'ಕೊಡಗಿಗೆ ನಮ್ಮೆಲ್ಲರ ಋಣ ಇದೆ, ಪ್ರಕೃತಿ ಮಾತೆ ಮುನಿಸಿಕೊಂಡಿದ್ದಾಳೆ'
ಬೆಂಗಳೂರು, ನವೆಂಬರ್ 14: ಪೀಪಲ್ ಫಾರ್ ಪೀಪಲ್ ತಂಡ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ನಡೆಸುತ್ತಿರುವ ಕೊಡಗಿಗಾಗಿ ರಂಗಸಪ್ತಾಹದ ಮೂರನೇ ದಿನದ ಕಾರ್ಯಕ್ರಮದ ವರದಿ ಇಲ್ಲಿದೆ.
ಹೊಟ್ಟೆ ಬಟ್ಟೆ ಕಟ್ಟಿ ಮನೆಕಟ್ಟಿದ್ದೆವು. ಮನೆ ಕಟ್ಟುವ ಆಸೆಯಿಂದ ಸರಿಯಾಗಿ ಊಟವನ್ನೂ ಮಾಡುತ್ತಿರಲಿಲ್ಲ. ಕೂಲಿಕಾರ್ಮಿಕರಿಗೆ ಕೊಡುವಷ್ಟು ದುಡ್ಡಿಲ್ಲದ ಕಾರಣ ನಾವೇ ಕಷ್ಟಪಟ್ಟು ಮನೆ ಕಟ್ಟಿದ್ದೆವು. ಆದರೆ ಅಂಥಾ ಮನೆ ಈಗ ನಾಶವಾಗಿದೆ. ಬದುಕಿಗೊಂದು ಭರವಸೆಯೇ ಇಲ್ಲವಾಗಿದೆ. ಕೆಲಸವೂ ಇಲ್ಲವಾಗಿದೆ. ಮನೆ ಬಾಡಿಗೆಗೂ ದುಡ್ಡಿಲ್ಲ. ನಾವೆಲ್ಲಾ ಅಕ್ಷರಶಃ ಬೀದಿಪಾಲಾಗಿದ್ದೇವೆ. ನಮಗೆ ಜೀವನ ನಡೆಸಲು ಸಹಕಾರ ನೀಡಿ ಎನ್ನುತ್ತಾ ಗದ್ಗದಿತರಾದರು ಮಡಿಕೇರಿಯ ಕಾಡನಕೊಲ್ಲಿಯಿಂದ ಆಗಮಿಸಿದ್ದ ನಿರಾಶ್ರಿತೆ ಪ್ರೇಮ.
ಪ್ರೇಕ್ಷಕರ ಮನಸೂರೆಗೊಂಡ ಕೊಡಗಿಗಾಗಿ ರಂಗಸಪ್ತಾಹ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ ಶ್ರೀ ಜಯಮೃತ್ಯುಂಜಯ ಸ್ವಾಮಿಗಳು ಮಾತನಾಡಿ, ಕೊಡಗಿನ ಜನರಿಗೆ ಸಹಾಯ ಮಾಡುತ್ತಿರುವ ಪೀಪಲ್ ಫಾರ್ ಪೀಪಲ್ ತಂಡದ ಕಾರ್ಯ ಶ್ಲಾಘನೀಯ. ಕೊಡಗಿಗೆ ನಮ್ಮೆಲ್ಲರ ಋಣ ಇದೆ. ಪ್ರಕೃತಿಯ ಮೇಲಾಗಿರುವ ದೌರ್ಜನ್ಯಕ್ಕೆ ಪ್ರಕೃತಿ ಮಾತೆ ಮುನಿದಿದ್ದಾಳೆ. ಕೊಡಗಿನ ಜನರು ಮತ್ತು ಸರ್ಕಾರಕ್ಕೆ ಸೇತುವೆಯಾಗಿರುವ ತಂಡದ ಕಾರ್ಯಕ್ಕೆ ಯಾವುದೇ ರೀತಿಯ ಸಹಾಯ ಒದಗಿಸಲು ಮಠಾಧಿಪತಿಗಳು ಸಿದ್ದರಿದ್ದೇವೆ ಎಂದು ಹೇಳಿದರು.
ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದೇವೆ
ಖ್ಯಾತ ಚಿಂತಕರಾದ ವಿಜಯಮ್ಮ ಅವರು ಮಾತನಾಡಿ ಪೀಪಲ್ ಫಾರ್ ಪೀಪಲ್ ತಂಡಕ್ಕೆ ನನ್ನ ಕೈಲಾದ ಸಹಾಯ ಮಾಡುತ್ತೇನೆ. ಪ್ರಕೃತಿ ವಿಕೋಪದಲ್ಲೂ ರಾಜಕಾರಣ ಈಗಾಗಲೇ ಆರಂಭವಾಗಿದೆ. ಅದಾಗಕೂಡದು. ಕೊಡಗಿನಲ್ಲಿ ಈಗಾಗಲೇ ಕೊಡಗಿನಲ್ಲಿ ಮುಚ್ಚಿಹಾಕಲು ಯತ್ನಿಸುತ್ತಿರುವ ಶಾಲೆಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯನಿರತರಾಗಿದ್ದೇವೆ. ಅಧರ ಜೊತೆಗೆ ಪೀಪಲ್ ಫಾರ್ ಪೀಪಲ್ ತಂಡಕ್ಕೆ ಅಗತ್ಯವಿರುವ ಸಹಾಯವನ್ನೂ ಮಾಡುವುದಾಗಿ ಭರವಸೆ ನೀಡಿದರು.
ಚಲನಚಿತ್ರ ನಿರ್ದೇಶಕಿ ರೂಪಾ ಅಯ್ಯರ್
ಕಾರ್ಯಕ್ರಮದಲ್ಲಿ ಹಾಜರಿದ್ದ ಕನ್ನಡಪರ ಹೋರಾಟಗಾರರಾದ ಗುರುದೇವ್ ನಾರಾಯಣ್ ಕುಮಾರ್ ಅವರು ಕೊಡಗಿನ ಜನರು ಜಾತ್ಯಾತೀತವಾಗಿ, ಧರ್ಮಾತೀತರಾಗಿ ಸಂಕಷ್ಟಕ್ಕೊಳಗಾಗಿದ್ದಾರೆ. ಅಲ್ಲೀಗ ಕೇವಲ ಮನುಷ್ಯ ಧರ್ಮ ಮಾತ್ರ ನೆಲೆಸಿದೆ. ಈಗ ಅಲ್ಲಿ ಸಿಗುವ ನೆರವು ಕೂಡ ಎಲ್ಲವನ್ನೂ ಮೀರಿರಬೇಕು ಎಂದು ಹೇಳಿದರು. ನಿರಾಶ್ರಿತರ ಕಲ್ಯಾಣಕ್ಕೆ ಪೀಪಲ್ ಫಾರ್ ಪೀಪಲ್ ತಂಡ ಅವಿರತವಾಗಿ ಶ್ರಮಿಸುತ್ತಿದೆ. ತಂಡದ ಶ್ರಮಕ್ಕೆ ಸೂಕ್ತ ಸ್ಪಂದನೆ ಸಿಗಬೇಕಿದೆ ಎಂದು ಹೋರಾಟಗಾರ್ತಿ, ಚಲನಚಿತ್ರ ನಿರ್ದೇಶಕಿ ರೂಪಾ ಅಯ್ಯರ್ ಹೇಳಿದರು.
