ನಿಂಬೆಹಣ್ಣು ರೇವಣ್ಣನಿಂದ ವಾಮಾಚಾರ: ರೇಣುಕಾಚಾರ್ಯ ಟೀಕೆ
ಬೆಂಗಳೂರು, ಜುಲೈ 13: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮುಖಂಡರು ಏನೇನೋ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ನಿಂಬೆಹಣ್ಣು ರೇವಣ್ಣ ವಾಮಾಚಾರ ಮಾಡಿಸುತ್ತಿದ್ದಾರೆ. ಆದರೆ ಅದು ಸಫಲವಾಗುವುದಿಲ್ಲ ಎಂದು ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು.
ಯಲಹಂಕ ರಸ್ತೆಯಲ್ಲಿರುವ ರಮಾಡ ರೆಸಾರ್ಟ್ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಮೈತ್ರಿ ಸರ್ಕಾರದ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಅವರು ಸಿಎಂ ಸ್ಥಾನಕ್ಕೆ ಗೌರವದಿಂದ ರಾಜೀನಾಮೆ ನೀಡಿ ಹೋಗಬೇಕು. ನಿಂಬೆಹಣ್ಣು ರೇವಣ್ಣ ವಾಮಾಚಾರ ಮಾಡಿಸುತ್ತಿದ್ದು, ಅವರ ವಾಮಾಚಾರ ಸಫಲವಾಗುವುದಿಲ್ಲ. ಅವರ ವಾಮಾಚಾರದಿಂದಲೇ ದೇವೇಗೌಡರು ಹಾಸನ ಬಿಟ್ಟು ಬರುವಂತಾಯಿತು ಎಂದರು.
ಇಲಾಖೆಯಲ್ಲಿ ಸಿಎಂ, ರೇವಣ್ಣ ಹಸ್ತಕ್ಷೇಪ: ಎಂಟಿಬಿ ನಾಗರಾಜ್ ಆಕ್ರೋಶ
ನಾವೆಲ್ಲ ಒಟ್ಟಾಗಿದ್ದೇವೆ. ಅಧಿವೇಶನದಲ್ಲಿ ಭಾಗವಹಿಸುತ್ತೇವೆ. ನಮ್ಮ ನಾಯಕ ಯಡಿಯೂರಪ್ಪ ಮಾರ್ಗದರ್ಶನದಲ್ಲಿ ಮತ್ತು ವರಿಷ್ಠರು ಸೇರಿ ಮುಂದಿನ ನಡೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಸ್ವಯಂಸೇವಕರು, ಕಾರ್ಯಕರ್ತರಾದ ನಾವು ಅದನ್ನು ಪಾಲಿಸುತ್ತೇವೆ ಎಂದು ರೇಣುಕಾಚಾರ್ಯ ಹೇಳಿದರು.
ರಿವರ್ಸ್ ಆಪರೇಷನ್ ಭಯವಿಲ್ಲ
'ನಮಗೆ ರಿವರ್ಸ್ ಆಪರೇಷನ್ ಭಯವಿಲ್ಲ. ನಾವೆಲ್ಲ ಒಟ್ಟಿಗೆ ಇದ್ದೇವೆ. ಅವರೇ ಬಿದ್ದುಹೋಗುತ್ತಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರೇ ಬೇಸೆತ್ತು ರಾಜೀನಾಮೆ ಕೊಟ್ಟು ಹೋಗಿದ್ದಾರೆ. ಕೆಲವು ಮಾಧ್ಯಮಗಳಲ್ಲಿ ನಮ್ಮ ಅನೇಕ ಶಾಸಕರ ಹೆಸರು ಕೇಳಿಬರುತ್ತಿದೆ. ಶಾಸಕರ ಮನಸ್ಸನ್ನು ಬೇರೆಡೆ ತಿರುಗಿಸಲು ಮಾಧ್ಯಮಗಳಲ್ಲಿ ರಿವರ್ಸ್ ಆಪರೇಷನ್ನ ಸುದ್ದಿ ಹರಿಬಿಡುತ್ತಿದ್ದಾರೆ. ಶಾಸಕರು ನಾವು ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ, ವಿಪ್ ತೆಗೆದುಕೊಳ್ಳುವುದಿಲ್ಲ ಎನ್ನುತ್ತಿದ್ದಾರೆ ಎಂದು ಹೇಳಿದರು.
