ಸ್ಪೀಕರ್ ಎದುರು ವಿಚಾರಣೆಗೆ ಹಾಜರಾಗದ ರಾಮಲಿಂಗಾ ರೆಡ್ಡಿ
ಬೆಂಗಳೂರು, ಜುಲೈ 15: ರಾಜೀನಾಮೆ ನೀಡಿರುವ ಬಿಟಿಎಂ ಲೇಔಟ್ನ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿ ಅವರು ಸೋಮವಾರ ಸ್ಪೀಕರ್ ಎದುರು ವಿಚಾರಣೆಗೆ ಹಾಜರಾಗಲಿಲ್ಲ.
ಮುಂಬೈನಲ್ಲಿ ಅತೃಪ್ತ ಶಾಸಕರ ಜತೆಯಲ್ಲಿ ಇರುವ ಮಹಾಲಕ್ಷ್ಮಿ ಲೇಔಟ್ನ ಜೆಡಿಎಸ್ ಶಾಸಕ ಗೋಪಾಲಯ್ಯ ಅವರೂ ವಿಚಾರಣೆಗೆ ಗೈರಾದರು. ಈ ಇಬ್ಬರೂ ಶಾಸಕರು ಜುಲೈ 6ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದು ಕಚೇರಿಯಲ್ಲಿ ಸ್ಪೀಕರ್ ರಮೇಶ್ ಕುಮಾರ್ ಹಾಜರಿರಲಿಲ್ಲ. ಈ ಶಾಸಕರ ರಾಜೀನಾಮೆ ಕ್ರಮಬದ್ಧವಾಗಿದೆ ಎಂದಿದ್ದ ಸ್ಪೀಕರ್, ರಾಜೀನಾಮೆ ನೀಡಿರಲು ಕಾರಣ ತಿಳಿದುಕೊಳ್ಳಲು ವಿಚಾರಣೆಗೆ ಜುಲೈ 15ರಂದು ಸಂಜೆ 4 ಗಂಟೆಗೆ ಸಮಯ ನಿಗದಿಮಾಡಿದ್ದರು.
ಆದರೆ, ಈ ಇಬ್ಬರೂ ಶಾಸಕರು ವಿಚಾರಣೆಗಾಗಿ ಸ್ಪೀಕರ್ ಎದುರು ಹಾಜರಾಗಿಲ್ಲ. ಸ್ವತಃ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಕರೆ ಮಾಡಿದ್ದ ರಾಮಲಿಂಗಾ ರೆಡ್ಡಿ ಅವರು ಅನಾರೋಗ್ಯದ ಕಾರಣದಿಂದ ಇಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು.

ಹೀಗಾಗಿ ವಿಚಾರಣೆಗೆ ಮಂಗಳವಾರ ಅಥವಾ ಬುಧವಾರ ಹಾಜರಾಗಲು ರಾಮಲಿಂಗಾ ರೆಡ್ಡಿ ಅವರಿಗೆ ಸ್ಪೀಕರ್ ಕಾಲಾವಕಾಶ ನೀಡಲಿದ್ದಾರೆ. ಅವರಿಗೆ ಅನುಕೂಲಕರವಾದ ಸಮಯದಲ್ಲಿ ವಿಚಾರಣೆಗೆ ಬರಬಹುದು ಎಂದು ಸ್ಪೀಕರ್ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.
ರಾಮಲಿಂಗಾ ರೆಡ್ಡಿ ಅವರು ಸೋಮವಾರದಿಂದ ವಿಧಾನಸಭೆ ಕಲಾಪಕ್ಕೆ ಹಾಜರಾಗುವುದಾಗಿ ಶನಿವಾರ ತಿಳಿಸಿದ್ದರು. ಜತೆಗೆ ಸ್ಪೀಕರ್ ಎದುರು ಹಾಜರಾಗುವುದಾಗಿಯೂ ಹೇಳಿದ್ದರು.
ಮುಂಬೈನಲ್ಲಿರುವ ಶಾಸಕ ಗೋಪಾಲಯ್ಯ ಅವರು ಸಚಿವಾಲಯದ ಕಾರ್ಯದರ್ಶಿಗೆ ಕರೆ ಮಾಡಿ ತಾವು ವಿಚಾರಣೆಗೆ ಬರಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು ಎನ್ನಲಾಗಿದೆ.
ರಾಜೀನಾಮೆ ನೀಡಿರುವ ಶಾಸಕರಾದ ಆನಂದ್ ಸಿಂಗ್, ಪ್ರತಾಪ್ ಗೌಡ ಪಾಟೀಲ್ ಮತ್ತು ನಾರಾಯಣ ಗೌಡ ಅವರ ವಿಚಾರಣೆಗೆ ಜುಲೈ 12ರಂದು ಸಮಯ ನಿಗದಿಪಡಿಸಲಾಗಿತ್ತು. ಆದರೆ ಈ ಮೂವರು ಶಾಸಕರು ಕೂಡ ಗೈರುಹಾಜರಾಗಿದ್ದರು.












Click it and Unblock the Notifications