ವಿಧಾನಪರಿಷತ್ ಚುನಾವಣೆ: ಮತದಾನ ಆರಂಭ
ಬೆಂಗಳೂರು, ಫೆಬ್ರವರಿ 17: ಒಂದು ವಿಧಾನಪರಿಷತ್ ಸ್ಥಾನಕ್ಕೆ ಮತದಾನ ಇಂದು ಬೆಳಿಗ್ಗೆ ವಿಧಾನಸೌಧದಲ್ಲಿ ಆರಂಭವಾಗಿದೆ.
ಬಿಜೆಪಿಯ ಲಕ್ಷ್ಮಣ ಸವದಿ ಮಾತ್ರವೇ ಚುನಾವಣಾ ಕಣದಲ್ಲಿದ್ದಾರೆ. ಒಬ್ಬರೇ ಅಭ್ಯರ್ಥಿ ಇದ್ದರೂ ಸಹ ಮತದಾನ ಮಾಡಲೇ ಬೇಕಾಗಿದೆ. ಲಕ್ಷ್ಮಣ ಸವದಿ ಗೆಲುವು ಬಹುತೇಕ ಖಚಿತವೇ ಆಗಿದೆ. ಬಿಜೆಪಿ ಶಾಸಕರು ಮಾತ್ರವೇ ಚುನಾವಣೆಯಲ್ಲಿ ಭಾಗವಹಿಸುತ್ತಿದ್ದಾರೆ.
ನಿನ್ನೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಶಾಸಕಾಂಗ ಪಕ್ಷ ನಾಯಕ ಯಡಿಯೂರಪ್ಪ ಅವರು, 'ಲಕ್ಷ್ಮಣ ಸವದಿ ಅವರಿಗೇ ಮತ ನೀಡಬೇಕು' ಎಂದು ಬಿಜೆಪಿ ಶಾಸಕರಿಗೆ ಸೂಚನೆ ನೀಡಿದ್ದಾರೆ. ಅಂತೆಯೇ ಬಿಜೆಪಿ ಶಾಸಕರು ಲಕ್ಷ್ಮಣ ಸವದಿ ಅವರಿಗೆ ಮತ ನೀಡುವುದು ಬಹುತೇಕ ಖಾಯಂ.
ಇಂದು ಬೇಗನೆ ವಿಧಾನಸೌಧಕ್ಕೆ ಬಂದಿರುವ ಯಡಿಯೂರಪ್ಪ ಅವರು, ಮತದಾನಕ್ಕೆ ತೆರಳುವ ಮುನ್ನಾ ಬಿಜೆಪಿ ಶಾಸಕರು, ಸಚಿವರೊಂದಿಗೆ ವಿಧಾನಸೌಧದಲ್ಲಿ ಉಪಹಾರ ಸೇವಿಸಿದ್ದಾರೆ. ಉಪಹಾರದ ಬಳಿಕ ಗುಂಪಾಗಿ ತೆರಳಿ ಮತದಾನ ಮಾಡಿದ್ದಾರೆ.
ಮತದಾನ ಮುಗಿಸಿಕೊಂಡು ಜಂಟಿ ಅಧಿವೇಶನದಲ್ಲಿ ಭಾಗವಹಿಸಲು ಬಿಜೆಪಿ ಶಾಸಕರು ತೆರಳಲಲಿದ್ದಾರೆ. ಕಾಂಗ್ರೆಸ್-ಜೆಡಿಎಸ್ನ ಅಭ್ಯರ್ಥಿಗಳು ಕಣದಲ್ಲಿ ಇಲ್ಲದ ಕಾರಣ ಎರಡೂ ಪಕ್ಷದ ಶಾಸಕರು ಮತದಾನದಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ.
ರಿಜ್ವಾನ್ ಅರ್ಷದ್ ರಾಜೀನಾಮೆ ಇಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಅನಿಲ್ ಕುಮಾರ್ ಅವರು ನಾಮಪತ್ರ ಸಲ್ಲಿಸಿದ್ದರಾದರೂ ನಂತರ ನಾಮಪತ್ರ ಹಿಂಪಡೆದಿದ್ದಾರೆ. ಇದರಿಂದಾಗಿ ಲಕ್ಷ್ಮಣ ಸವದಿ ಅವರಿಗೆ ಎದುರಾಳಿಯೇ ಇಲ್ಲದಂತಾಗಿದೆ.