆಕ್ಕ ಹಾಕಿದ ಕೆಎಸ್ಸಾರ್ಟಿಸಿ ಇದೀಗ ತನ್ನ ಸಂಚಾರ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳಲು ಮುಂದಾಗಿದೆ.












Click it and Unblock the Notifications