ಸಚಿವ ಶ್ರೀನಿವಾಸ್ಗೆ ಬಿಜೆಪಿ 60 ಕೋಟಿ ಆಫರ್ ನೀಡಿದ್ದು ನಿಜವೇ?
ಬೆಂಗಳೂರು, ಜುಲೈ 12: ಬಿಜೆಪಿ ಸೇರುವಂತೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಆರ್. ಶ್ರೀನಿವಾಸ್ ಅವರಿಗೆ 60 ಕೋಟಿ ರೂಪಾಯಿ ಆಫರ್ ನೀಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ.
ತುಮಕೂರಿನ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಎಸ್. ಆರ್. ಶ್ರೀನಿವಾಸ್ ಅವರು ಬಿಜೆಪಿ ಸೇರಿದರೆ 60 ಕೋಟಿ ರೂಪಾಯಿ ಆಮಿಷವೊಡ್ಡಲಾಗಿತ್ತು. ಈ ಬಗ್ಗೆ ಶ್ರೀನಿವಾಸ್ ಅವರ ಪತ್ನಿ ಭಾರತಿ ಶ್ರೀನಿವಾಸ್ ಅವರಿಗೆ ಲಂಡನ್ನಿಂದ ಕರೆ ಬಂದಿತ್ತು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾಗಿ ವಿದ್ಯುನ್ಮಾನ ಮಾಧ್ಯಮಗಳು ವರದಿ ಮಾಡಿವೆ.
2009ರಲ್ಲಿಯೂ ಶ್ರೀನಿವಾಸ್ ಅವರಿಗೆ ಬಿಜೆಪಿ ಆಮಿಷವೊಡ್ಡಿತ್ತು. ತುಮಕೂರು ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ ಅವರು ಶ್ರೀನಿವಾಸ್ ಅವರೊಂದಿಗೆ ಮಾತನಾಡಿದ ವಿಡಿಯೋವನ್ನು ಭಾರತಿ ಶ್ರೀನಿವಾಸ್ ಅವರು ಚಿತ್ರೀಕರಿಸಿದ್ದರು ಎಂದು ಹೇಳಲಾಗಿತ್ತು.

ಆ ವಿಡಿಯೋದ ಸಿಡಿಯನ್ನು ಆಗ ಕಾಂಗ್ರೆಸ್ ಬಿಡುಗಡೆ ಮಾಡಿತ್ತು. ಈ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿದ್ದವು. ಈ ಬಾರಿ ಅದಕ್ಕಿಂತಲೂ ಬಿಗಿಯಾದ ಪುರಾವೆ ಇದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ ಎನ್ನಲಾಗಿದೆ.
ಆದರೆ, ಈ ಆಫರ್ ಕುರಿತಾದ ಆರೋಪವನ್ನು ಎಸ್ ಆರ್ ಶ್ರೀನಿವಾಸ್ ನಿರಾಕರಿಸಿದ್ದಾರೆ. ಖಾಸಗಿ ವಾಹಿನಿಯೊಂದರ ಜತೆ ಮಾತನಾಡಿದ ಅವರು, 'ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನು ಪಕ್ಷವನ್ನು ಬಿಡುವುದಿಲ್ಲ' ಎಂದು ತಿಳಿಸಿದ್ದಾರೆ.
'ಯಾವುದೇ ಬಿಜೆಪಿ ಶಾಸಕರು ನನ್ನನ್ನು ಅಥವಾ ನನ್ನ ಪತ್ನಿಯನ್ನು ಸಂಪರ್ಕಿಸಿಲ್ಲ. ಇಲ್ಲದೇ ಇರುವುದನ್ನು ಇದೆ ಎಂದು ನಾನು ಹೇಗೆ ಹೇಳಲಿ' ಎಂದು ಅವರು ಹೇಳಿದ್ದಾರೆ.












Click it and Unblock the Notifications