ಹಿಜಾಬ್ ವಿವಾದ: ಸೋಮವಾರ 2.30ಕ್ಕೆ ಅರ್ಜಿ ವಿಚಾರಣೆ ಮುಂದೂಡಿಕೆ
ಬೆಂಗಳೂರು, ಫೆಬ್ರವರಿ 10: ಕರ್ನಾಟಕದ ಶಾಲಾ- ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ಮುಸ್ಲಿಂ ವಿದ್ಯಾರ್ಥಿನಿಯರ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ಕರ್ನಾಟಕ ಹೈಕೋರ್ಟ್ನಲ್ಲಿ ನಡೆಯಲಿದೆ.
ಈ ಕುರಿತು ಕರ್ನಾಟಕ ಹೈಕೋರ್ಟ್ನಲ್ಲಿ ವಿಶೇಷ ಪೀಠ ರಚನೆ ಮಾಡಲಾಗಿದೆ. ಬುಧವಾರ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆದಿತ್ತು. ಬಳಿಕ ನ್ಯಾಯಮೂರ್ತಿಗಳು ಅರ್ಜಿ ವಿಚಾರಣೆಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಿದ್ದರು.
ಈಗ ಅರ್ಜಿಗಳ ವಿಚಾರಣೆಗೆ ವಿಶೇಷ ಪೂರ್ಣ ಪೀಠವನ್ನು ರಚನೆ ಮಾಡಲಾಗಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೂರ್ಣ ಪೀಠ ಗುರುವಾರ ಮಧ್ಯಾಹ್ನ 2.30ರಿಂದ ಅರ್ಜಿ ವಿಚಾರಣೆ ನಡೆಯಲಿದೆ.

ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಇದ್ದು, ಗುರುವಾರವೇ ವಿಚಾರಣೆ ಆರಂಭವಾಗಲಿದೆ.
ಹೈಕೋರ್ಟ್ ಕಲಾಪ ಆರಂಭ
ಹಿಜಾಬ್ ಅರ್ಜಿ ವಿಚಾರಣೆ ಹೈಕೋರ್ಟ್ ಕಲಾಪ ಆರಂಭವಾಗಿದ್ದು, ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಪೀಠದಲ್ಲಿ ಹಾಜರಾಗಿದ್ದಾರೆ.
ಇದೇ ವೇಳೆ ಸರ್ಕಾರದ ಪರವಾಗಿ ವಾದ ಮಂಡಿಸಲು ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ಕೋರ್ಟ್ ಹಾಲ್ನಲ್ಲಿ ಹಾಜರಾಗಿದ್ದಾರೆ. ಕೇಸ್ ಗಮನಿಸಲು ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದಾರೆ.
ಹಿಜಾಬ್ ಧರಿಸುವುದು ಮುಸ್ಲಿಂ ಮಹಿಳೆಯರ ಹಕ್ಕು ಎಂದು ಅರ್ಜಿದಾರರ ಪರ ವಕೀಲ ಸಂಜಯ್ ಹೆಗ್ಡೆ ಪ್ರಕರಣದ ಹಿನ್ನೆಲೆ ತಿಳಿಸಿ ವಾದ ಮಂಡಿಸಿದರು.
ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಶಿಕ್ಷಕರು ಗದರುತ್ತಿದ್ದರು. ಹಿಜಾಬ್ ತೆಗೆದು ಬರುವಂತೆ ಸೂಚನೆ ಕೊಡುತ್ತಿದ್ದರು ಎಂದು ಅರ್ಜಿದಾರರ ಪರ ವಕೀಲ ಸಂಜಯ್ ಹೆಗ್ಡೆ ವಾದಿಸಿದರು.
ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ನಿಯಮವಿಲ್ಲವೆಂದು ವಕೀಲ ಸಂಜಯ್ ಹೆಗ್ಡೆ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಸಮವಸ್ತ್ರ ಧರಿಸುವ ಅವಕಾಶವಿಲ್ಲವೇ ಎಂದು ಪ್ರಶ್ನಿಸಿದರು.
ಐದು ವರ್ಷಗಳಿಗೊಮ್ಮೆ ಸಮವಸ್ತ್ರ ಬದಲಾಗಬೇಕು. ಪಿಯುಸಿ ಕಾಲೇಜುಗಳಿಗೆ ಸಂಬಂಧಿಸಿದಂತೆ ಸಮವಸ್ತ್ರ ನಿಯಮವಿಲ್ಲ ಎಂದು ಅರ್ಜಿದಾರರ ಪರ ವಕೀಲ ಸಂಜಯ್ ಹೆಗ್ಡೆ ವಾದ ಮಂಡನೆ.
