ಇಂದೂ ಬೆಂಗಳೂರು-ಮೈಸೂರು ರಸ್ತೆ ಬಂದ್?
ಬೆಂಗಳೂರು, ಸೆಪ್ಟೆಂಬರ್ 07 : ಸುಪ್ರೀಂಕೋರ್ಟ್ ಆದೇಶಕ್ಕೆ ತಲೆಬಾಗಿದ ಕರ್ನಾಟಕ ಸರ್ಕಾರ ರಾತ್ರೋರಾತ್ರಿ ತಮಿಳುನಾಡಿಗೆ ಕಾವೇರಿ ನೀರು ಹರಿಸಿದೆ. ನೀರು ಬಿಡುಗಡೆ ಖಂಡಿಸಿ ಮುಂಜಾನೆಯಿಂದಲೇ ಮಂಡ್ಯದಲ್ಲಿ ಪ್ರತಿಭಟನೆ ಆರಂಭವಾಗಿದೆ.
ಮಂಗಳವಾರ ಮಂಡ್ಯ ಬಂದ್ ಹಿನ್ನಲೆಯಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. 2ನೇ ದಿನವಾದ ಇಂದೂ ಹೆದ್ದಾರಿಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಲಿದೆ. ಮಂಡ್ಯದಲ್ಲಿ ಮುಂಜಾನೆಯಿಂದಲೇ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ.[ಸುಪ್ರೀಂ ಆದೇಶ ಪಾಲನೆ, ತಮಿಳುನಾಡಿಗೆ ನೀರು]

ಕಾವೇರಿ ಪ್ರತಿಭಟನೆ ಹಿನ್ನಲೆಯಲ್ಲಿ ಕೆಎಸ್ಆರ್ಟಿಸಿ ಬಸ್ಸುಗಳು ಇಂದೂ ಸಹ ತಮಿಳುನಾಡಿಗೆ ಸಂಚಾರ ನಡೆಸುವುದಿಲ್ಲ. ಮಂಗಳವಾರ ತಮಿಳುನಾಡಿನಿಂದ ಬಂದ ವಾಹನಗಳು ಹೊಸೂರು ರಸ್ತೆಯಲ್ಲಿ ನಿಂತಿದ್ದವು. ಇಂದೂ ಸಹ ವಾಹನಗಳು ಬೆಂಗಳೂರು ಪ್ರವೇಶಿಸುವ ಸಾಧ್ಯತೆ ಕಡಿಮೆ ಇದೆ.[ಕರ್ನಾಟಕ ಬಂದ್ : 1,200 ಸಂಘಟನೆಗಳ ಬೆಂಬಲ]
ಬೆಂಗಳೂರು-ಮೈಸೂರು ರಸ್ತೆ ಮತ್ತು ಹೊಸೂರು ರಸ್ತೆಯಲ್ಲಿ ಸಂಚಾರ ನಡೆಸದಂತೆ ಪೊಲೀಸರು ಸಲಹೆ ನೀಡಿದ್ದಾರೆ. ಮಂಡ್ಯದಲ್ಲಿ ಸರಣಿ ಪ್ರತಿಭಟನೆ ನಡೆಯುತ್ತಿರುವುದರಿಂದ ಹೆಚ್ಚಿನ ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು ಮಂಡ್ಯದಲ್ಲಿ ನಿಯೋಜಿಸಲಾಗಿದೆ.
ಪ್ರತಿಭಟನೆ ಹಿನ್ನಲೆಯಲ್ಲಿ ಕೆಆರ್ಎಸ್ ಮತ್ತು ಬೃಂದಾವನ ಗಾರ್ಡನ್ಗೆ ಮೂರು ದಿನಗಳ ಕಾಲ ಪ್ರವೇಶ ನಿಷೇಧಿಸಲಾಗಿದೆ. ಮಂಡ್ಯದಲ್ಲಿ ಇಂದೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.












Click it and Unblock the Notifications