ಕೆಂಪೇಗೌಡ ಪ್ರತಿಮೆ: ಬೆಂಗಳೂರಲ್ಲಿ ಮಣ್ಣು ಸಂಗ್ರಹ ಅಭಿಯಾನ ಆರಂಭ
ಬೆಂಗಳೂರು, ಅಕ್ಟೋಬರ್ 27: ನಾಡಪ್ರಭು ಕೆಂಪೇಗೌಡ ಅವರ ಬೃಹತ್ ಪ್ರತಿಮೆ ಥೀಮ್ ಪಾರ್ಕ್ಗೆ ಬಳಕೆ ಆಗಲಿರುವ ಮಣ್ಣಿನ ಸಂಗ್ರಹ ಅಭಿಯಾನಕ್ಕೆ ಬುಧವಾರ ಬೆಂಗಳೂರಿನಲ್ಲೂ ಚಾಲನೆ ದೊರೆತಿದೆ.
ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನಕ್ಕೆ ಗಾಂಧಿನಗರದ ಅಣ್ಣಮ್ಮ ದೇವಸ್ಥಾನದ ಮುಂದೆ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷರು ಆದ ಐಟಿಬಿಟಿ ಸಚಿವ ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರು ಬುಧವಾರ ಚಾಲನೆ ನೀಡಿದರು. ಈ ಅಭಿಯಾನವು ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ನಡೆಯುತ್ತಿದೆ. ಸಚಿವರು ಇತ್ತೀಚೆಗಷ್ಟೇ ರಾಮನಗರದಲ್ಲಿ ಇದೇ ಅಭಿಯಾನಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿ ಮಣ್ಣು ಸಂಗ್ರಹಿಸಿದ್ದರು.
ಅಣ್ಣಮ್ಮ ದೇವಿ ದೇವಸ್ಥಾನದ ಮುಂಭಾಗದಲ್ಲಿ ಸರ್ವಾಲಂಕೃತಗೊಂಡಿದ್ದ ನಾಡಪ್ರಭು ಕೆಂಪೇಗೌಡರ ವಿಶೇಷ ರಥಕ್ಕೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸಾವಿರಾರು ಉತ್ಸಾಹಿಗಳು, ಯುವಕರು, ಕಾರ್ಯಕರ್ತರು ಗಾಂಧಿ ನಗರದ ಬೀದಿಗಳಲ್ಲಿ ಜಯಘೋಷಗಳನ್ನು ಹಾಕಿತು. ಬಾವುಟಗಳನ್ನು ಬೀಸುತ್ತ ಹೆಜ್ಜೆ ಹಾಕಿ ರಥಗಳ ಚಾಲನೆಗೆ ಸಾಕ್ಷಿಯಾದರು.

ದೇವಸ್ಥಾನದ ಜೀರ್ಣೋದ್ಧಾರದ ಒಲವಿದೆ
ಈ ಸಂದರ್ಭದಲ್ಲಿ ಮಾತನಾಡಿದ ಅಶ್ವಥ್ ನಾರಾಯಣ್, ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪರಂಪರೆಗೆ ಸೇರಿದ ಅಣ್ಣಮ್ಮದೇವಿ ದೇವಸ್ಥಾನವನ್ನು ಕೂಡ ಜೀರ್ಣೋದ್ಧಾರ ಮಾಡಲು ಒಲವಿದೆ. ಈ ಬಗ್ಗೆ ಧರ್ಮದರ್ಶಿಗಳು ಮತ್ತು ಭಕ್ತವೃಂದದ ಜತೆ ಮಾತುಕತೆ ನಡೆಸಲಾಗುವುದು ಎಂದರು.
ನೇತೃತ್ವದಲ್ಲಿ ನಡೆಯಲಿರುವ ಸಾರ್ವಜನಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಕಲ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ. ಕೆಂಪೇಗೌಡರು ಕಟ್ಟಿದ ಬೆಂಗಳೂರು ಇಂದು ಕೋಟ್ಯಂತರ ಜನರಿಗೆ ಆಶ್ರಯ ನೀಡಿದೆ ಎಂದು ಅವರು ಬಣ್ಣಿಸಿದರು.
ನವೆಂಬರ್ 11ರಂದು ಪ್ರಧಾನಿ ನರೇಂದ್ರ ಮೋದಿಯವರ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ 108 ಅಡಿ ಎತ್ತರದ ಕೆಂಪೇಗೌಡರ ಬೃಹತ್ ಕಂಚಿನ ಪ್ರತಿಮೆಯನ್ನು ಲೋಕಾರ್ಪಣೆ ಹಾಗೂ ಥೀಮ್ ಪಾರ್ಕ್ ಉದ್ಘಾಟನೆ ಮಾಡಲಿದ್ದಾರೆ. ನವೆಂಬರ್ 7 ರವರೆಗೆ ರಾಜ್ಯಾದ್ಯಂತ ಸಂಗ್ರಹವಾಗುವ ಪವಿತ್ರ ಮಣ್ಣು ಪ್ರತಿಮೆ, ಪಾರ್ಕ್ನಲ್ಲಿ ಬಳಸಲಾಗುವುದು ಎಂದು ಅಶ್ವಥ್ ನಾರಾಯಣ್ ಹೇಳಿದರು.

ಕಾರ್ಯಕ್ರಮದಲ್ಲಿ ಬೇಲಿಮಠದ ಶಿವರುದ್ರ ಸ್ವಾಮೀಜಿಗಳು, ಸಂಸದ ಪಿ.ಸಿ.ಮೋಹನ್, ಬಿಜೆಪಿ ಮುಖಂಡ ಮಂಜುನಾಥ್, ಬೆಂಬಲಿಗರು ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications