ಬೆಂಗಳೂರು ಏರ್ ಪೋರ್ಟ್ ಪ್ರಯಾಣಿಕರಿಗೆ ಸಿಹಿಸುದ್ದಿ
ಬೆಂಗಳೂರು, ನವೆಂಬರ್ 24 : ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಸಿಹಿಸುದ್ದಿ. ದಟ್ಟವಾದ ಮಂಜು, ಹವಾಮಾನ ವೈಫರಿತ್ಯ ಇದ್ದರೂ ಸಹ ಇನ್ನು ಮುಂದೆ ವಿಮಾನ ನಿಲ್ದಾಣದಿಂದ ಪ್ರಯಾಣ ಮಾಡಬಹುದು. ಸಂಚಾರ ರದ್ದು, ವಿಳಂಬವಾಗುವುದಿಲ್ಲ.
ವಿಮಾನ ನಿಲ್ದಾಣದ ಪ್ರಯಾಣಿಕರಿಗೆ ಇದು ಹೊಸ ವರ್ಷದ ಕೊಡುಗೆಯಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ವಿಮಾನ ನಿಲ್ದಾಣದ ದಕ್ಷಿಣ ರನ್ ವೇ ಕಾರ್ಯಾಚರಣೆ ಬಗ್ಗೆ ಮಾಹಿತಿ ನೀಡಿದೆ.
ಡಿಸೆಂಬರ್ 31ರಿಂದ ದಕ್ಷಿಣ ರನ್ ವೇ ಕಾರ್ಯಾಚರಣೆಯನ್ನು ಆರಂಭಿಸಲಿದ್ದು, ಸಿಎಟಿ 3ಬಿ ಕಾರ್ಯಾಚರಣೆಗೆ ಸಹ ಸಿದ್ಧವಾಗಲಿದೆ. ಈ ರನ್ ವೇಯಲ್ಲಿ ದಟ್ಟವಾದ ಮಂಜು, ಹವಾಮಾನ ವೈಫರಿತ್ಯದ ಸಂದರ್ಭದಲ್ಲಿಯೂ ವಿಮಾನ ಟೇಕಾಫ್ ಮತ್ತು ಲ್ಯಾಂಡ್ ಮಾಡಬಹುದಾಗಿದೆ.

ರನ್ ವೇ ಸಿಗ್ನಲ್ ವ್ಯವಸ್ಥೆ ಕಾರ್ಯಾಚರಣೆಯ ಬಗ್ಗೆ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ಇಂತಹ ಸಂದರ್ಭದಲ್ಲಿ ವಿಮಾನ ಕಾರ್ಯಾಚರಣೆ ನಡೆಸುವಾಗ ಅನುಭವಿ ಪೈಲೆಟ್ ಬಳಕೆ ಮಾಡಿಕೊಳ್ಳಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
ಕಳೆದ ವರ್ಷ ಆರಂಭಿಸಿದ ದಕ್ಷಿಣ ರನ್ ವೇ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಮಾರ್ಚ್ನಲ್ಲಿ ಲಾಕ್ ಡೌನ್ ಘೋಷಣೆ ಮಾಡಿದಾಗ ಕೆಲವು ವಿಶೇಷ ವಿಮಾನಗಳನ್ನು ಈ ರನ್ ವೇನಲ್ಲಿಯೇ ಇಳಿಸಲಾಗಿದೆ. ಡಿಸೆಂಬರ್ನಲ್ಲಿ ಅಧಿಕೃತವಾಗಿ ರನ್ ವೇ ಸಂಚಾರಕ್ಕೆ ಮುಕ್ತವಾಗಲಿದೆ.
ನವೆಂಬರ್ 15 ರಿಂದ ಫೆಬ್ರವರಿ 15ರ ತನಕ ಬೆಂಗಳೂರು ವಿಮಾನ ನಿಲ್ದಾಣ ಭಾಗದಲ್ಲಿ ದಟ್ಟವಾದ ಮಂಜು ಕವಿದಿರುತ್ತದೆ. ಆಗ ವಿಮಾನಗಳ ಹಾರಾಟ ರದ್ದು, ವಿಳಂಬವಾಗುತ್ತದೆ.
ಕರ್ನಾಟಕದಲ್ಲಿಯೇ ಅತಿ ಹೆಚ್ಚು ಪ್ರಯಾಣಿಕರು ಆಗಮಿಸುವ ವಿಮಾನ ನಿಲ್ದಾಣ ಬೆಂಗಳೂರು ಆಗಿದೆ. 2020ರ ಏಪ್ರಿಲ್ನಿಂದ ಅಕ್ಟೋಬರ್ ತನಕ 42,122 ವಿಮಾನಗಳು ಆಗಮಿಸಿದ್ದು, 35,47,644 ಪ್ರಯಾಣಿಕರು ಆಗಮಿಸಿದ್ದಾರೆ. ಅಕ್ಟೋಬರ್ ತಿಂಗಳಿನಲ್ಲಿಯೇ 11,770 ವಿಮಾನಗಳು ಆಗಮಿಸಿವೆ.












Click it and Unblock the Notifications