ನಮಗೇನೂ ಚಿಂತೆ ಇಲ್ಲ, ಯಡಿಯೂರಪ್ಪ ಅವರಿಗೆ ಹೆಚ್ಚಿನ ಆತುರ: ಬಂಡೆಪ್ಪ ಕಾಶೆಂಪೂರ
ಬೆಂಗಳೂರು, ಜುಲೈ 20: ಅತೃಪ್ತರ ಶಾಸಕರ ರಾಜೀನಾಮೆ ಅಂಗೀಕಾರ ಆಗಿಲ್ಲ ಎಂದು ನಮಗೇನೂ ಚಿಂತೆ ಇಲ್ಲ , ಆದರೆ ಯಡಿಯೂರಪ್ಪ ಅವರು ತುಂಬಾ ಆತುರದಲ್ಲಿ ಇದ್ದಂತೆ ಕಾಣುತ್ತಿದೆ ಎಂದು ಸಚಿವ ಬಂಡೆಪ್ಪ ಕಾಶೆಂಪೂರ ಹೇಳಿದ್ದಾರೆ.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅತೃಪ್ತ ಶಾಸಕರ ರಾಜೀನಾಮೆ ಅಂಗೀಕಾರವಾಗಿಲ್ಲ. ನಾವೆಲ್ಲ ನಿಶ್ಚಿಂತೆಯಿಂದ ಇದ್ದೇವೆ. ಆದರೆ ಓಲ್ಡ್ ಮ್ಯಾನ್ ಈಸ್ ಇನ್ ಹರಿ ಎಂದು ಜೆಡಿಎಸ್ ಶಾಸಕ ಬಂಡೆಪ್ಪ ಕಾಶೆಂಪುರ ಯಡಿಯೂರಪ್ಪನವರ ಕುರಿತು ವ್ಯಂಗ್ಯವಾಡಿದರು.
ಬಿಜೆಪಿಯವರಿಂದ ರಾಜ್ಯದಲ್ಲಿ ಕೆಟ್ಟ ಪರಿಸ್ಥಿತಿ ಬಂದಿದೆ. ಶ್ರೀಮಂತ್ ಪಾಟೀಲ್ ಆಪರೇಷನ್ ಕಮಲದಲ್ಲಿ ಸಿಲುಕಿರುವ ಶಾಸಕ. ಮುಂಬೈನಲ್ಲಿರುವ ಶ್ರೀಮಂತ್ ಪಾಟೀಲ್ ಭೇಟಿಗೆ ಪೊಲೀಸರು ಬಿಡುತ್ತಿಲ್ಲ.

ಬಿಜೆಪಿ ಅಧಿಕಾರದಲ್ಲಿರುವಾಗ ಪಕ್ಷೇತರರನ್ನು ಅನರ್ಹಗೊಳಿಸಿದಾಗ ಸುಪ್ರೀಂಕೋರ್ಟ್ ಛೀಮಾರಿ ಹಾಕಿತ್ತು. ಬಿ.ಎಸ್. ಯಡಿಯೂರಪ್ಪನವರಿಗೆ ಆತಂಕವಿದೆ. ಅಡ್ವಾಣಿಯವರಂತೆ ತಮ್ಮನ್ನೂ ಮನೆಯಲ್ಲಿ ಕೂರಿಸುತ್ತಾರೆ ಎಂಬ ಭಯ ಅವರಿಗೆ. ಹಾಗಾಗಿ ಇಷ್ಟು ಅವಸರ ಮಾಡುತ್ತಿದ್ದಾರೆ ಎಂದರು.
ಕುಮಾರಸ್ವಾಮಿಯವರಿಗೆ ಇಂತಹ ಕೆಲಸ ಮಾಡುವುದು ದೊಡ್ಡ ಕೆಲಸವಲ್ಲ. ಆದರೆ ಜನರಿಗೆ ತಪ್ಪು ಸಂದೇಶ ಹೋಗಬಾರದು ಎಂಬ ಕಾರಣಕ್ಕೆ ಸುಮ್ಮನಿದ್ದೇವೆ ಎಂದರು. ಕುಮಾರಸ್ವಾಮಿಯವರಂತಹ ಮುಖ್ಯಮಂತ್ರಿ ಸಿಗಬೇಕಾದರೆ ರಾಜ್ಯದ ಜನರು ಪುಣ್ಯ ಮಾಡಿದ್ದಾರೆ. ದೇವರ ಚಮತ್ಕಾರದಿಂದ ಅತೃಪ್ತ ಶಾಸಕರು ವಾಪಸ್ ಬರಬಹುದು.
ಶುಕ್ರವಾರ ರೆಸಾರ್ಟ್ನಿಂದ ವಿಧಾನಸೌಧಕ್ಕೆ ಹೊರಡುವಾಗ ಜನರು ನೋಡಿ ನಗುತ್ತಿದ್ದರು. ಆದರೆ ನಮ್ಮ ಜೀವ ಕ್ಷೇತ್ರದಲ್ಲಿ, ಜನರ ಮಧ್ಯೆ ಇದೆ ಎಂದು ಹೇಳಿದರು.
ದಿನೇ ದಿನೇ ಕರ್ನಾಟಕ ರಾಜಕೀಯ ಹೊಸ ರೂಪ ಪಡೆದುಕೊಳ್ಳುತ್ತಿದೆ. ರಾಜ್ಯಪಾಲರ ನಿರ್ದೇಶನ ಪಾಲನೆ ಮಾಡದ ಸಮ್ಮಿಶ್ರ ಸರ್ಕಾರದ ವಿರುದ್ಧ ರಾಜ್ಯಪಾಲರು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ.
ರಾಮಲಿಂಗಾರಡ್ಡಿ ಹಾಗೂ ದೇವೇಗೌಡರ ನಡುವೆ ಗುಪ್ತವಾದ ಚರ್ಚೆ ನಡೆದಿದೆ. ಕೆಲವು ಶಾಸಕರು ಇನ್ನೂ ರೆಸಾರ್ಟ್ನಲ್ಲಿದ್ದಾರೆ. ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಸೋಮವಾರ ವಿಶ್ವಾಸಮತ ಯಾಚನೆ ಮಾಡುವುದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ.












Click it and Unblock the Notifications