ಸೆಕ್ಷನ್ 113 ನಿಯಮಾವಳಿ ಓದುತ್ತಿರುವ ವಕೀಲರು, ಕೆಲ ಕಡೆ ಸಮವಸ್ತ್ರ ಉಲ್ಲಂಘನೆಯಾದರೆ 2 ರೂ. ದಂಡವಿದೆ ಎಂದರು.
ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ಮಾತನಾಡುತ್ತಾ, ವಕೀಲ ಸಂಜಯ್ ಹೆಗ್ಡೆ ಅರ್ಜಿಯಲ್ಲಿ ಸರ್ಕಾರಿ ಆದೇಶವನ್ನು ಪ್ರಶ್ನಿಸಿಲ್ಲ. ಹಾಗಾಗಿ ನಮಗೆ ಅವಕಾಶ ನೀಡಿ ಎಂದು ದೇವದತ್ ಕಾಮತ್ ನ್ಯಾಯಮೂರ್ತಿಗಳಲ್ಲಿ ವಿನಂತಿಸಿದರು.
ಶಾಲಾ ಅಭಿವೃದ್ಧಿ ಮಂಡಳಿ ಪರ ಸಜನ್ ಪೂವಯ್ಯ ವಾದ ಮಂಡನೆ ಮಾಡುತ್ತಿದ್ದು, ಸಂಜಯ್ ಹೆಗ್ಡೆ ಒದಗಿಸಿರುವ ದಾಖಲೆಗಳನ್ನು ನಮಗೂ ಒದಗಿಸಬೇಕು ಎಂದು ಕೇಳಿದ್ದಾರೆ.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಮಾತನಾಡಿ, ಮದ್ಯಂತರ ತೀರ್ಪಿಗೆ ವಾದಿಸುತ್ತಿರೋ? ಅಥವಾ ಅಂತಿಮ ತೀರ್ಪಿಗಾಗಿ ವಾದಿಸುತ್ತಿರೋ ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದರು.
ನಾವು ಶಾಲಾ- ಕಾಲೇಜು ಆರಂಭಿಸಲು ಸಿದ್ಧರಿದ್ದೇವೆ. ಆದರೆ ಒಬ್ಬರು ಹಿಜಾಬ್ ಧರಿಸಿ ಬರುತ್ತಿದ್ದಾರೆ, ಮತ್ತೊಬ್ಬರು ಕೇಸರಿ ಶಾಲು ಧರಸಿ ಬರುತ್ತಿದ್ದಾರೆ. ಇದರಿಂದ ಕಾಲೇಜುಗಳಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ ಎಂದು ಸರ್ಕಾರದ ಪರ ವಕೀಲ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿದರು.
ಹಿಜಾಬ್ ಮತ್ತು ಸಮವಸ್ತ್ರ ಧರಿಸಲು ಅವಕಾಶ ನೀಡಬೇಕೆಂದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ವಾದ ಮಂಡಿಸಿದರು.
ಹಿಜಾಬ್ ಧರಿಸುವುದು ಅತ್ಯಗತ್ಯ ಭಾಗವೇ? ಸಂವಿಧಾನದ 25ರಡಿ ಮೂಲಭೂತ ಹಕ್ಕೇ? ಎಂದು ಹೈಕೋರ್ಟ್ ಸಿಜೆ ಪ್ರಶ್ನಿಸಿದರು.
ಧರ್ಮ, ವಸ್ತ್ರ ಏನೇ ಇದ್ದರೂ ಎಲ್ಲ ನಮ್ಮ ವಿದ್ಯಾರ್ಥಿಗಳು. ಹಿಜಾಬ್ಗೆ ಯಾರೂ ತಡೆ ನೀಡಬಾರದು ಅರ್ಜಿದಾರರ ಪರ ವಕೀಲ ದೇವದತ್ ಕಾಮತ್ ವಾದ ಮಂಡಿಸಿದರು.
ಅರ್ಜಿಯ ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿಗಳು ಹಿಜಾಬ್ನ ಪ್ರಶ್ನೆ ನಂತರ ನಿರ್ಧರಿಸೋಣ, ಈಗ ಶಾಲೆಗೆ ತೆರಳುವ ಪ್ರಶ್ನೆ ತೀರ್ಮಾನಿಸೋಣ, ಸಂವಿಧಾನದ ಅಂಶಗಳು ಬಂದಿರುವುದರಿಂದ ವಿಸ್ತೃತ ಪೀಠ ರಚನೆಯಾಗಿದೆ ಎಂದು ಹೇಳಿದರು.
