ಮಾನವೀಯತೆ ಮರೆತ ವೈದ್ಯರು ನಿಲ್ಲದ ರೋಗಿಗಳ ಅಳಲು
ಬೆಂಗಳೂರು, ನವೆಂಬರ್16 : ಕರ್ನಾಟಕ ಖಾಸಗಿ ಆಸ್ಪತ್ರೆ ನಿಯಂತ್ರಣ ತಿದ್ದುಪಡಿ ವಿಧೇಯಕ(ಕೆಪಿಎಂಇ) ವಿರುದ್ಧ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟಿದ್ದು, ಸರ್ಕಾರದೊಂದಿಗಿನ ಸಂಧಾನ ಮಾತುಕತೆ ಮತ್ತೆ ವಿಫಲವಾದ ಹಿನ್ನಲೆಯಲ್ಲಿ ಇಂದಿನಿಂದ (ನ.16)ರಿಂದ ಒಪಿಡಿ (ಹೊರ ರೋಗಿಗಳ ವಿಭಾಗ) ಬಂದ್ ಮಾಡಲು ನಿರ್ಧರಿಸಲಾಗಿದೆ.
In Pics:ವೈದ್ಯರ ಮುಷ್ಕರ : ಎಲ್ಲಾ ಕಡೆ ಆಸ್ಪತ್ರೆ ಬಂದ್ ಬಂದ್ ಬಂದ್
ಬೆಂಗಳೂರು ನಗರಾಧ್ಯಂತ ಇರುವ ಎಲ್ಲಾ ಖಾಸಗಿ ಆಸ್ಪತ್ರೆಯ ಹೊರ ರೋಗಿ ವಿಭಾಗವನ್ನು ಬಂದ್ ಮಾಡಲಾಗಿದೆ. ಕೆಲವು ಆಸ್ಪತ್ರೆಗಳು ಬಾಗಿಲು ತೆಗೆದಿವೆ. ಆದರೆ ಹೊರರೋಗಿ ವಿಭಾಗವನ್ನು ಮುಚ್ಚಲಾಗಿದೆ. ಇನ್ನು ಕೆಲವು ಆಸ್ಪತ್ರೆಗಳ ಗೇಟ್ ಗಳಿಗೆ ಮುಷ್ಕರದ ಬ್ಯಾನರ್ ಗಳನ್ನು ಅಂಟಿಸಲಾಗಿದೆ. ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಆಸ್ಪತ್ರೆ ಖಾಲಿ ಖಾಲಿ: ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ರೋಗಿಗಳು ಬಂದು ಸರದಿಯಲ್ಲಿ ನಿಲ್ಲುತ್ತಿದ್ದರು. ಆದರೆ ಇಂದು ಆಸ್ಪತ್ರೆಯಲ್ಲಿ ಸ್ಮಶಾನ ಮೌನವಿತ್ತು. ಕೆಲವೊಂದು ನರ್ಸ್ ಗಳು ಕೆಲವರು ಓಡಾಡುತ್ತಿದ್ದರು ಬಿಟ್ಟರೆ ಎಲ್ಲಿಯೂ ವೈದ್ಯರ ಸುಳಿವು ಇರಲಿಲ್ಲ. ಇನ್ನು ಕೆಲವು ಆಸ್ಪತ್ರೆಗಳಲ್ಲಿ ವೃದ್ಧ ವೈದ್ಯರು ಕೆಲವರನ್ನು ಬಿಟ್ಟರೆ ಯಾರೂ ಕೂಡ ಆಸ್ಪತ್ರೆಗಳಿಗೆ ಬಂದಿಲ್ಲ.
ಬೆಂಗಳೂರು ಆಸ್ಪತ್ರೆಗಳ ಇಂದಿನ ಸಂಪೂರ್ಣ ಚಿತ್ರಣ:
ಬೆಂಗಳೂರು ಜಯನಗರದಲ್ಲಿರುವ ದಿ ಬೆಂಗಳೂರು ಹಾಸ್ಪಿಟಲ್ ನಲ್ಲಿ ಹೊರ ರೋಗಿ ವಿಭಾಗವನ್ನು ಮುಚ್ಚಲಾಗಿತ್ತು. ಆಸ್ಪತ್ರೆಯಲ್ಲಿ ರೋಗಿಗಳಿಗೆ ವೈದ್ಯರು ಲಭ್ಯವಿರಲಿಲ್ಲ. ಆಸ್ಪತ್ರೆ ಮುಂಭಾಗ ಹಾಗೂ ಆವರಣದಲ್ಲಿ ಕೆಪಿಎಂಇ ವೈದ್ಯರ ಮುಷ್ಕರಕ್ಕೆ ಬೆಂಬಲ ನೀಡುವುದಾಗಿ ಬ್ಯಾನರ್ ಗಳನ್ನು ಹಾಕಿಕೊಂಡಿದ್ದರು. ಜಯನಗರದ ಕ್ಲೌಡ್ ನೈನ್ ಆಸ್ಪತ್ರೆ, ರಾಮಕೃಷ್ಣ ಆಸ್ಪತ್ರೆಗಳ ಪ್ರವೇಶ ದ್ವಾರವನ್ನೇ ಬಂದ್ ಮಾಡಲಾಗಿತ್ತು.
ಹೊಸೂರು ರಸ್ತೆಯಲ್ಲಿರುವ ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಓಪಿಡಿ ಬಂದ್, ಪ್ರತಿದಿನ ಸರಿಸುಮಾರು ಎರಡು ಸಾವಿರ ಹೊರರೋಗಿಗಳು ಸೇಂಟ್ ಜಾನ್ಸ್ ಆಸ್ಪತ್ರೆಗೆ ಬರುತ್ತಿದ್ದರು. ಇಂದು ಬೆಳಗ್ಗೆ ಆರು ಗಂಟೆಯಿಂದಲೇ ಹೊರರೋಗಿಗಳ ವಿಭಾಗ ಬಂದ್ ಆದ ಹಿನ್ನೆಲೆಯಲ್ಲಿ ರೋಗಿಗಳು ಪರದಾಡುವಂತಾಗಿದೆ.

ಬನ್ನೇರುಘಟ್ಟ ರಸ್ತೆಯ ಸಾಗರ್ ಆಸ್ಪತ್ರೆ, ಪೋರ್ಟಿಸ್ , ಅಪೋಲೋ ಆಸ್ಪತ್ರೆಯ ಹೊರರೋಗಿಗಳ ವಿಭಾಗವೂ ಕೂಡ ಬಂದ್ ಆಗಿದೆ. ಕೇವಲ ಒಳ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದ್ದು ಕಿಮೋ ಥೆರಪಿ, ಡಯಾಲಿಸಿಸ್ ಗೆ ಯಾವುದೇ ತೊಂದರೆಯಿಲ್ಲ.
ಇನ್ನು ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲೂ ಹೊರರೋಗಿಗಳ ವಿಭಾಗ ಬಂದ್ ಆಗಿದ್ದು ಕೆಪಿಎಂಇ ಕಾಯ್ದೆ ವಿರೋಧಿಸಿ ಇಂದು ಹೊರರೋಗಿಗಳ ಸೇವೆಯನ್ನು ರದ್ದುಗೊಳಿಸಲಾಗಿದೆ. ಅನನುಕೂಲತೆಗಾಗಿ ವಿಷಾಧಿಸುತ್ತೇವೆ ಎಂದು ಆಸ್ಪತ್ರೆ ಮುಂದೆ ನೋಟಿಸ್ ಹಾಕಿದ್ದಾರೆ.
