ಬೆಂಗಳೂರು-ಮೈಸೂರು ರಸ್ತೆ: ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಸ್ಥಾಪನೆಗೆ ಶೀಘ್ರವೇ ಒಪ್ಪಿಗೆ
ಬೆಂಗಳೂರು - ಮೈಸೂರು ರಸ್ತೆಯ ವಿವಿಧೆಡೆ ಕರ್ನಾಟಕ ಏಕೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಸ್ಥಾಪನೆಯ ಪ್ರಸ್ತಾವ ಇದ್ದು, ಅದಕ್ಕೆ ಶೀಘ್ರವೆ ಅನುಮೋದನೆ ನೀಡಲಾಗುವುದು.
ಬೆಂಗಳೂರು, ಜನವರಿ 10: ಬೆಂಗಳೂರು - ಮೈಸೂರು ರಸ್ತೆಯ ವಿವಿಧೆಡೆ ಕರ್ನಾಟಕ ಏಕೀಕರಣಕ್ಕೆ ಮಹತ್ವದ ಕೊಡುಗೆ ನೀಡಿದ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ಸ್ಥಾಪನೆಯ ಪ್ರಸ್ತಾವ ಇದೆ. ಅದಕ್ಕೆ ಅನುಮೋದನೆ ನೀಡಿ ಶೀಘ್ರವೇ ಕೆಲಸ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ವಿಧಾನಸೌಧ ನಿರ್ಮಾತೃ, ಮಾಜಿ ಮುಖ್ಯಮಂತ್ರಿ ದಿ. ಕೆಂಗಲ್ ಹನುಮಂತಯ್ಯನವರ 115 ನೇ ಜನ್ಮ ದಿನಾಚಾರಣೆ ನಡೆಯಿತು. ಈ ಪ್ರಯುಕ್ತ ಕೆಂಗಲ್ ಹನುಮಂತ್ಯನವರ ಪ್ರತಿಮೆಗೆ ಮಾಳಾರ್ಪಣೆ ಮಾಡಿ ಅವರು ಮಾತನಾಡಿದರು.
ಧೀಮಂತ ನಾಯಕರು ಆದ ಕರ್ನಾಟಕದ 2 ನೇ ಮುಖ್ಯಮಂತ್ರಿ ಆಗಿದ್ದ ಕೆಂಗಲ್ ಹನುಮಂತಯ್ಯ ರಾಜ್ಯದ ಏಕೀಕರಣದಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಬದುಕು ಹೋರಾಟದ ಬಗ್ಗೆ ಪರಿಚಯಿಸುವ ಗ್ರಂಥವು ಇದೇ ವರ್ಷ ಬಿಡುಗಡೆ ಮಾಡಲಾಗುವುದು. ಇಷ್ಟೇ ಅಲ್ಲದೇ ಅವರು ಕೇಂದ್ರ ರೈಲ್ವೆ ಖಾತೆಯ ಸಚಿವರಾಗಿ ಸಮರ್ಥವಾಗಿ ನಿಭಾಯಿಸಿದ್ದರು ಎಂದು ಅವರನ್ನು ಬೊಮ್ಮಾಯಿಯವರು ಸ್ಮರಿಸಿದರು.

ಕೆಂಗಲ್ ಹನುಮಂತಯ್ಯನವರ ಜೀವನ ಚರಿತ್ರೆಯನ್ನು ಒಗ್ಗೂಡಿಸಿ ಅಧಿಕೃತ ಗ್ರಂಥವೊಂದನ್ನು ಸಿದ್ಧಪಡಿಸಲಾಗುವುದು. ಸಿದ್ಧಪಡಿಸಿದ ಗ್ರಂಥವನ್ನು ಸರ್ಕಾರದ ವತಿಯಿಂದ ಇದೇ ವರ್ಷವೇ ಬಿಡುಗಡೆ ಮಾಡಲಾಗುವುದು. ಈಗಾಗಲೇ ರಾಮನಗರದಲ್ಲಿ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ನಿರ್ಮಾಣವಾಗುತ್ತಿದೆ. ಆದಷ್ಟು ತ್ವರಿತಗತಿಯಲ್ಲಿ ಆ ಪ್ರತಿಮೆ ಅನಾವರಣಕ್ಕೆ ಅಗತ್ಯ ಕ್ರಮ ವಹಿಸಲಾಗುವುದು.