ಗೆದ್ದೇ ಗೆಲ್ಲುತ್ತೇನೆ ಎನ್ನುವ ಅಚಲ ವಿಶ್ವಾಸದಲ್ಲಿ ಎಚ್ಡಿಕೆ: ಏನಿರಬಹುದು ಕಾರ್ಯತಂತ್ರ?
ನಮಗೆ ಜನಾದೇಶವಿತ್ತು
'ನಮಗೆ ಜನಾದೇಶ ಇತ್ತು. ಅವರು ವಾಮಮಾರ್ಗದ ಮೂಲಕ ಅಧಿಕಾರ ಹಿಡಿದರು. ಬಿಜೆಪಿಯನ್ನು ಹೊರಗಿಡುವ ಒಂದೇ ಕಾರಣಕ್ಕೆ ಸರ್ಕಾರ ರಚಿಸಿದರು. ಅಲ್ಲಿಂದ ಇಲ್ಲಿಯವರೆಗೂ ಅವರ ಶಾಸಕರು ಸರ್ಕಾರ ಮತ್ತು ಅವರ ನಾಯಕರ ಮೇಲೆ ನಂಬಿಕೆ ವಿಶ್ವಾಸ ಇಲ್ಲ ಎಂದು ಮನನೊಂದು ಈಗ ರಾಜಿನಾಮೆ ನೀಡಿದ್ದಾರೆ. ಈ ಸರ್ಕಾರ ಉಳಿಯುವುದಿಲ್ಲ. ಪತನವಾಗುವುದು ಖಚಿತ' ಎಂದರು.
ನನ್ನನ್ನು ಯಾರೂ ಸಂಪರ್ಕಿಸಿಲ್ಲ
'ನನ್ನನ್ನು ಯಾರೂ ಸಂಪರ್ಕಿಸಿಲ್ಲ. ನಾನು ಪಕ್ಷ ಬಿಡುವುದಿಲ್ಲ. ನಾನು 1999ರಲ್ಲಿ ರಾಜಕೀಯ ಸೇರಿದ್ದೆ. ಆಗಿನಿಂದಲೂ ಪಕ್ಷಕ್ಕೆ ನಿಷ್ಠನಾಗಿಯೇ ಇದ್ದೇನೆ' ಎಂದು ಮೂಡಿಗೆರೆ ಶಾಸಕ ಎಂಪಿ ಕುಮಾರಸ್ವಾಮಿ ಸ್ಪಷ್ಟಪಡಿಸಿದರು.
ಎಚ್ಡಿಕೆ ಪರ ಸಿದ್ದರಾಮಯ್ಯ ಬೆಂಬಲಿಗರು ನಿಲ್ತಾರಾ?
ನಾನು ಬಿಜೆಪಿಯಲ್ಲೇ ಇರುತ್ತೇನೆ
'ನನ್ನ ಹೆಸರು ರಿವರ್ಸ್ ಆಪರೇಷನ್ನಲ್ಲಿ ಕೇಳಿಬರುತ್ತಿದೆ. ಆದರೆ, ನನ್ನನ್ನು ಯಾರೂ ಸಂಪರ್ಕಿಸಿಲ್ಲ. ಒಂದು ತಿಂಗಳಿನಿಂದಲೂ ನನ್ನ ಹೆಸರು ಕೇಳಿಬರುತ್ತಿದೆ. ನಾನು ಪಕ್ಷ ಬಿಟ್ಟು ಹೋಗುವುದಿಲ್ಲ. ಯಡಿಯೂರಪ್ಪ ಅವರು ಕೆಜೆಪಿ ಕಟ್ಟಿದ್ದಾಗಲೂ ನಾನು ಅವರೊಂದಿಗೆ ಹೋಗಲಿಲ್ಲ. ವಿದ್ಯಾರ್ಥಿದೆಸೆಯಿಂದಲೂ ಬಿಜೆಪಿಯಲ್ಲಿ ಇದ್ದೇನೆ. ಇಲ್ಲಿಯೇ ಇರುತ್ತೇನೆ. ಯಾರೋ ಬೇಕೆಂದೇ ಕಿತಾಪತಿ ಮಾಡಿ ನನ್ನ ಹೆಸರು ತೇಲಿಬಿಟ್ಟಿದ್ದಾರೆ' ಎಂದು ಸಿರಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ ಹೇಳಿದರು.