ಪತ್ರಕರ್ತೆ ಶೃತಿ ನಾರಾಯಣನ್ ಆತ್ಮಹತ್ಯೆ ಪ್ರಕರಣ: ತಿಂಗಳಾದರೂ ಪತಿ ಸಿಗಲಿಲ್ಲ!
ಬೆಂಗಳೂರು, ಮೇ. 10: ಕೇರಳ ಮೂಲದ ಪತ್ರಕರ್ತೆ ಬೆಂಗಳೂರಿನಲ್ಲಿ ಆತ್ಮಹತ್ಯೆ ಮಾಡಿಕೊಂಡು ಒಂದು ತಿಂಗಳು ಕಳೆದಿದೆ. ಆಕೆಯ ಪತಿ ಇನ್ನೂ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡು ತಿರುಗಾಡುತ್ತಿದ್ದಾನೆ.
ಪತ್ರಕರ್ತೆ ಶೃತಿ ನಾರಾಯಣ್ ಒಂದು ತಿಂಗಳ ಹಿಂದೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪತಿ ಅನೀಶ್ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಶೃತಿ ಆತ್ಮಹತ್ಯೆ ಮಾಡಿಕೊಂಡಿದ್ದರು ಎಂಬುದು ಆರೋಪ. ಮಗಳ ಸಾವಿಗೆ ನ್ಯಾಯ ಸಿಗಬಹುದೇ? ಎಂದು ಪೋಷಕರು ಕಾಯುತ್ತಲೇ ಇದ್ದಾರೆ. ಆದರೆ, ಅನೀಶ್ ಮಾತ್ರ ರಾಜಾರೋಷವಾಗಿ ಓಡಾಡಿಕೊಂಡಿದ್ದಾನೆ.
ವೈಟ್ಫೀಲ್ಡ್ನಲ್ಲಿರುವ ಅಪಾರ್ಟ್ಮೆಂರ್ಟ್ನಲ್ಲಿ ವಾಸವಾಗಿದ್ದ ಶೃತಿ ನಾರಾಯಣನ್ ಪ್ರತಿಷ್ಠಿತ ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್ 24 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪೋಷಕರ ಫೋನ್ ಮತ್ತು ಸಂದೇಶಗಳಿಗೆ ಶೃತಿ ಸ್ಪಂದಿಸುತ್ತಿರಲಿಲ್ಲ. ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಕೇರಳದ ಕಾಸರಗೋಡು ಮೂಲದ ಶೃತಿ ಅನೀಶ್ ಕೋಡಿಯಾನ್ ಎಂಬುವರನ್ನು ಮದುವೆಯಾಗಿದ್ದರು. ಶೃತಿ ಆತ್ಮಹತ್ಯೆ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದರು. ಅನೀಶ್ ನೀಡುತ್ತಿದ್ದ ಕಿರುಕುಳದ ಬಗ್ಗೆ ಎಳೆಎಳೆಯಾಗಿ ಬರೆದಿಟ್ಟಿದ್ದರು. ಶೃತಿ ಆತ್ಮಹತ್ಯೆ ಹಿನ್ನಲೆಯಲ್ಲಿ ಶೃತಿ ಸಹೋದರ ನಿಶಾಂತ್ ವೈಟ್ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ಅನೀಶ್ ತಲೆ ಮರೆಸಿಕೊಂಡಿದ್ದ.
ನ್ಯಾಯಕ್ಕಾಗಿ ಶೃತಿ ಕುಟುಂಬ ಇನ್ನೂ ಕಾಯುತ್ತಿದೆ. ತಲೆ ಮರೆಸಿಕೊಂಡಿರುವ ಅನೀಶ್ನನ್ನು ಪೊಲೀಸರು ಇನ್ನೂ ಪತ್ತೆ ಮಾಡಿಲ್ಲ. ಆತನಿಗಾಗಿ ಶೋಧ ನಡೆಸುತ್ತಿದ್ದೇವೆ. ಆತ ಅವನ ಕುಟುಂಬದ ಸಂಪರ್ಕಕ್ಕೂ ಸಿಕ್ಕಿಲ್ಲ. ಆತನ ಬಗ್ಗೆ ಇನ್ನೂ ಯಾವುದೇ ಮಾಹಿತಿ ಸಿಕ್ಕಿಲ್ಲ. ಅವನ ಶೋಧಕ್ಕಾಗಿ ಎರಡು ತಂಡ ರಚನೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications