ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆ ಪ್ರಕರಣ: ಬೆಂಗಳೂರಿನಲ್ಲಿ ಪೊಲೀಸರ ಹೈ ಅಲರ್ಟ್
ಬೆಂಗಳೂರು, ಆಗಸ್ಟ್ 12: ನಗರದ ಅತ್ಯಂತ ಸೂಕ್ಷ್ಮ ಪ್ರದೇಶಗಳಾದ ಶಿವಾಜಿನಗರ, ಕಲಾಸಿಪಾಳ್ಯ, ಜೆ.ಜೆ ನಗರ, ಪಾದರಾಯನಪುರ ಹಾಗೂ ಮುಂತಾದ ಕಡೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.
Recommended Video
ದೇಗುಲ, ಮಸೀದಿಗಳಿರುವ ಭಾಗದಲ್ಲಿ ಅಧಿಕ ಪೊಲೀಸರ ನಿಯೋಜನೆ ಮಾಡುವಂತೆ ಮತ್ತು ಶಾಂತಿ ಕದಡಲು ಮುಂದಾಗುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವಂತೆ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಲ್ಲಾ ವಿಭಾಗದ ಡಿಸಿಪಿಗಳಿಗೆ ಸೂಚನೆ ನೀಡಿದ್ದಾರೆ.
ಗಲಭೆ ಪೀಡಿತ ಡಿಜೆ ಹಳ್ಳಿ ಕೆಜೆ ಹಳ್ಳಿಯಲ್ಲಿ ಕರ್ಫ್ಯೂ ಜಾರಿ ಇರುವ ಹಿನ್ನೆಲೆಯಲ್ಲಿ ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಹಿರಿಯ ಅಧಿಕಾರಿಗಳ ತಂಡ ಕೆ.ಜಿ. ಹಳ್ಳಿ ಮತ್ತು ಡಿ.ಜೆ. ಹಳ್ಳಿ ಪ್ರದೇಶದಲ್ಲಿ ಬೀಡು ಬಿಟ್ಟಿದೆ. ಮುಂದೆ ಓದಿ...

ಹಿರಿಯ ಪೊಲೀಸ್ ಅಧಿಕಾರಿಗಳ ತಂಡ
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಎಡಿಜಿಪಿ ಉಮೇಶ್ ಕುಮಾರ್, ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಪಶ್ಚಿಮ ವಿಭಾಗ ಹೆಚ್ಚುವರಿ ಪೋಲಿಸ್ ಆಯುಕ್ತ ಸೋಮೆಂದ್ ಮುಖರ್ಜಿ, ಐಜಿಪಿ ಚಂದ್ರಶೇಖರ್, ಐ ಜಿ ಪಿ ಹೇಮಂತ್ ನಿಂಬಾಳ್ಕರ್, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಸಂಚಾರಿ ಜಂಟಿ ಆಯುಕ್ತ ರವಿಕಾಂತೇಗೌಡ, ಡಿಐಜಿ ಡಾ ಹರ್ಷ, ಡಿಸಿಪಿಗಳಾದ ಶರಣಪ್ಪ. ಅನುಚೇತ್, ಭೀಮಾಶಂಕರ ಗುಳೇದ್, ದೇವರಾಜ್, ಧರ್ಮೇಂದ್ರ ಕುಮಾರ್ ಮೀನಾ, ಶಶಿಕುಮಾರ್, ರಮೇಶ್ ಬಾನೋತ್. ರೋಹಿಣಿ ಕಟೋಚ್ , ರಾಹುಲ್ ಕುಮಾರ್, ರವಿಕುಮಾರ್ ಕೆಪಿ ಸೇರಿ ಒಟ್ಟು ಇಪ್ಪತ್ತು ಐಪಿಎಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ

ರೂಟ್ ಮಾರ್ಚ್ ಮಾಡಲು ಪೊಲೀಸರ ಉದ್ದೇಶ
ಎರಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರೂಟ್ ಮಾರ್ಚ್ ಮೂಲಕ ಎರಡು ಪ್ರದೇಶಗಳನ್ನು ಮತ್ತಷ್ಟು ನಿಯಂತ್ರಣಕ್ಕೆ ಪಡೆದುಕೊಳ್ಳಲು ಪೊಲೀಸರು ಉದ್ದೇಶಿಸಿದ್ದಾರೆ. ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಂಬಾಳ್ಕರ್ ನೇತೃತ್ವದಲ್ಲಿ ರೂಟ್ ಮಾರ್ಚ್ ಮೂಲಕ ಸಾರ್ವಜನಿಕರಿಗೆ ಪೊಲೀಸರು ಮನವಿ ಮಾಡಲಿದ್ದಾರೆ. ಇದರಲ್ಲಿಪೊಲೀಸ್ ಸಿಬ್ಬಂದಿ, ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಲಿದ್ದಾರೆ.
ನಗರದ ಬೇರೆ ಬೇರೆ ಠಾಣೆಗಳಿಂದ ಕೆ.ಜಿ. ಹಳ್ಳಿ ಠಾಣೆಗೆ ಹೆಚ್ಚುವರಿ ಸಿಬ್ಬಂದಿಯನ್ನು ಕರೆಸಿಕೊಳ್ಳಲಾಗುತ್ತಿದೆ. ಇಡೀ ಗಲಭೆ ಪೀಡಿತ ಪ್ರದೇಶಗಳನ್ನು ಸಂಪೂರ್ಣವಾಗಿ ತಮ್ಮ ಹಿಡಿತಕ್ಕೆ ಪಡೆಯಲು ಪೊಲೀಸರ ಪ್ರಯತ್ನ ಮಾಡುತ್ತಿದ್ದಾರೆ.

ಬಿಬಿಎಂಪಿ ಕಚೇರಿ ಧ್ವಂಸ
ಮಂಗಳವಾರ ರಾತ್ರಿ ನಡೆದ ಪುಂಡರ ದಾಂದಲೆಗೆ ಡಿ.ಜೆ. ಹಳ್ಳಿ ವಾರ್ಡ್ನಲ್ಲಿರುವ ಬಿಬಿಎಂಪಿ ವಾರ್ಡ್ ಆಫೀಸ್ ಪುಡಿಪುಡಿಯಾಗಿದೆ. ಗಲಭೆ ವೇಳೆ ಬಿಬಿಎಂಪಿ ಕಚೇರಿಗೆ ದಾಳಿ ಇಟ್ಟ ದುಷ್ಕರ್ಮಿಗಳು ಕಚೇರಿಯಲ್ಲಿದ್ದ ಎಲ್ಲ ದಾಖಲೆಗಳನ್ನು ರಸ್ತೆಯಲ್ಲಿ ಹಾಕಿ ಬೆಂಕಿ ಇರಿಸಿದೆ. ಪೌರಕಾರ್ಮಿಕರಿಗೆ ಸೇರಿದ ಹಲವು ದಾಖಲೆಗಳು ಇದರಲ್ಲಿ ನಾಶವಾಗಿವೆ.

ಬಿಜೆಪಿ ಕಚೇರಿಗೆ ಬಿಗಿ ಭದ್ರತೆ
ಮಲ್ಲೇಶ್ವರಂನ ಬಿಜೆಪಿ ಕಚೇರಿಗೆ ಭದ್ರತೆ ಒದಗಿಸಲಾಗಿದೆ. ಬಿಜೆಪಿ ಕಚೇರಿ ಎದುರು ಪೊಲೀಸರನ್ನು ನಿಯೋಜಿಸಲಾಗಿದೆ. ಕಚೇರಿಯಿಂದ ಸುಮಾರು 100 ಮೀಟರ್ ದೂರದಲ್ಲಿ ಬ್ಯಾರಿಕೇಡ್ ಹಾಕಿ ಬಿಗಿ ಭದ್ರತೆ ತೆಗೆದುಕೊಳ್ಳಲಾಗಿದೆ. ಈ ರಸ್ತೆಯನ್ನು ಪೊಲೀಸರು ಸಂಪೂರ್ಣವಾಗಿ ಬಂದ್ ಮಾಡಿದ್ದು, ಒಂದು ಕೆಎಸ್ ಆರ್ ಪಿ ತುಕಡಿ ನಿಯೋಜನೆ ಮಾಡಿದ್ದಾರೆ.












Click it and Unblock the Notifications