ಯಡಿಯೂರಪ್ಪ ಅವರ ಪಿಎ ಸಂತೋಷ್ ಗೆ ಬಂಧನ ಭೀತಿ
ಬೆಂಗಳೂರು, ಜುಲೈ 17: ವಿಧಾನ ಪರಿಷತ್ನ ವಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ (ಪಿ.ಎ) ವಿನಯ್ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯಾಗಿರುವ ಸಂತೋಷ್ ಇನ್ನೂ ಪತ್ತೆಯಾಗಿಲ್ಲ.
ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಅವರ ಪಿ.ಎ ಸಂತೋಷ್ ಅವರ ಮೊಬೈಲ್ ಟ್ರೇಸ್ ಮಾಡಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಯಡಿಯೂರಪ್ಪ ಅವರ ಧವಳಗಿರಿ ನಿವಾಸದಲ್ಲಿ ಮೊಬೈಲ್ ಸಿಗ್ನಲ್ ಟ್ರೇಸ್ ಆಗಿದೆ. ಆದರೆ, ಈ ಬಗ್ಗೆ ಪೊಲೀಸರು, ಯಡಿಯೂರಪ್ಪ ಅವರ ಮನೆಯವರನ್ನು ಪ್ರಶ್ನಿಸುವ ಗೋಜಿಗೆ ಹೋಗಿಲ್ಲ.
ಸಂತೋಷ್ ಅವರ ತಿಪಟೂರಿನ ನೊಣವಿನಕೆರೆ ಮನೆಗೆ ಭೇಟಿ ನೀಡಿರುವ ಪೊಲೀಸರು, ಪರಿಶೀಲನೆ ನಡೆಸಿ ನೋಟಿಸ್ ಪತ್ರ ಅಂಟಿಸಲಾಗಿದೆ.
ಈ ನಡುವೆ 'ನನ್ನ ಗಂಡನನ್ನು ಹುಡುಕಿಕೊಡಿ' ಎಂದು ಹೈಕೋರ್ಟ್ನಲ್ಲಿ ಕಿಡ್ನಾಪ್ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಪ್ರಶಾಂತ್ ಕುಮಾರ್ ಪತ್ನಿ ಅರ್ಚನಾ ಅವರು ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಪ್ರಶಾಂತ್ ಹಾಗೂ ಸಂತೋಷ್ ಇಬ್ಬರೂ ನಿರೀಕ್ಷಣಾ ಜಾಮೀನು ಪಡೆಯಲು ಶತಪ್ರಯತ್ನ ಪಡುತ್ತಿದ್ದಾರೆ.
ಈಶ್ವರಪ್ಪ ಪಿಎ ವಿನಯ್
ಕೆಎಸ್ ಈಶ್ವರಪ್ಪ ಅವರ ಪಿಎ ವಿನಯ್ ಮೇಲೆ ಇತ್ತೀಚೆಗೆ ಹಲ್ಲೆ ಹಾಗೂ ಕಿಡ್ನಾಪ್ ಯತ್ನ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಎಸ್ ಯಡಿಯೂರಪ್ಪ ಅವರ ಪಿಎ ಸಂತೋಷ್ ಅವರು ಪ್ರಮುಖ ಆರೋಪಿಯಾಗಿದ್ದಾರೆ. ವಿನಯ್ ಅವರ ಹೇಳಿಕೆ ಪಡೆದಿರುವ ಪೊಲೀಸರು, ಸಂತೋಷ್ ಗಾಗಿ ಹುಡುಕಾಟ ನಡೆಸಿದ್ದಾರೆ.
ರೂಪದರ್ಶಿ ಜತೆಗಿನ ಸ್ನೇಹ
ಯಡಿಯೂರಪ್ಪ ಅವರ ಪಿ.ಎ ಸಂತೋಷ್ ಹಾಗೂ ಉತ್ತರ ಕರ್ನಾಟಕದ ರೂಪದರ್ಶಿಯೊಬ್ಬರ ನಡುವಿನ ಗೆಳೆತನಕ್ಕೂ ಮೀರಿದ ಆಪ್ತತೆ, ಸ್ನೇಹ ಸಂಬಂಧ ಬೆಳೆದಿತ್ತು. ಇಬ್ಬರ ನಡುವಿನ ಖಾಸಗಿ ಚಿತ್ರಗಳು, ವಿಡಿಯೋಗಳಿತ್ತು. ಈ ವಿಡಿಯೋವೊಂದು ವಿನಯ್ ಕೈ ಸೇರಿತ್ತು. ಈ ವಿಡಿಯೋ ಹಿಂಪಡೆಯಲು ವಿನಯ್ ಮೇಲೆ ಮೇ 11ರಂದು ಮಹಾಲಕ್ಷ್ಮಿ ಲೇ ಔಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಹಲ್ಲೆ, ಕಿಡ್ನಾಪ್ ಯತ್ನ ನಡೆಸಲಾಗಿತ್ತು.
ರೂಪದರ್ಶಿ ಹೇಳಿಕೆ
ಸಂಘಸಂಸ್ಥೆಯೊಂದರ ಪರ ಕಾರ್ಯಕ್ರಮ ಆಯೋಜನೆ ಸಂಬಂಧ ಸಂತೋಷ್ ಅವರನ್ನು ಭೇಟಿ ಮಾಡಿದ್ದೆ. ಇಬ್ಬರ ನಡುವೆ ಸ್ನೇಹವಿರುವುದು ನಿಜ, ಆದರೆ, ಅದಕ್ಕೂ ಮೀರಿದ ಸಂಬಂಧವಿಲ್ಲ. ಈ ಬಗ್ಗೆ ನಾನು ಸ್ಪಷ್ಟನೆ ನೀಡಿದ್ದೇನೆ. ವಿನಯ್ ಅಪಹರಣ ಪ್ರಕರಣಕ್ಕೂ ನನಗೂ ಸಂಬಂಧವಿಲ್ಲ ಎಂದು ರೂಪದರ್ಶಿ ಹೇಳಿಕೆ ನೀಡಿದ್ದಾರೆ.
ಪ್ರಶಾಂತ್ ಪತ್ನಿಯ ಅಳಲು
ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರ ಆಪ್ತ ಸಹಾಯಕ ವಿನಯ್ ಅವರ ಕಿಡ್ನಾಪ್ ಕೇಸಿನಲ್ಲಿ ಬಂಧನಕ್ಕೊಳಗಾಗುವ ಭೀತಿಯಲ್ಲಿರುವ ಪ್ರಶಾಂತ್ ನನ್ನು ಹುಡುಕಿ ಕೊಡಿ ಎಂದು ಆತನ ಪತ್ನಿ ಅರ್ಚನಾ ಕೋರ್ಟ್ ಮೊರೆ ಹೋಗಿದ್ದಾರೆ.
ಹೈಕೋರ್ಟ್ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ಪೊಲೀಸರು ಈಗಾಗಲೇ ನನ್ನ ಗಂಡನನ್ನು ಬಂಧಿಸಿ, ಬಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.ಪ್ರಶಾಂತ್ ಒಬ್ಬ ರೌಡಿ ಶೀಟರ್. ಆತ 14 ಕ್ರಿಮಿನಲ್ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದಾನೆ.