ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಂಪೇಗೌಡ ಪ್ರತಿಮೆ: 15 ದಿನಗಳ ಪವಿತ್ರ ಮೃತ್ತಿಕಾ ಸಂಗ್ರಹ ಅಭಿಯಾನಕ್ಕೆ ಸಿಎಂ ಚಾಲನೆ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 21: ''ಶತಶತಮಾನಗಳು ಉರುಳಿದರೂ ವ್ಯವಸ್ಥಿತ ಯೋಜನೆ, ತಮ್ಮ ದೂರದೃಷ್ಟಿಗಳಿಂದ ಆಡಳಿತಗಾರರು ಅಜರಾಮರಾಗಿ ಇರುತ್ತಾರೆ ಎಂಬುದಕ್ಕೆ ಬೆಂಗಳೂರು ಸ್ಥಾಪಕ ನಾಡಪ್ರಭು ಕೆಂಪೇಗೌಡರು ಸಾಕ್ಷಿಯಾಗಿದ್ದಾರೆ. ಅವರಿಗೆ 108 ಅಡಿಯ ಕಂಚಿನ ಭವ್ಯ ಪ್ರತಿಮೆ ಸ್ಥಾಪಿಸಿ ಸರ್ಕಾರ ಸೂಕ್ತ ಗೌರವ ನೀಡುತ್ತಿದೆ'' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ನವೆಂಬರ್ 11ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರವು ಪವಿತ್ರ ಮೃತ್ತಿಕಾ ಸಂಗ್ರಹಣಾ ಅಭಿಯಾನ ಹಮ್ಮಿಕೊಂಡಿದೆ. ಅಭಿಯಾನದ 20 ವಿಶೇಷ ರಥಗಳಿಗೆ (ವಾಹನ) ಶುಕ್ರವಾರ ವಿಧಾನಸೌಧದ ಮುಂದೆ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿ ಮಾತನಾಡಿದರು.

ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆಗೆ ಬನ್ನಿ: ಒಕ್ಕಲಿಗ ಸಂಘ ಮನವಿಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆಗೆ ಬನ್ನಿ: ಒಕ್ಕಲಿಗ ಸಂಘ ಮನವಿ

ಕೆಂಪೇಗೌಡರು ಜನರ ನಡುವೆಯೇ ಬದುಕಿ, ಇಲ್ಲಿನ ಜನರ ನೆಮ್ಮದಿಗೆ ಇಂಥದೊಂದು ನಗರವನ್ನು ನಿರ್ಮಿಸಿ ಹೋಗಿದ್ದಾರೆ. ಇತಿಹಾಸವನ್ನು ಮರೆತರೆ ನಮ್ಮ ಭವಿಷ್ಯ ಮಂಕಾಗುತ್ತದೆ. ಕೆಂಪೇಗೌಡರಿಗೆ ಸೂಕ್ತ ಗೌರವ ಸಲ್ಲಬೇಕೆಂಬ ಸಂಕಲ್ಪ ಸರ್ಕಾರದ್ದಾಗಿದೆ. ಅನೇಕ ದಶಕಗಳ ಈ ಕನಸು ಈಗ ನನಸಾಗುತ್ತಿದೆ ಎಂದರು.

ರಾಜ್ಯದ ಉಜ್ವಲ ಭವಿಷ್ಯದ ಸಂಕೇತ ಈ ಪ್ರತಿಮೆ

ರಾಜ್ಯದ ಉಜ್ವಲ ಭವಿಷ್ಯದ ಸಂಕೇತ ಈ ಪ್ರತಿಮೆ

ಅಮೆರಿಕದ ಸ್ವಾತಂತ್ರ ಪ್ರತಿಮೆ, ಗುಜರಾತಿನ ಏಕತಾ ಪ್ರತಿಮೆಗಳಂತೆ ನಮ್ಮಲ್ಲಿ ಕೆಂಪೇಗೌಡರ ಪ್ರತಿಮೆಗೆ 'ಪ್ರಗತಿ ಪ್ರತಿಮೆ' ಎಂದು ಹೆಸರಿಸಲಾಗಿದೆ. ಅವರ 108 ಅಡಿ ಎತ್ತರದ ಪ್ರತಿಮೆಗೆ ತಕ್ಕಂತೆ ಕರ್ನಾಟಕವು ಇಡೀ ದೇಶದಲ್ಲಿ ನಂ.1 ಸ್ಥಾನಕ್ಕೆ ಏರಬೇಕು. ಈ ಪ್ರತಿಮೆ ಸ್ಥಾಪನೆಯು ರಾಜ್ಯದ ಉಜ್ವಲ ಭವಿಷ್ಯದ ಸಂಕೇತವಾಗಿದೆ ಎಂದು ಬಣ್ಣಿಸಿದರು.

