ಕೆ.ಆರ್ ಮಾರ್ಕೆಟ್ ಪೊಲೀಸರಿಗೆ ಕೊನೆಗೂ ಸಿಕ್ಕಿಬಿತ್ತು 007 ಕಳ್ಳ ಗ್ಯಾಂಗ್
ಬೆಂಗಳೂರು, ಅ. 01: ಅವರು ಟಾರ್ಗೆಟ್ ಮಾಡಿದ ಮನೆ ಅಥವಾ ಅಂಗಡಿಗೆ ಎಷ್ಟೇ ಭದ್ರತೆ ಒದಗಿಸಿದ್ರೂ ಕಳ್ಳತನ ಮಾಡದೇ ಬಿಡಲ್ಲ. ಕಳ್ಳತನ ಮಾಡಿದ ಮಾಡಿದ ಮೇಲೆ 007 ಕೋಡ್ ನಂಬರ್ ಬರೆಯುವ ಚೋರ್ ಗ್ಯಾಂಗ್ ಇದೇ ಮೊದಲ ಭಾರಿಗೆ ಬೆಂಗಳೂರಿಗೆ ಎಂಟ್ರಿ ಕೊಟ್ಟಿದೆ. ಉದ್ಯಮಿ ಹಾಗೂ ವ್ಯಾಪಾರಿಗಳನ್ನು ಟಾರ್ಗೆಟ್ ಮಾಡುವ 007 ಬಾಂಡ್ ಚೋರ್ ಗ್ಯಾಂಗ್ ಬೆಂಗಳೂರಿನಲ್ಲಿ ದೋಚಿ ಪರಾರಿಯಾಗಿತ್ತು. ಕೆ.ಆರ್ ಮಾರ್ಕೆಟ್ ಠಾಣೆ ಪೊಲೀಸರು ಹದಿನೈದು ದಿನಗಳ ಕಾಲ ಕಾರ್ಯಾಚರಣೆ ನಡೆಸಿ ರಾಜಸ್ಥಾನದಲ್ಲಿಯೇ ಈ ಬಾಂಡ್ ಗ್ಯಾಂಗ್ ಹೆಡೆಮುರಿ ಕಟ್ಟಿದ್ದಾರೆ.
ಬೆಂಗಳೂರಿನ ಸಿಟಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯ ಟೆಕ್ಸ್ ಟೈಲ್ಸ್ ಸೇಲ್ಸ್ ಕಾರ್ಪೋರೇಷನ್ ನಲ್ಲಿ ಕಳ್ಳತನ ವಾಗಿತ್ತು. ಆ. 22 ರಂದು ರಾತ್ರಿ ಶೋ ರೂಂಗೆ ನುಗ್ಗಿದ್ದ ಕಳ್ಳರು, ಡ್ರಾದಲ್ಲಿದ್ದ 25. 45 ಲಕ್ಷ ರೂ. ಹಣ ದೋಚಿದ್ದರು. ಬಳಿಕ ಗೋಡೆಗಳ ಮೇಲೆ 007 ಫಿರ್ ಆಯೇಂಗೇ ಅಂತ ಬರೆದು ಪರಾರಿಯಾಗಿದ್ದರು. ಶೋ ರೂಮ್ ಮಾಲೀಕರು ಬಾಗಿಲು ತೆಗೆದು ನೋಡಿದಾಗ ಘಟನೆ ಬೆಳಕಿಗೆ ಬಂದಿತ್ತು. ಕೆ.ಆರ್. ಮಾರ್ಕೆಟ್ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ಸೇರಿ ಸ್ಥಳಕ್ಕೆ ಭೇಟಿ ನೀಡಿದಾಗ ಅಚ್ಚರಿ ಕಾದಿತ್ತು. ಕದಿಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಮಿಗಿಲಾಗಿ ಗೋಡೆ ಮೇಲೆ 007 ಅಂತ ಬರೆದಿದ್ದ ನಂಬರ್ ಜಾಡು ಹಿಡಿದು ತನಿಖೆ ಆರಂಭಿಸಿದ್ದರು.
ರಾಜಸ್ಥಾನದ ಬಿಚ್ಚು ಗ್ಯಾಂಗ್ ಮತ್ತೊಂದು ಹೆಸರು ಬಾಂಡ್ ಗ್ಯಾಂಗ್ : ಉದ್ಯಮಿಗಳನ್ನು , ವ್ಯಾಪಾರಿಗಳನ್ನು ಟಾರ್ಗೆಟ್ ಮಾಡಿ ರಾತ್ರಿ ವೇಳೆ ಸರಣಿ ಕಳವು ಮಾಡಿ ಎಸ್ಕೇಪ್ ಆಗುವ ರಾಜಸ್ಥಾನ ಮೂಲದ ಚೋರ್ ಗ್ಯಾಂಗ್ ಹೆಸರು ಬಿಚ್ಚು ಗ್ಯಾಂಗ್. ಪೊಲೀಸರಿಗೆ ಸವಾಲು ಹಾಕಲು ಈ ಕೋಡ್ ನಂಬರ್ ಬರೆಯುತ್ತಾರೆ ಎಂಬ ಮಾತಿದೆ. ಇರಾನಿ ಗ್ಯಾಂಗ್ ಗಿಂತಲೂ ಖತರ್ ನ್ಯಾಕ್ ಗ್ಯಾಂಗ್ ಎಂದೇ ಪೊಲೀಸ್ ವಲಯದಲ್ಲಿ ಗುರುತಿಸಿಕೊಂಡಿದೆ. ಕಳೆದ ಆ. 22 ರಂದು ಒಂದೇ ರಾತ್ರಿ ಬೆಂಗಳೂರಿನಲ್ಲಿ ಅಂಗಡಿಯ ಶೆಟರ್ ಮತ್ತು ಬೀಗ ಮುರಿದು 25 ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದರು.

ಈ ಕುರಿತು ಕೇಸು ದಾಖಲಿಸಿಕೊಂಡ ಕೆ.ಆರ್. ಮಾರ್ಕೆಟ್ ಠಾಣೆ ಪೊಲೀಸರು, ಬಿಚ್ಚು ಗ್ಯಾಂಗ್ ನ ಜಾಡು ಹಿಡಿದು ರಾಜಸ್ಥಾನಕ್ಕೆ ತೆರಳಿದ್ದಾರೆ. ಅಲ್ಲಿ ಸುಮಾರು ಹದಿನೈದು ದಿನ ಬೀಡು ಬಿಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಸುನೀಲ್, ಭವಾನಿ ಸಿಂಗ್, ಆಶುರಾಮ್ ಗುಜಾರ್ ಕಿಶೋರ್ ಸಿಂಗ್ ಬಂಧಿತ ಆರೋಪಿಗಳು. ರಾಜಸ್ಥಾನದ ಟೊಂಕಾಡ ಗ್ರಾಮದ ಪಾಲಿ ಜಿಲ್ಲೆಯವರು. ಬಂಧಿತರ ಬಳಿ 24 ಲಕ್ಷ ರೂ. ಹಣ ವಶಪಡಿಸಿಕೊಂಡಿದ್ದಾರೆ. ಒಂದು ಕೃತ್ಯ ಎಸಗಿದ ಕೂಡಲೇ ಈ ಬಿಚ್ಚು ಗ್ಯಾಂಗ್ ನ್ನು ಪೊಲೀಸರು ಬಂಧಿಸಿದ್ದರಿಂದ ಆಗಬಹುದಾದ ದೊಡ್ಡ ಅನಾಹುತ ತಪ್ಪಿದೆ. ಒಮ್ಮೆ ಸಿಟಿಗೆ ಎಂಟ್ರಿ ಕೊಟ್ಟರೆ ಸಿಕ್ಕ ಸಿಕ್ಕಲ್ಲಿ ದೋಚಿ ಅಲ್ಲೊಂದು ಕೋಡ್ ವರ್ಡ್ ಬರೆದು ಪರಾರಿಯಾಗುತ್ತಾರೆ. ಪಶ್ಚಿಮ ವಿಭಾಗದ ಪೊಲೀಸರು ಒಂದು ಅಪರಾಧ ಪ್ರಕರಣದಲ್ಲಿ ಬಿಚ್ಚು ಗ್ಯಾಂಗ್ ನ ಎಡೆಮುರಿ ಕಟ್ಟಿ ಜೈಲಿಗೆ ಕಳುಹಿಸಿದ್ದಾರೆ. ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಕುಮಾರಸ್ವಾಮಿ ನೇತೃತ್ವದ ತಂಡ ಈ ಕಾರ್ಯಾಚರಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಒಕ್ಕಲಿಗರ ಸಂಘದ ಮಾಜಿ ಅಧ್ಯಕ್ಷ ವಿರುದ್ಧ ಎಫ್ಐಆರ್ : ಮೆಡಿಕಲ್ ಸೀಟು ಕೊಡಿಸುವುದಾಗಿ ನಂಬಿಸಿ ವಿದ್ಯಾರ್ಥಿಗಳಿಂದ ವಸೂಲಿ ಮಾಡಿದ ಹಣ ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡ ಆರೋಪದಡಿ ಒಕ್ಕಲಿಗರ ಸಂಘದ ಮಾಜಿ ಅಧ್ಯಕಷ ಅಪ್ಪಾಜಿಗೌಡ ಸೇರಿ ಮೂವರ ವಿರುದ್ಧ ಶಂಕರ್ ಪುರ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಮೆಡಿಕಲ್ ಸೀಟು ಕೊಡಿಸವುದಾಗಿ ಮೋಸ ಮಾಡಿದ ಅರೋಪ ಸಂಬಂಧ ಕಿಮ್ಸ್ ಸಿಇಓ ಸಿದ್ದರಾಮಯ್ಯ ಅವರು ದೂರು ನೀಡಿದ್ದಾರೆ.