ಬೆಂಗಳೂರು- ಮೈಸೂರು ರಸ್ತೆಯ ಮಾರ್ಗದ ಪ್ರಮುಖ ಸ್ಥಳದಲ್ಲಿ ಕೆಂಗಲ್ ಹನುಮಂತಯ್ಯನವರ ಪ್ರತಿಮೆ ನಿರ್ಮಿಸುವ ಸಂಬಂಧ ಬಿಬಿಎಂಪಿಯಲ್ಲಿ ಪ್ರಸ್ತಾವ ಇದೆ. ಆ ಪ್ರಸ್ತಾವನೆಗೆ ತ್ವರಿತವಾಗಿ ಸರ್ಕಾರ ಒಪ್ಪಿಗೆ ನೀಡಲಿದೆ. ಕೆಂಗಲ್ಲ್ಲಿರುವ ಅವರ ಸ್ಮಾರಕದ ಪ್ರದೇಶವನ್ನು ಸ್ಮೃತಿ ಉದ್ಯಾನವನ ಎಂದು ಅಭಿವೃದ್ಧಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಅದಕ್ಕಾಗುವಷ್ಟು ಅನುದಾನವನ್ನು ಸರ್ಕಾರ ಒದಗಿಸುತ್ತದೆ. ಇಂತಹ ಕೆಲಸಗಳ ಮೂಲಕ ಪ್ರತಿ ಕನ್ನಡಿಗನಿಗೂ ಈ ಧೀಮಂತ ನಾಯಕರ ಬದುಕು ಪರಿಚಯವಾಗಲಿ, ಅವರ ಸ್ಮರಣೆ ನಿರಂತರವಾಗಿರಲಿ ಎಂದು ಅವರು ವಿವರಿಸಿದರು.
ದೂರದೃಷ್ಠಿಯ ಕೆಂಗಲ್ ಹನುಮಂತಯ್ಯನವರು
ಕನ್ನಡ ಭಾಷೆ ಮಾತನಾಡ ಬಲ್ಲ ಎಲ್ಲರನ್ನು ಒಗ್ಗೂಡಿಸಿದ ಪ್ರಮುಖ ನಾಯಕರ ಪೈಕಿ ದಿ.ಕೆಂಗಲ್ ಹನುಮಂತಯ್ಯ ಅವರು ಸಹ ಅಗ್ರಗಣ್ಯರು. ಮೈಸೂರಿನ ಪ್ರಜಾ ಪ್ರತಿನಿಧಿ ಸಭೆಯಿಂದ ಹಿಡಿದು ವಿಧಾನಸಭಾ ಸದಸ್ಯರು,ಲೋಕಸಭಾ ಸದಸ್ಯರಾಗಿ, ಕರ್ನಾಟಕದ ಪ್ರಾರಂಭಿಕ ರಾಜಕಾರಣದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ಧೀಮಂತ ನಾಯಕರು ಅವರು. ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ವಿಷನ್ ಡಾಕ್ಯುಮೆಂಟ್ ನೀಡಿ, ಕರ್ನಾಟಕದ ಅಭಿವೃದ್ಧಿಗೆ ಭದ್ರಬುನಾದಿ ಹಾಕಿಕೊಟ್ಟರು ಎಂದು ಹೇಳಿದರು.
ಇನ್ನು ಮುಖ್ಯವಾಗಿ ವಿಧಾನಸೌಧವು ಇಷ್ಟೊಂದು ಸುಂದರವಾಗಿ ಕಾಣಲು, ಇಲ್ಲಿ ರಾಜ್ಯದ ರಾಜಧಾನಿ ತಲೆ ಎತ್ತಲು ಅವರು ಕಾರಣೀಭೂತರಾಗಿದ್ದಾರೆ. ಒಂದು ಮಿಷನ್ (ದೂರದೃಷ್ಠಿ) ರೀತಿಯಲ್ಲಿ ಪರಿಶ್ರಮ ಹಾಕಿದ್ದರಿಂದ ಈ ನಗರ ರಾಜಧಾನಿಯಾಗಿದೆ. ತಂತ್ರಜ್ಞಾನ ಇಲ್ಲದ ಕಾಲದಲ್ಲಿ ವಿಧಾನಸೌಧವನ್ನು ಭವ್ಯವಾಗಿ ನಿರ್ಮಿಸಿದ ಕೀರ್ತಿ ಕೆಂಗಲ್ ಹನುಮಂತಯ್ಯ ಅವರಿಗೆ ಸಲ್ಲುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.












Click it and Unblock the Notifications