ಬೆಂಗಳೂರಿಗೆ ಬರುವ ಸಾವಿರಾರು ವಿದೇಶೀಯರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಕೆಂಪೇಗೌಡರಿಗೆ ನಮಸ್ಕರಿಸುವಂತೆ ಆಗಬೇಕು. ನ.11ರಂದು ನಡೆಯಲಿರುವ ಸಮಾರಂಭವು ರಾಜ್ಯದ ಪಾಲಿಗೆ ಅಮೃತ ಘಳಿಗೆಯಾಗಿದೆ. ಕೆಂಪೇಗೌಡರ ಆಡಳಿತವು 21ನೇ ಶತಮಾನದಲ್ಲೂ ಮಾದರಿಯಾಗಿ ಉಳಿದುಕೊಂಡಿದೆ. ಅವರ ರಚನಾತ್ಮಕತೆ ಈಗಲೂ ಅನುಕರಣ ಯೋಗ್ಯವಾಗಿದೆ ಎಂದು ಬೊಮ್ಮಾಯಿ ಅಭಿಪ್ರಾಯಪಟ್ಟರು.

ಕೆಂಪೇಗೌಡರು ನಾಡಿನ ನಾಯಕ: ಅಶ್ವಥ್

ಕೆಂಪೇಗೌಡರು ನಾಡಿನ ನಾಯಕ: ಅಶ್ವಥ್

ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ಡಾ.ಸಿ ಎನ್ ಅಶ್ವತ್ಥನಾರಾಯಣ ಮಾತನಾಡಿ, ವಿಜಯನಗರದ ಅರಸು ಕೃಷ್ಣದೇವರಾಯರಿಂದ ಸ್ಫೂರ್ತಿ-ಪ್ರೇರಣೆ ಪಡೆದು ನಾಡಪ್ರಭು ಕೆಂಪೇಗೌಡರು ಕಟ್ಟಿದ ನಗರವಾದ ಬೆಂಗಳೂರು ಇಂದು ಜಾಗತಿಕ ಸ್ತರದಲ್ಲಿ ವಿರಾಜಮಾನವಾಗಿದೆ. ಇಂತಹ ಕೆಂಪೇಗೌಡರು ಇಡೀ ಕರ್ನಾಟಕದ ನಾಯಕರಾಗಿದ್ದಾರೆ ಎಂದರು.

ಪಂಚಭೂತಗಳಲ್ಲಿ ಮಣ್ಣು ಒಂದಾಗಿದೆ. ರಾಜ್ಯದ ಪ್ರತಿಯೊಂದು ಹಳ್ಳಿಯ ಕೆರೆಕಟ್ಟೆ, ಕಲ್ಯಾಣಿ, ನದಿ, ಪುಷ್ಕರಿಣಿ, ತೊರೆಗಳಿಂದ ಮಣ್ಣನ್ನು ಕೆಂಪೇಗೌಡರ ಗೌರವಾರ್ಥ ಸಂಗ್ರಹಿಸಲಾಗುತ್ತಿದೆ ಎಂದರು.

ಅಭಿಯಾನವು ನ.7 ರವರೆಗೆ ನಡೆಯಲಿದ್ದು, ಇದನ್ನು ಕೆಂಪೇಗೌಡ ಥೀಮ್ ಪಾರ್ಕ್ ಮತ್ತು ಪ್ರತಿಮೆಯ ನಾಲ್ಕು ಗೋಪುರಗಳಿಗೆ ಬಳಸಿಕೊಳ್ಳಲಾಗುವುದು. ಬೆಂಗಳೂರು ಆ ಕಾಲದಿಂದಲೂ ರಚನಾತ್ಮಕ ಚಟುವಟಿಕೆಗಳಿಗೆ ಮತ್ತು ವಾಣಿಜ್ಯೋದ್ಯಮಕ್ಕೆ ಹೆಸರಾಗಿದೆ. ಇದಕ್ಕೆ ಕಾರಣಕರ್ತರಾದ ಕೆಂಪೇಗೌಡರಿಗೆ ಇಷ್ಟು ತಡವಾಗಿಯಾದರೂ ಗೌರವ ಸಲ್ಲುತ್ತಿರುವುದು ಸಮಾಧಾನದ ಸಂಗತಿ. ಈ ಪ್ರತಿಮೆ ಸ್ಥಾಪನೆಯ ಹಿಂದೆ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರ ಸಂಕಲ್ಪ ಶಕ್ತಿ ಇದೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಹೆಗಲು ನೀಡಿದ್ದಾರೆ ಎಂದು ಅಶ್ವತ್ಥನಾರಾಯಣ್ ಹೇಳಿದರು.