ಒಕ್ಕಲಿಗರ ಸಂಘದ ಮಾಜಿ ಪದಾಧಿಕಾರಿಗಳಾದ ಕಾಳೇಗೌಡ, ಅಪ್ಪಾಜಿಗೌಡ, ಮಾಜಿ ನಿರ್ದೇಶಕ ನರೇಂದ್ರ ಬಾಬು ವಿರುದ್ಧ ಆರೋಪ ಕೇಳಿ ಬಂದಿದೆ. ವಿದ್ಯಾರ್ಥಿಗಳಿಂದ ಸುಮಾರು 70 ಲಕ್ಷ ರೂ. ಹಣ ಪಡೆದು ಸ್ವಂತಕ್ಕೆ ಬಳಿಸಿಕೊಂಡಿದ್ದಾರೆ. ಈ ಮೂಲಕ ಕಿಮ್ಸ್ ಸಂಸ್ಥೆಗೆ ವಂಚನೆ ಮಾಡಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ದೂರಿನಲ್ಲಿ ಕೋರಿದ್ದು, ಅದರಂತೆ ಎಫ್ಐಆರ್ ದಾಖಲಾಗಿದೆ. ಅಪ್ಪಾಜಿಗೌಡರ ವಿರುದ್ಧದ ದೂರು ಇದೀಗ ಒಕ್ಕಲಿಗರ ಸಂಘದ ಒಳಗಿನ ರಾಜಕೀಯ ಕೆಲಸೆರಚಾಟಕ್ಕೆ ನಾಂದಿ ಹಾಡಲಿದೆ ಎಂದು ತಿಳಿಸಿದ್ದಾರೆ.
11 ನೇ ಮಹಡಿಯಿಂದ ಬಿದ್ದು ಮಗು ಸಾವು:
Recommended Video
ಆಟವಾಡುತ್ತಿದ್ದ ಮಗು ಹನ್ನೊಂದನೇ ಮಹಡಿಯಿಂದ ಐದನೇ ಮಹಡಿಗೆ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಗನ್ ಸಾವನ್ನಪ್ಪಿದ ಮಗು. ಹಲವು ಮಕ್ಕಳ ಜತೆ 11 ನೇ ಮಹಡಿಯ ಟೆರೇಸ್ ಮೇಲೆ ಆಟವಾಡುತ್ತಿತ್ತು. ತಂದೆ ತಾಯಿ ಯಾರೂ ಸಹ ಮನೆಯಲ್ಲಿ ಇರಲಿಲ್ಲ. ಬನಶಂಕರಿಯ ಮೂರನೇ ಹಂತದಲ್ಲಿರುವ ಶೋಭಾ ಅಪಾರ್ಟ್ ಮೆಂಟ್ ನಲ್ಲಿ ಈ ಅವಘಡ ಸಂಭವಿಸಿದ್ದು, ಮಗು ಸಾವನ್ನಪ್ಪಿದೆ. ರಾಜರಾಜೇಶ್ವರಿ ನಗರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












Click it and Unblock the Notifications