ಬೆಂಗಳೂರಿನ ಹೊರ ವಲಯ ಆನೇಕಲ್ ನಲ್ಲೂ ಓಪಿಡಿ ಬಂದ್ : ಹೊಸೂರು ಮುಖ್ಯರಸ್ತೆಯ ನಾರಾಯಣ ಹೆಲ್ತ್ ಸಿಟಿಯನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ. ನಾರಾಯಣ ಹೆಲ್ತ್ ಸಿಟಿ ಆವರಣದಲ್ಲಿರುವ ಸ್ಪರ್ಶ್ ಆಸ್ಪತ್ರೆ, ಕಿರಣ್ ಮಜುಮ್ದಾರ್ ಶಾ ಕ್ಯಾನ್ಸರ್ ಆಸ್ಪತ್ರೆಯೂ ಕೂಡ ಬಂದ್ ಆಗಿದೆ. ಎಲೆಕ್ಟ್ರಾನಿಕ್ ಸಿಟಿ, ಆನೇಕಲ್ ಭಾಗದಲ್ಲಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಬಹುತೇಕ ಬಂದ್ ಆಗಿದೆ.

ರೋಗಿಗಳು ಹೊರಕ್ಕೆ:
ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ: ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಚಿಕಿತ್ಸೆಗಾಗಿ ನೂರಾರು ಜನ ಬಂದಿದ್ದಾರೆ. ಮುಷ್ಕರದ ಮಾಹಿತಿ ಇಲ್ಲದೆ ರೋಗಿಗಳು ಆಗಮಿಸಿದ್ದಾರೆ.
ಆಪರೇಷನ್ ಮುಂದೂಡಿದ ಬೆಂಗಳೂರಿನ ತಿಲಕನಗರದಲ್ಲಿರುವ ಸಾಗರ್ ಆಸ್ಪತ್ರೆ ಕೇವಲ ಡಯಾಲಿಸಿಸ್, ಕ್ಯಾನ್ಸರ್ ಪೇಷಂಟ್ಗಳ ಕಿಮೊ ಥೆರಪಿ ಮತ್ತು ಒಳರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ ನಿಗದಿಯಾಗಿದ್ದ ಆಪರೇಷನ್ ಗಳನ್ನೂ ಏಕಾಏಕಿ ಮುಂದೂಡಲಾಗಿದೆ.
ಸಾಗರ್ ಆಸ್ಪತ್ರೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೋಗಿಯೊಬ್ಬರ ಸಂಬಂಧಿ ಸ್ಮಿತಾ ಕಿಡ್ನಿ ರೋಗಿಗೆ ಪಿಸ್ತುಲಾ ಆಪರೇಷನ್ ಮಾಡದೆ ಮನೆಗೆ ಹೋಗಿ ಎಂದು ವೈದ್ಯರು ಹೇಳಿದ್ದಾರೆ. ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೂ ಖುಡ ಚಿಕಿತ್ಸೆ ನೀಡದೇ ವೈದ್ಯರು ಹಿಂದಕ್ಕೆ ಕಳುಹಿಸುತ್ತಿದ್ದಾರೆ.

ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿಯೂ ರೋಗಿಗಳ ಪರದಾಟ ಪ್ರಾರಂಭವಾಗಿದೆ, ರಿಸೆಪ್ಷನ್ ಕೂಡ ಬಂದ್ ಮಾಡಲಾಗಿದೆ. ರಾಜ್ಯ ಸರ್ಕಾರ ಸೂಕ್ತ ನಿರ್ಧಾರ ಕೈಗೊಳ್ಳುವವರೆಗೂ ಪ್ರತಿಭಟನೆ ಮುಂದುವರೆಸುತ್ತೇವೆ ಎಂದು ಆಸ್ಪತ್ರೆಯ ಜನರಲ್ ಮ್ಯಾನೇಜರ್ ಡಾ. ಅನಂತ್ ರಾವ್ ಹೇಳಿಕೆ ನೀಡಿದ್ದಾರೆ.
ಖಾಸಗಿ ವೈದ್ಯರ ಮುಷ್ಕರದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಹೆಚ್ಚಾದ ರೋಗಿಗಳು: ಖಾಸಗಿ ಆಸ್ಪತ್ರೆ ವೈದ್ಯರ ಪ್ರತಿಭಟನೆಯಿಂದ ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ಕೆಲವರನ್ನು ಬೇರೆ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಆಂಬುಲೆನ್ಸ್ ಗಳಲ್ಲಿ ಸತ್ತ ಹೆಣಗಳನ್ನು ಸಾಗಿಸುವಂತೆ ರೋಗಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ.ರೋಗಿಗಳನ್ನು ತುರ್ತು ಚಿಕಿತ್ಸಾ ಘಟಕದ ವೈದ್ಯರು ಸರಿಯಾಗಿ ನೋಡಿಕೊಳ್ಳುತ್ತಿಲ್ಲ.