ಪೀಪಲ್ ಫಾರ್ ಪೀಪಲ್ ತಂಡದ ರೂವಾರಿ ಚಕ್ರವರ್ತಿ
ಇದೇ ವೇಳೆ ವೇದಿಕೆಯಲ್ಲಿ ಉಪಸ್ಥಿತರಿದ್ದ ಪೀಪಲ್ ಫಾರ್ ಪೀಪಲ್ ತಂಡದ ರೂವಾರಿ ಚಕ್ರವರ್ತಿ ಚಂದ್ರಚೂಡ್ ಅವರು, ರಂಗಸಪ್ತಾಹದಿಂದ 400 ಮಕ್ಕಳಿಗಾಗುವಷ್ಟು ಸಹಾಯ ಈಗಾಗಲೇ ಒದಗಿಬಂದಿದೆಎಂದು ಹೇಳಿದರು.ಪೀಪಲ್ ಫಾರ್ ಕೊಡಗು ತಂಡಕ್ಕೆ ರಾಜ್ಯದ ನಾನಾಭಾಗಗಳಿಂದ 3000ಕ್ಕೂ ಹೆಚ್ಚು ತಂಡಗಳು ಸ್ಪಂದಿಸಿ ಲಕ್ಷಾಂತರ ರೂಪಾಯಿಯ ಅವಶ್ಯಕ ವಸ್ತುಗಳನ್ನು ಒದಗಿಸಿ ಪ್ರವಾಹ ಪರಿಸ್ಥಿತಿ ನಿರ್ವಹಿಸಲು ನೆರವಾದವು. ಪೀಪಲ್ ಫಾರ್ ಕೊಡಗು ನಡೆಸಿದ ಗ್ರೌಂಡ್ ರಿಯಾಲಿಟಿ ಚೆಕ್ನೊಂದಿಗೆ, ಆಗಬೇಕಾಗಿರುವ ಒಟ್ಟು 19 ಅಂಶಗಳ ಪಟ್ಟಿಯನ್ನು ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ತಲುಪಿಸಲಾಗಿದೆ
ಸುಮಾ ಶಾಸ್ತ್ರಿ ಅವರ ಅನುಭಾವಿ ಗೀತೆಗಳ ಗಾಯನ
ಕಾರ್ಯಕ್ರಮದಲ್ಲಿ ಚಿಂತಕರು ಮತ್ತು ಕಾಂಗ್ರೆಸ್ ವಕ್ತಾರರಾದ ಸೂರ್ಯ ಮುಕುಂದರಾಜ್ ಅವರು ಉಪಸ್ಥಿತರಿದ್ದರು. ಸುಮಾ ಶಾಸ್ತ್ರಿ ಅವರ ಅನುಭಾವಿ ಗೀತೆಗಳ ಗಾಯನ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತ್ತು. ಸಭಾಕಾರ್ಯಕ್ರಮವನ್ನು ನಿರ್ದೇಶಕ ಸಂತೋಷ್ ಕೊಡಂಕೇರಿ ನಿರೂಪಿಸಿ, ಸ್ವಾಗತಿಸಿದರು. ತಂಡದ ಸದಸ್ಯೆ ಪಲ್ಲವಿ ಇಡೂರು ವಂದನಾರ್ಪಣೆಯನ್ನು ನಡೆಸಿಕೊಟ್ಟರು. ದೃಶ್ಯಕಾವ್ಯ ತಂಡ ಅಭಿನಯಸಿದ ಹುಲಿ ಹಿಡಿದ ಕಡಸು ನಾಟಕ ಜನಮನಸೂರೆಗೊಂಡಿತು.
ನ.14ರ
ಕಾರ್ಯಕ್ರಮ-
ಸಾತ್ವಿಕ
ರಂಗತಂಡದಿಂದ
ಶರೀಫ
ನಾಟಕ
ಪ್ರದರ್ಶನ
ಪ್ರವೀಣ್
ಬಿ.ವಿ.
ಮತ್ತು
ಪ್ರದೀಪ್
ಸಹೋದರರಿಂದ
ಅವತರಿಸು
ಬಾ
ಭಾವಗುಚ್ಚ
ಕಾರ್ಯಕ್ರಮ
ಸ್ಥಳ-
ಕಲಾಗ್ರಾಮ,
ಮಲ್ಲತ್ತಹಳ್ಳಿ