ಮೃತ್ತಿಕೆ ಸಂಗ್ರಹ ಅಭಿಯಾನ ಹೀಗಿರಲಿದೆ

ಮೃತ್ತಿಕೆ ಸಂಗ್ರಹ ಅಭಿಯಾನ ಹೀಗಿರಲಿದೆ

ಮೃತ್ತಿಕೆ ಸಂಗ್ರಹ ಅಭಿಯಾನದ 20 ರಥಗಳು ಪ್ರತೀ ಜಿಲ್ಲೆಗೂ ತೆರಳಲಿವೆ. ಅವುಗಳಿಗೆ ಜಿಲ್ಲೆಯಲ್ಲಿ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಜನಪ್ರತಿನಿಧಿಗಳು, ಸಾಹಿತಿಗಳು, ಪ್ರಗತಿಪರ ರೈತರು, ಸ್ವಸಹಾಯ ಸಂಘಗಳ ಸದಸ್ಯರು, ಹಾಲು ಒಕ್ಕೂಟಗಳ ಸದಸ್ಯರು ಪಾಲ್ಗೊಳ್ಳಲಿದ್ದಾರೆ. ಜತೆಗೆ ವೃತ್ತಿನಿರತ ಕುಂಬಾರರು, ಅಗಸರು, ತರಕಾರಿ/ಹೂ ವ್ಯಾಪಾರಿಗಳು, ಗಾಣಿಗರು, ನೀರುಗಂಟಿಗಳು ಮತ್ತು ನಾನಾ ಸಮುದಾಯಗಳ ಪ್ರಮುಖರು ಕೂಡ ಈ ಸಂಭ್ರಮದ ಭಾಗವಾಗಲಿದ್ದಾರೆ ಎಂದು ಸಚಿವರು ತಿಳಿಸಿದರು.

ಸಚಿವರ ಅಶ್ವಥ್‌ಗೆ ನಾಯಕರ ಮೆಚ್ಚುಗೆ

ಸಚಿವರ ಅಶ್ವಥ್‌ಗೆ ನಾಯಕರ ಮೆಚ್ಚುಗೆ

ಶುಕ್ರವಾರ ವಿಧಾನಸೌಧದ ಮುಂದೆ ನಡೆದ ಪವಿತ್ರ ಮೃತ್ತಿಕೆ ಸಂಗ್ರಹಣಾ ಅಭಿಯಾನ ಕಾರ್ಯಕ್ರಮಕ್ಕೆ ಜನಸಾಗರವೇ ಹರಿದು ಬಂದಿತ್ತು. ಕಾರ್ಯಕ್ರಮಕ್ಕೂ ಮುನ್ನ ಡೊಳ್ಳು ಕುಣಿತ, ಕಂಸಾಳೆ ನೃತ್ಯ, ಸೋಮನ ಕುಣಿತ, ತಾಳಮದ್ದಳೆ, ಗೊರವನ ಕುಣಿತ ಮತ್ತಿತರ ಜಾನಪದ ನೃತ್ಯ ಪ್ರದರ್ಶನಗಳನ್ನು ಎಲ್ಲರೂ ಕಣ್ತುಂಬಿಕೊಂಡರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದಿಯಾಗಿ ಮಾತನಾಡಿದ ಮುಖಂಡರು ಕೆಂಪೇಗೌಡ ಪ್ರತಿಮೆ ಸ್ಥಾಪನೆ ಮತ್ತು ಥೀಮ್‌ ಪಾರ್ಕ್ ಅಭಿವೃದ್ಧಿಗೆ ಶ್ರಮಿಸುತ್ತಿರುವ ಪ್ರಾಧಿಕಾರದ ಉಪಾಧ್ಯಕ್ಷರೂ ಆದ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣರನ್ನು ಶ್ಲಾಘಿಸಿದರು.

108 ಅಡಿ ಪ್ರತಿಮೆ ಸೃಷ್ಟಿಸಿದ ಶಿಲ್ಪಿ ರಾಮ್‌ ಸುತರ್

108 ಅಡಿ ಪ್ರತಿಮೆ ಸೃಷ್ಟಿಸಿದ ಶಿಲ್ಪಿ ರಾಮ್‌ ಸುತರ್

ನೋಯಿಡಾದ ಶಿಲ್ಪಿಗಳಾದ ರಾಮ್‌ ಸುತರ್ ಅವರು ಕೆಂಪೇಗೌಡರ 108 ಅಡಿ ಪ್ರತಿಮೆ ಸೃಷ್ಟಿಸಿದ್ದಾರೆ. ಗುಜರಾತಿನಲ್ಲಿರುವ ಪಟೇಲ್‌ ಪ್ರತಿಮೆಯೂ ಸೇರಿದಂತೆ ವಿಖ್ಯಾತ ಪ್ರತಿಮೆಗಳನ್ನು ಅರಳಿಸಿರುವ ಸಾಧಕರು ಇವರಾಗಿದ್ದಾರೆ. ಕೆಂಪೇಗೌಡರ ಪ್ರತಿಮೆ ಸ್ಥಾಪನೆಗೆ ಉತ್ಕೃಷ್ಟ ದರ್ಜೆಯ ಕಬ್ಬಿಣ ಮತ್ತು ಉಕ್ಕನ್ನು ಬಳಸಿದ್ದು, ಇದಕ್ಕಾಗಿ 84 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದಲ್ಲದೆ, ಪ್ರತಿಮೆಯ ಪರಿಸರದಲ್ಲಿ 23 ಎಕರೆ ವಿಶಾಲವಾದ 'ಕೆಂಪೇಗೌಡ ಥೀಮ್‌ ಪಾರ್ಕ್' ಕೂಡ ಅಭಿವೃದ್ಧಿ ಪಡಿಸಲಾಗುತ್ತದೆ. ಅಭಿಯಾನದ ಮೂಲಕ ಸಂಗ್ರಹಿಸಲಾಗುವ ಪವಿತ್ರ ಮೃತ್ತಿಕೆಯನ್ನು ಈ ಥೀಮ್‌ ಪಾರ್ಕ್ ಮತ್ತು ಕೆಂಪೇಗೌಡರ ಪ್ರತಿಮೆಯ ನಾಲ್ಕು ಗೋಪುರಗಳಿಗೆ ಬಳಸಿಕೊಳ್ಳಲಾಗುವುದು ಎಂದು ಅಶ್ವಥ್ ನಾರಾಯಣ ವಿವರಿಸಿದರು.

ಕೆಂಪೇಗೌಡರ ಪ್ರತಿಮೆಗೆ 'ಪ್ರಗತಿಯ ಪ್ರತಿಮೆ' (statue of prosperity) ಎಂದು ಡಾ.ಅಶ್ವತ್ಥನಾರಾಯಣ ನಾಮಕರಣ ಮಾಡಿದ್ದಾರೆ. ನಾಮಕರಣ ಕುರಿತು ಚರ್ಚೆಗೆ ಬಂದಾಗ ಸಭೆ ಸಚಿವರು ಸಭೆ ಕರೆದರು. ಜಗತ್ತಿನ ಗಮನ ಸೆಳೆಯಲು 'ಏಕತಾ ಪ್ರತಿಮೆ', 'ಸ್ಟ್ಯಾಚು ಆಫ್ ಲಿಬರ್ಟಿ ಗಳಂತೆ ಪ್ರಗತಿ ಪ್ರತಿಮೆ ಎಂದು ನಾಮಕರಣ ಮಾಡಿದರು.

ಅಭಿಯಾನ ಚಾಲನಾ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ, ಡಿ ವಿ ಸದಾನಂದಗೌಡ, ಆದಿಚುಂಚನಗಿರಿ ಸಂಸ್ಥಾನದ ನಿರ್ಮಲಾನಂದನಾಥ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಕುಮಾರ ಚಂದ್ರಶೇಖರನಾಥ ಸ್ವಾಮೀಜಿ, ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ.ಮೋಹನ್, ಸಚಿವರಾದ ಆರಗ ಜ್ಞಾನೇಂದ್ರ, ಆರ್. ಅಶೋಕ್, ಕೆ.ಸುಧಾಕರ್, ಸುನೀಲ್‌ಕುಮಾರ್‍‌, ಗೋಪಾಲಯ್ಯ, ನಾರಾಯಣಗೌಡ, ಬೈರತಿ ಬಸವರಾಜು, ಮುನಿರತ್ನ, ಕೆಂಪೇಗೌಡ ಪಾರಂಪರಿಕ ತಾಣಗಳ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ತಲಕಾಡು ಚಿಕ್ಕರಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು.

English summary
Kempegowda 108 feet statue in KIA Bengaluru. CM Basavaraj bommai launches 15 days Soil collection campaign on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X