Breaking; ಬೆಂಗಳೂರು ಏರ್ಪೋರ್ಟ್ಗೆ ಹೋಗುವ ಪ್ರಯಾಣಿಕರ ಗಮನಕ್ಕೆ
ಬೆಂಗಳೂರು, ನವೆಂಬರ್ 6; ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ)ಗೆ ಹೋಗುವ ಪ್ರಯಾಣಿಕರು ಭಾನುವಾರ ಎಚ್ಚರವಹಿಸುವುದು ಅಗತ್ಯ. ಏರ್ಪೋರ್ಟ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗುವ ನಿರೀಕ್ಷೆ ಇದ್ದು, ವಿಮಾನ ತಪ್ಪದಂತೆ ಮಾಡಲು ಬೇಗ ಹೊರಡುವುದು ಅನಿವಾರ್ಯವಾಗಿದೆ.
ಜಿಕೆವಿಕೆ ಆವರಣದಲ್ಲಿ 2022ನೇ ಸಾಲಿನ ಕೃಷಿ ಮೇಳ ನಡೆಯುತ್ತಿದೆ. ಅಲ್ಲದೇ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಬೆಳಗ್ಗೆ 11ಗಂಟೆಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಎರಡು ಕಾರ್ಯಕ್ರಮಗಳ ಹಿನ್ನಲೆ ಸಂಚಾರ ದಟ್ಟಣೆ ಉಂಟಾಗಲಿದೆ.
ಖರ್ಗೆ ಮೂಲಕ ರಾಷ್ಟ್ರ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭ: ಕಾಂಗ್ರೆಸ್
ಕಾಂಗ್ರೆಸ್ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಬೆಂಗಳೂರಿಗೆ ಮಲ್ಲಿಕಾರ್ಜುನ ಖರ್ಗೆ ಆಗಮಿಸುತ್ತಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ತೆರೆದ ವಾಹನದಲ್ಲಿ ಅವರು ರೋಡ್ ಶೋ ನಡೆಸಲಿದ್ದಾರೆ. ಅರಮನೆ ಮೈದಾನದಲ್ಲಿ ಮಧ್ಯಾಹ್ನ 2 ಗಂಟೆಗೆ ಅಭಿನಂದನಾ ಸಮಾವೇಶ ಸಹ ಏರ್ಪಡಿಸಲಾಗಿದೆ.
Breaking; ಎಐಸಿಸಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಮಲ್ಲಿಕಾರ್ಜುನ ಖರ್ಗೆ
ಹಲವು ಕಾಂಗ್ರೆಸ್ ನಾಯಕರು, ನೂರಾರು ಕಾಂಗ್ರೆಸ್ ಕಾರ್ಯಕರ್ತರು ಮಲ್ಲಿಕಾರ್ಜುನ ಖರ್ಗೆ ಜೊತೆಗೆ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ಆದ್ದರಿಂದ ಏರ್ಪೋರ್ಟ್ ರಸ್ತೆಯಲ್ಲಿ ವಾಹನಗಳ ದಟ್ಟಣೆ ಹೆಚ್ಚಿರುತ್ತದೆ.
ಕೃಷಿ ಮೇಳಕ್ಕೆ ಜನವೋ ಜನ; ಜಿಕೆವಿಕೆಯಲ್ಲಿ ಶುಕ್ರವಾರದಿಂದ ನಡೆಯುತ್ತಿರುವ 2022ನೇ ಸಾಲಿನ ಕೃಷಿ ಮೇಳ ಭಾನುವಾರ ಮುಕ್ತಾಯಗೊಳ್ಳಲಿದೆ. ಶನಿವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೃಷಿ ಮೇಳದಲ್ಲಿ ಪಾಲ್ಗೊಂಡಿದ್ದರು.
ಶನಿವಾರ ಸಾವಿರಾರು ಜನರು ಕೃಷಿ ಮೇಳಕ್ಕೆ ಆಗಮಿಸಿದ ಕಾರಣ ಸಂಜೆಯ ಹೊತ್ತಿಗೆ ಏರ್ಪೋರ್ಟ್ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು. ಭಾನುವಾರವೂ ಸಹ ಇದೇ ಪರಿಸ್ಥಿತಿ ನಿರ್ಮಾಣವಾಗುವ ನಿರೀಕ್ಷೆ ಇದೆ.
ಏರ್ಪೋರ್ಟ್ಗೆ ಸಾಗುವ ವಾಹನಗಳು, ಬಸ್, ಕೃಷಿ ಮೇಳಕ್ಕೆ ಹೋಗುವ ಜನರು, ಮಲ್ಲಿಕಾರ್ಜುನ ಖರ್ಗೆ ಸ್ವಾಗತಿಸಲು ತೆರಳುವ ಕಾಂಗ್ರೆಸ್ ಕಾರ್ಯಕರ್ತರಿಂದ ಏರ್ಪೋರ್ಟ್ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿರೀಕ್ಷೆ ಮಾಡಲಾಗಿದೆ.
ಆದ್ದರಿಂದ ಭಾನುವಾರ ಏರ್ಪೋರ್ಟ್ಗೆ ಹೋಗುವ ಜನರು ಮನೆಯಿಂದ ಬೇಗ ಹೊರಟರೆ ಸರಿಯಾದ ಸಮಯಕ್ಕೆ ವಿಮಾನ ನಿಲ್ದಾಣ ತಲುಪಬಹುದಾಗಿದೆ. ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಂಡರೆ ವಿಮಾನ ತಪ್ಪುವ ಸಾಧ್ಯತೆ ಇದೆ.