ಐಐಎಂಬಿಯಲ್ಲಿ ಹಿಂದಿ ಪ್ರಮಾಣ ಪತ್ರದ ಕಿರಿಕ್
ಬೆಂಗಳೂರು, ಫೆಬ್ರವರಿ 02: ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಇತ್ತೀಚೆಗೆ ಹೊರಡಿಸಿರುವ ಸುತ್ತೋಲೆ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪದವಿ ಪ್ರಮಾಣಪತ್ರವನ್ನು ಹಿಂದಿ ಭಾಷೆಯಲ್ಲೂ ನೀಡಲು ಐಐಎಂ ಮುಂದಾಗಿದ್ದು, ವಿವಾದಕ್ಕೆ ಕಾರಣವಾಗಿದೆ. ಈ ವಿವಾದದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ತಿಳಿದು ಬಂದಿದೆ.
'ವಿಶ್ವವಿದ್ಯಾಲಯಗಳ ವೆಬ್ ಸೈಟಿನಲ್ಲಿ ಕನ್ನಡ ಕಡ್ಡಾಯ'
ವಿದ್ಯಾರ್ಥಿಗಳು ತಮ್ಮ ಹೆಸರನ್ನು ಹಿಂದಿಯಲ್ಲೂ ಬರೆದು ಕಳುಹಿಸುವಂತೆ ಸೂಚಿಸಲಾಗಿತ್ತು. ಇದು ಹಿಂದಿ ಹೇರಿಕೆಯ ಕ್ರಮ ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದರು.
ಹಿಂದಿಯೇನೂ ರಾಷ್ಟ್ರ ಭಾಷೆಯಲ್ಲ. ಹಾಗೊಂದು ವೇಳೆ ಎರಡು ಭಾಷೆಗಳಲ್ಲಿ ಪ್ರಮಾಣ ಪತ್ರ ವಿತರಿಸಬೇಕೆಂದಿದ್ದರೆ ಇಂಗ್ಲೀಷ್ ಜೊತೆ ನಮ್ಮ ಮಾತೃ ಭಾಷೆಗಳಲ್ಲಿ ನೀಡುವಂತೆ ವಿದ್ಯಾರ್ಥಿಗಳು ಆಗ್ರಹಿಸಿದ್ದರು.
ಹಿಂದಿ ಹೇರಲು ಹೊರಟ ಬೆಂಗಳೂರು ಐಐಎಂ ವಿರುದ್ಧ ಪ್ರತಿಭಟನೆ
ಐಐಎಂನ ಸುತ್ತೋಲೆ ವಿವಾದಕ್ಕೆ ಕಾರಣವಾಗುತ್ತಿದ್ದಂತೆಯೇ ಈ ಬಗ್ಗೆ ಸ್ಪಷ್ಟನೆ ಕೋರಿ ಐಐಎಂ ಬಿ ನಿರ್ದೇಶಕ ಜಿ ರಘುರಾಮ್, ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ.ಜಿ ಸಿದ್ದರಾಮಯ್ಯ ಅವರು ಪತ್ರ ಬರೆದಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಐಐಎಂ ನಿರ್ದೇಶಕ ರಘುರಾಮ್, ಇದು ಪ್ರಸ್ತಾವನೆಯಷ್ಟೇ, ಇನ್ನೂ ಯಾವುದೇ ಅಂತಿಮ ತೀರ್ಮಾನ ಕೈಗೊಂಡಿಲ್ಲ. ಯಾವುದೇ ಭಾಷೆ ಹೇರಿಕೆ ನಡೆಯುವುದಿಲ್ಲ. ವಿದ್ಯಾರ್ಥಿಗಳ ಹಿತ ಮುಖ್ಯ ಎಂದಿದ್ದಾರೆ.