3 ಡಿಸಿಎಂ ಹುದ್ದೆ , ಬಿಜೆಪಿಯಲ್ಲಿ ಉದ್ಯೋಗಾವಕಾಶ: ಶ್ರೀಪಾದ ರೇಣು
ಬೆಂಗಳೂರು, ಆಗಸ್ಟ್ 27: ಬಿಜೆಪಿ ಮೂರು ಡಿಸಿಎಂ ಹುದ್ದೆಯನ್ನು ಸೃಷ್ಟಿಸುವ ಮೂಲಕ ತನ್ನ ಪಕ್ಷದಲ್ಲಿ ಉದ್ಯೋಗಾವಕಾಶವನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರರಾದ ಕೆಂಗಲ್ ಶ್ರೀಪಾದ ರೇಣು ವ್ಯಂಗ್ಯವಾಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಅವರು, ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಸರಕಾರದ ಕರ್ತವ್ಯ. ಅಧಿಕಾರಕ್ಕೆ ಬಂದ ನಂತರ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಭರವಸೆ ನೀಡಿದ್ದ ಬಿಜೆಪಿ, ಈ ರೀತಿಯಲ್ಲಿ ಉದ್ಯೋಗಾವಕಾಶಗಳನ್ನು ಹೆಚ್ಚಿಸಿಕೊಳ್ಳುತ್ತದೆ ಎನ್ನುವುದು ಗೊತ್ತಿರಲಿಲ್ಲಾ. ಬಿ ಎಸ್ ವೈ ನೇತೃತ್ವದ ಬಿಜೆಪಿ ಸರಕಾರ ತನ್ನ ಕಾರ್ಯಕರ್ತರುಗಳಿಗೆ ಉದ್ಯೋಗಾವಕಾಶವನ್ನು ಹೆಚ್ಚಿಸುತ್ತಿರುವುದನ್ನು ನೋಡಿದರೆ, ಈ ಸರಕಾರದ ಕಾರ್ಯಯೋಜನೆ ಸ್ಪಷ್ಟವಾಗುತ್ತದೆ ಎಂದರು.
ರಾಜ್ಯದಲ್ಲಿ ಉದ್ಯೋಗಾವಕಾಶಗಳ ಕೊರತೆ ದಿನೇ ದಿನೇ ಹೆಚ್ಚಾಗುತ್ತಿದೆ. ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ಸಾವಿರಾರು ಜನರು ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಇಂತಹ ಸಮಸ್ಯೆಗಳಿಗೆ ದನಿಯಾಗುವುದನ್ನು ಬಿಟ್ಟು ತನ್ನ ಪಕ್ಷದವರಿಗೆ ಸಾಂವಿಧಾನಿಕವಲ್ಲದ ಹುದ್ದೆಗಳನ್ನು ನೀಡುವತ್ತ ಹೆಚ್ಚಿನ ಗಮನ ಹರಿಸುತ್ತಿರುವುದು ಬಹಳ ವಿಷಾದನೀಯ ಎಂದು ಹೇಳಿದರು. ರಾಜ್ಯ ಸರಕಾರ ತುರ್ತಾಗಿ ಕೈಗಾರಿಕಾ ಸಂಸ್ಥೆಗಳಲ್ಲಿ ಆತ್ಮವಿಶ್ವಾಸ ಬೆಳೆಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಆಗ್ರಹಿಸಿದರು.
ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಂಪುಟ ಸಚಿವರ ಖಾತೆ ಹಂಚಿಕೆಯನ್ನು ಸೋಮವಾರ ರಾತ್ರಿ ಮಾಡಲಾಗಿದೆ. ಗೋವಿಂದ ಕಾರಜೋಳ, ಡಾ. ಅಶ್ವಥನಾರಾಯಣ, ಲಕ್ಷ್ಮಣ ಸವದಿ ಮೂವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೇರಿಸಲಾಗಿದೆ.