ಶಾಸಕರ ಅನರ್ಹತೆ ಕುರಿತು ಸುಪ್ರೀಂಕೋರ್ಟ್ಗೆ ಸ್ಪೀಕರ್ ಅಫಿಡವಿಟ್
ಬೆಂಗಳೂರು, ಜುಲೈ 13: ಇಬ್ಬರು ಶಾಸಕರ ಅನರ್ಹತೆಗೆ ಕೋರಿ ಕಾಂಗ್ರೆಸ್ ಫೆಬ್ರುವರಿ ತಿಂಗಳಿನಲ್ಲಿಯೇ ಸ್ಪೀಕರ್ಗೆ ಅರ್ಜಿ ಸಲ್ಲಿಸಿತ್ತು ಎನ್ನುವುದು ತಿಳಿದುಬಂದಿದೆ.
ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಅವರ ವಿರುದ್ಧ ಅನರ್ಹತೆಗಾಗಿ ಕಾಂಗ್ರೆಸ್ ಫೆಬ್ರುವರಿ 11ರಂದೇ ದೂರು ನೀಡಿತ್ತು. ಈ ಬಗ್ಗೆ ಶುಕ್ರವಾರ ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ಅಫಿಡವಿಟ್ನಲ್ಲಿ ಸ್ಪೀಕರ್ ರಮೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಸಮ್ಮಿಶ್ರ ಸರ್ಕಾರದ ವಿರುದ್ಧ ರಮೇಶ್ ಜಾರಕಿಹೊಳಿ ಅವರ ನೇತೃತ್ವದಲ್ಲಿ ಕೆಲವು ಶಾಸಕರು ಬಂಡಾಯವೆದ್ದಿದ್ದರು. ಸತತ ಪ್ರಯತ್ನದ ಬಳಿಕ ಅವರ ಬಂಡಾಯ ಶಮನ ಮಾಡಲಾಗಿತ್ತು. ಆದರೆ, ರಮೇಶ್ ಜಾರಕಿಹೊಳಿ ಅವರು ಸರ್ಕಾರದಿಂದ ಅಂತರ ಕಾಯ್ದುಕೊಂಡು ತಮ್ಮ ಅಸಮಾಧಾನ ಹೊರಹಾಕುತ್ತಿದ್ದರು. ಕಾಂಗ್ರೆಸ್ ನಾಯಕರೊಂದಿಗೆ ಅವರು ಮಾತುಕತೆಗೆ ಸಿದ್ಧರಿರಲಿಲ್ಲ. ಇದೇ ಸಂದರ್ಭದಲ್ಲಿ ಸರ್ಕಾರ ಅವರ ವಿರುದ್ಧ ದೂರು ನೀಡಿತ್ತು.

ಸುಪ್ರೀಂಕೋರ್ಟ್ಗೆ ಅಫಿಡವಿಟ್ ಸಲ್ಲಿಸಿರುವ ಸ್ಪೀಕರ್ ರಮೇಶ್ ಕುಮಾರ್ಅವರು, ಈ ಶಾಸಕರು ಸ್ಪೀಕರ್ ಕುರ್ಚಿಯ ಘನತೆಗೆ ಧಕ್ಕೆ ತರಲು ಪ್ರಯತ್ನಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ರಮೇಶ್ ಜಾರಕಿಹೊಳಿ ಮತ್ತು ಮಹೇಶ ಕುಮಟಳ್ಳಿ ವಿರುದ್ಧ ಫೆ. 11ರಂದೇ ಕಾಂಗ್ರೆಸ್ ಅನರ್ಹತೆಯ ದೂರು ನೀಡಿತ್ತು. ಫೆ. 14ರಂದು ಇಬ್ಬರಿಗೂ ನೋಟಿಸ್ ನೀಡಲಾಗಿತ್ತು. ಫೆ. 20ರಂದು ಇಬ್ಬರೂ ಉತ್ತರ ಕೊಟ್ಟಿದ್ದರು. ಮಾರ್ಚ್ 3ರಂದು ಮತ್ತೊಂದು ನೋಟಿಸ್ ನೀಡಿದ್ದೇವೆ. ಈ ಅನರ್ಹತೆ ದೂರಿನ ಬಗ್ಗೆ ಈಗಾಗಲೇ ವಾದ ವಿವಾದ ಆಲಿಸಲಾಗಿದೆ. ಅನರ್ಹತೆಯ ತೀರ್ಪು ಕಾಯ್ದಿರಿಸಲಾಗಿದೆ. ತೀರ್ಪು ನೀಡುವುದು ಮಾತ್ರ ಬಾಕಿ ಇದೆ ಎಂದು ಅಫಿಡವಿಟ್ನಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.












Click it and Unblock the Notifications