ಕಪ್ಪು ಬಟ್ಟೆ ಧರಿಸಿ ವೈದ್ಯರ ಪ್ರತಿಭಟನೆ:
ಕೆಪಿಎಂಇ ಕಾಯ್ದೆ ವಿರೋಧಿಸಿ ನಾರಾಯಣ ನೇತ್ರಾಲಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಆಸ್ಪತ್ರೆ ಸಿಬ್ಬಂದಿಗಳು ಕಪ್ಪು ಬಟ್ಟೆ ಧರಿಸುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದಾರೆ. ಚಾಮರಾಜ ಪೇಟೆಯ ಐಎಂಎ ಆವರಣದಲ್ಲಿ ಸಾವಿರಾರು ವೈದ್ಯರಿಂದ ಪ್ರತಿಭಟನೆ ಆರಂಭವಾಗಿದೆ.ಸಂಜೆ ಆರು ಗಂಟೆಯವರೆಗೂ ಪ್ರತಿಭಟನೆ ನಡೆಸುವುದಾಗಿ ಫನಾ ಒಕ್ಕೂಟದ ಅಧ್ಯಕ್ಷ ಸಿ. ಜಯಣ್ಣ ಹೇಳಿದ್ದಾರೆ.
ಜಯಪುರದಲ್ಲಿ ವೈದ್ಯರ ವಿರುದ್ಧ ಪ್ರತಿಭಟನೆ: ಖಾಸಗಿ ಆಸ್ಪತ್ರೆಗಳ ಬಂದ್ ಹಾಗೂ ಸೇವೆ ಸ್ಥಗಿತಗೊಳಿಸಿರುವ ವೈದ್ಯರ ವಿರುದ್ಧ ವಿವಿಧ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ಮಾಡುತ್ತಿದ್ದಾರೆ. ವಿಜಯಪುರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಕೂಡಲೆ ಖಾಸಗಿ ಆಸ್ಪತ್ರೆಗಳನ್ನು ಆರಂಭಿಸಿ ರೋಗಿಗಳಿಗೆ ಸೇವೆ ನೀಡಬೇಕೆಂದು ಒತ್ತಾಯಿಸಲಾಗುತ್ತಿದೆ.
ಮುಂದುವರೆದ ಸಾವಿನ ಸರಣಿ: ಹಾವೇರಿ ಜಿಲ್ಲೆಯಲ್ಲಿ ವೈದ್ಯರ ಮುಷ್ಕರಕ್ಕೆ ಮತ್ತೋರ್ವ ಮಹಿಳೆ ಬಲಿಯಾಗಿದ್ದಾಳೆ. ಸೂಕ್ತ ಚಿಕಿತ್ಸೆ ಸಿಗದೆ ನೀಲಮ್ಮ ಚನ್ನಬಸಯ್ಯ ಹಿರೇಮಠ ಅವರು ಸಾವನ್ನಪ್ಪಿದ್ದಾರೆ. ಹಾವೇರಿ ಸಮೀಪದ ಕುರುಬಗೊಂಡ ಗ್ರಾಮದ ನಿವಾಸಿಯಾಗಿದ್ದ ಅವರು ಎದೆನೋವಿನಿನ ಪರಿಣಾಮ ಖಾಸಗಿ ಆಸ್ಪತ್ರೆ ಇಲ್ಲದ್ದಕ್ಕೆ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲಾಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ. ನಾಲ್ಕು ದಿನದಲ್ಲಿ ಹಾವೇರಿ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ೭ಕ್ಕೆ ಏರಿಕೆಯಾಗಿದೆ.












Click it and Unblock the Notifications