ಅಂದು ಸಿದ್ದರಾಮಯ್ಯ ವಿರುದ್ಧ, ಇಂದು ಸಿದ್ಧರಾಮಯ್ಯಗೇ ಬದ್ಧ!: ಜೆಡಿಎಸ್ ಸ್ಥಿತಿ
Recommended Video
ಬೆಂಗಳೂರು, ಜುಲೈ 18: ಹೆಚ್ಚೇನಲ್ಲ, ಕೇವಲ ನಾಲ್ಕು ವರ್ಷಗಳ ಹಿಂದಷ್ಟೇ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಬಹುಮತವಿದ್ದರೂ ವಿಶ್ವಾಸಮತ ಸಾಬೀತು ಮಾಡಬೇಕಾದ ಸ್ಥಿತಿಗೆ ಬಂದಿದ್ದರು. ಅದಕ್ಕೆ ಕಾರಣವಾಗಿದ್ದು, ಈಗ ಮುಖ್ಯಮಂತ್ರಿಯಾಗಿ ಅದೇ ಸ್ಥಾನದಲ್ಲಿ ನಿಂತಿರುವ ಎಚ್ ಡಿ ಕುಮಾರಸ್ವಾಮಿ. ಆಗ ಮಾತ್ರವಲ್ಲ, ಎರಡು ವರ್ಷದ ಹಿಂದೆಯೂ ಸಿದ್ದರಾಮಯ್ಯ ಅವರಿಗೆ ಮಹತ್ವದ ಸಂದರ್ಭದಲ್ಲಿ ಜೆಡಿಎಸ್ ಕೈಕೊಟ್ಟಿತ್ತು.
ಈಗ ಕುಮಾರಸ್ವಾಮಿ ಅವರು ಸರ್ಕಾರ ಉಳಿಸಿಕೊಳ್ಳಲು ಸಿದ್ದರಾಮಯ್ಯ ಅವರನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಸಿದ್ದರಾಮಯ್ಯ ಅವರು ಹೆಣೆಯುವ ತಂತ್ರಗಳೇ ಮೈತ್ರಿ ಸರ್ಕಾರದ ಉಳಿವಿಗೆ ಅಮ್ಲಜನಕವಾಗುತ್ತಿದೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 2015ರ ಜುಲೈನಲ್ಲಿ ಕುಮಾರಸ್ವಾಮಿ ಅವರು ಅವಿಶ್ವಾಸ ನಿರ್ಣಯ ಮಂಡಿಸಿದ್ದರು. ಭ್ರಷ್ಟಾಚಾರ ತಡೆಯುವಲ್ಲಿ ಸಿದ್ದರಾಮಯ್ಯ ಅವರು ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಅವರಿಗೆ ಬಿಜೆಪಿ ಬೆಂಬಲ ನೀಡಿರಲಿಲ್ಲ. ಅಲ್ಲದೆ, ಜೆಡಿಎಸ್ ನಿರ್ಣಯವನ್ನು ಮತಕ್ಕೆ ಹಾಕುವ ಮುನ್ನವೇ ಪಕ್ಷದ ಶಾಸಕರು ಸಭಾತ್ಯಾಗ ಮಾಡಿದ್ದರು. ಹೀಗಾಗಿ ಅವಿಶ್ವಾಸ ನಿರ್ಣಯ ತಿರಸ್ಕೃತಗೊಂಡಿತ್ತು.

2017ರ ಜೂನ್ನಲ್ಲಿ ವಿಧಾನಪರಿಷತ್ ಸಭಾಪತಿ ಡಿಎಚ್ ಶಂಕರಮೂರ್ತಿ ಅವರ ವಿರುದ್ಧ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಜೆಡಿಎಸ್ನಿಂದ ಅದಕ್ಕೆ ಬೆಂಬಲ ಸಿಗುತ್ತದೆ ಎಂದು ಸಿದ್ದರಾಮಯ್ಯ ಭಾವಿಸಿದ್ದರು. ಆದರೆ, ಜೆಡಿಎಸ್, ಬಿಜೆಪಿಯನ್ನು ಬೆಂಬಲಿಸಿದ್ದರಿಂದ ಸಿದ್ದರಾಮಯ್ಯ ಅವರ ಉದ್ದೇಶಕ್ಕೆ ಸೋಲಾಗಿತ್ತು.
ಇಂದು ಕುಮಾರಸ್ವಾಮಿ ಅವರು ವಿಶ್ವಾಸಮತಯಾಚನೆಗೆ ಮುಂದಾಗಿದ್ದಾರೆ. ಸರ್ಕಾರ ಉಳಿಸಿಕೊಳ್ಳುವ ಹೊಣೆ ಕಾಂಗ್ರೆಸ್ ಮೇಲೆಯೂ ಇದೆ. ಹೀಗಾಗಿ ವಿಶ್ವಾಸಮತ ಯಾಚನೆಯ ಸಂದರ್ಭವೇ ಎದುರಾಗದಂತೆ ತಡೆಯಲು ಸಿದ್ದರಾಮಯ್ಯ ಅವರು ತಂತ್ರಗಳನ್ನು ರೂಪಿಸುತ್ತಿದ್ದಾರೆ.












Click it and Unblock the Notifications