ಬೆಂಗಳೂರಲ್ಲಿ ಯುಎಸ್ ವೀಸಾ ಕೇಂದ್ರ ಸ್ಥಾಪನೆಗೆ ಮತ್ತೆ ಮನವಿ
ಬೆಂಗಳೂರು, ಮೇ 19: ಬೆಂಗಳೂರಲ್ಲಿ ಯುಎಸ್ ವೀಸಾ ಕೇಂದ್ರ ಸ್ಥಾಪನೆಗಾಗಿ ಮತ್ತೊಮ್ಮೆ ಅಧಿಕೃತವಾಗಿ ಮನವಿ ಮಾಡಿಕೊಳ್ಳಲಾಗಿದೆ. ಉಪ ಮುಖ್ಯಮಂತ್ರಿ ಡಾ. ಸಿ.ಎನ್ ಅಶ್ವಥ ನಾರಾಯಣ ಅವರು ಭಾರತದಲ್ಲಿನ ಅಮೆರಿಕ ರಾಯಭಾರಿ ರಾಬರ್ಟ್ ಜಿ ಬುರ್ಗೆಸ್ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿ ಈ ಮನವಿ ಸಲ್ಲಿಸಿದರು. ಈ ಮುಂಚೆ ಸಿದ್ದರಾಮಯ್ಯ ಅವರ ಸರ್ಕಾರ ವಿದ್ದಾಗ ಇದೇ ರೀತಿ ಮನವಿ ಸಲ್ಲಿಸಲಾಗಿತ್ತು.
ಕೊವಿಡ್ 19 ನಂತರ ಆರ್ಥಿಕ ಪುನಶ್ಚೇತನಕ್ಕೆ ನಾಂದಿ ಹಾಡಲು ಅಮೆರಿಕದ ನಗರಗಳು ಹಾಗೂ ಬೆಂಗಳೂರಿನ ಜೊತೆ ನಿರಂತರ ಸಂಪರ್ಕ ಸಾಧ್ಯತೆಗೆ ಈ ವೀಸಾ ಕೇಂದ್ರ ಸಹಕಾರಿ ಎಂದು ಸಭೆಯಲ್ಲಿ ಡಾ. ಅಶ್ವಥ್ ವಿವರಿಸಿದರು. ಕರ್ನಾಟಕದಲ್ಲಿ ಹೂಡಿಕೆಗೆ ಬೇಕಾದ ವಾತಾವರಣವನ್ನು ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ರೂಪಿಸಿದೆ ಎಂದರು.
ಚೀನಾದಿಂದ ಕಂಪನಿಗಳು ಭಾರತದೆಡೆಗೆ ಸೆಳೆಯಲು ಬಂಡವಾಳ ಹೂಡಿಕೆ ಪ್ರಚಾರ ಟಾಸ್ಕ್ ಫೋರ್ಸ್ ರಚಿಸಲಾಗಿದೆ. ಕಾರ್ಮಿಕ ಕಾಯ್ದೆ ತಿದ್ದುಪಡಿ ಮಾಡಲಾಗಿದ್ದು, ಹೂಡಿಕೆಗೆ ತಕ್ಕ ವಾತವರಣ ಇಲ್ಲಿದೆ ಎಂದು ಹೇಳಿದರು.

ಈ ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ ರಮಣ ರೆಡ್ಡಿ, ಕರ್ನಾಟಕ ಇನ್ನೋವೇಷನ್ ಹಾಗೂ ತಂತ್ರಜ್ಞಾನ ಸೊಸೈಟಿ ವ್ಯವಸ್ಥಾಪಕ ನಿರ್ದೇಶಕರಾದ ಮೀನಾ ನಾಗರಾಜ್ ಮುಂತಾದವರು ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಕರ್ನಾಟಕದಲ್ಲಿ ಅಮೆರಿಕ ಎರಡನೆ ಅತಿದೊಡ್ಡ ಹೂಡಿಕೆ ರಾಷ್ಟ್ರ ವಾಗಿದೆ. ಬೆಂಗಳೂರಿನಲ್ಲಿ ಅಮೆರಿಕ ಮೂಲದ 300 ಕಂಪೆನಿಗಳು ಕಾರ್ಯನಿರ್ವಹಿಸುತ್ತಿವೆ. ಅಮೆರಿಕದ ಸ್ಯಾನ್ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವಿನ ಸಾಮ್ಯತೆಗಳನ್ನು ಗಮನಸಿದರೆ ಇವೆರಡೂ 'ಸಹೋದರಿ ನಗರ'ಗಳಾಗಿ ಬಿಂಬಿಸಲ್ಪಡುತ್ತಿವೆ. ಬೆಂಗಳೂರು ಭಾರತದ ಸಿಲಿಕಾನ್ ವ್ಯಾಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ದಕ್ಷಿಣ ಭಾರತದಿಂದ ಅಮೆರಿಕಕ್ಕೆ ತೆರಳುವವರ ಪೈಕಿ ಶೇ 70ರಷ್ಟು ಮಂದಿ ಕರ್ನಾಟಕದವರಾಗಿದ್ದಾರೆ.
ಏಕಗವಾಕ್ಷಿ ಅರ್ಜಿಗಳ ವಿಲೇವಾರಿ ಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವುದು, ಭೂಮಿಯನ್ನು ಕೊಳ್ಳುವ ಹಾಗೂ ಪರಭಾರೆ ಮಾಡಿಕೊಳ್ಳುವ ನಿಯಮಗಳ ಸಡಲಿಕೆ, ರಾಜ್ಯದಲ್ಲಿ ನೂತನ ಕಾರ್ಖಾನೆಯನ್ನು ಪ್ರಾರಂಭಿಸಲು ಇರುವ ನಿಯಮಗಳಲ್ಲಿ ಸ್ಪಷ್ಟತೆ ತರುವುದು ಹೀಗೆ ಹತ್ತು ಹಲವು ಸಲಹೆಗಳನ್ನು ಕರ್ನಾಟಕದ ಕೈಗಾರಿಕೋದ್ಯಮಿಗಳಿಂದ ಇತ್ತೀಚೆಗೆ ಸಚಿವ ಜಗದೀಶ್ ಶೆಟ್ಟರ್ ಪಡೆದುಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.












Click it and Unblock the Notifications