ಹಿಜಾಬ್ ಸಂಬಂಧ ಮಧ್ಯಂತರ ಅರ್ಜಿ ಸಲ್ಲಿಸಿರುವವರ ಪರ ವಾದ ಮಂಡಿಸಿದ ವಕೀಲ ಕಾಳೀಶ್ವರಾಂ ಸರ್ಕಾರ ಪರಿಸ್ಥಿತಿ ಅರ್ಥ ಮಾಡಿಕೊಂಡು ಅವಕಾಶ ನೀಡಬೇಕು. ಕೃಪಾಣ್ ಧರಿಸಲು ಸಿಖ್ಖರಿಗೆ ಅವಕಾಶ ನೀಡಲಾಗಿದೆ. ಹಿಜಾಬ್ನೊಂದಿಗೆ ವಿದ್ಯಾರ್ಥಿನಿ ಹಾಜರಾಗಲು ಅನುಮತಿ ನೀಡಬೇಕು. ಈ ಕುರಿತು ಮಧ್ಯಂತರ ಆದೇಶ ನೀಡಬೇಕು ಎಂದರು.
ಹಿಜಾಬ್ ಧರಿಸುವುದು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಎಂದು ಅರ್ಜಿದಾರರ ಪರವಾಗಿ ವಕೀಲ ಸಂಜಯ್ ಹೆಗ್ಡೆ ವಾದ ಮಂಡನೆ ಮಾಡುತ್ತಿದ್ದಾರೆ. ಸುಪ್ರೀಂಕೋರ್ಟ್ನ ತೀರ್ಪುಗಳನ್ನು ಉಲ್ಲೇಖಿಸಿ ಅವರು ವಾದಿಸುತ್ತಿದ್ದಾರೆ.
ಅರ್ಜಿದಾರರ ಪರವಾಗಿ ವಾದ ಮಂಡಿಸಿದ ಸಂಜಯ್ ಹೆಗ್ಡೆ ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ಇಚ್ಛಾನುಸಾರ ಬಟ್ಟೆ ತೊಡುವ ಹಕ್ಕಿದೆ. ಸಮವಸ್ತ್ರ ಧರಿಸಿಲ್ಲ ಎಂದರೆ ದಂಡ ವಿಧಿಸುವ ಅಧಿಕಾರ ಕರ್ನಾಟಕ ಶಿಕ್ಷಣ ಕಾಯ್ದೆಯಲ್ಲಿ ಇಲ್ಲ ಎಂದು ವಾದಿಸಿದರು.
ಬಟ್ಟೆ ಧರಿಸುವುದು ಸಂವಿಧಾನದ 19(1)ಎ ಅಡಿ ಬರುತ್ತದೆ. ದಿವ್ಯಾ ಯಾದವ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನಿರ್ಧರಿಸಿದೆ ಎಂದು ಸಂಜಯ್ ಹೆಗ್ಡೆ ವಾದ ಮಂಡಿಸಿದರು. ಕೇರಳ ಹೈಕೋರ್ಟ್ ತೀರ್ಪನ್ನು ಸಹ ಅವರು ಉಲ್ಲೇಖಿಸಿದರು.
ವಾದ ಮಂಡಿಸಿದ ಸಂಜಯ್ ಹೆಗ್ಡೆ ಈ ಹಿಂದೆ ಕೇರಳ ಹೈಕೋರ್ಟ್ ಹಿಜಾಬ್ ಧರಿಸಿ ಪರೀಕ್ಷೆಗೆ ತೆರಳಲು ಅವಕಾಶ ನೀಡಿತ್ತು. ಹಿಜಾಬ್ ಪರಿಶೀಲಿಸಿ ಪರೀಕ್ಷೆ ಬರೆಯುವಾಗ ಧರಿಸಲು ಅವಕಾಶ ನೀಡಿತ್ತು ಎಂದು ವಾದಿಸಿದರು.
ವಾದ ಮಂಡಿಸಿದ ಸಂಜಯ್ ಹೆಗ್ಡೆ ಹಿಜಾಬ್ ಧರಿಸಲು ಮಧ್ಯಂತರ ಆದೇಶ ನೀಡಬೇಕು. ವಿದ್ಯಾರ್ಥಿನಿಯರ ಹಕ್ಕನ್ನು ರಕ್ಷಣೆ ಮಾಡಬೇಕು ಎಂದು ಮನವಿ ಸಲ್ಲಿಸಿ ವಾದ ಮಂಡನೆ ಮುಕ್ತಾಯಗೊಳಿಸಿದರು.
ಅರ್ಜಿದಾರರ ಪರವಾಗಿ ದೇವದತ್ ಕಾಮತ್ ವಾದ ಮಂಡನೆ ಆರಂಭಿಸಿದ್ದಾರೆ. ಸರ್ಕಾರದ ಆದೇಶ ಕಾನೂನು ವಿರುದ್ಧವಾಗಿದೆ. ಸರ್ಕಾರದ ಆದೇಶದ ತಳಪಾಯವೇ ಸಡಿಲವಾಗಿದೆ ಎಂದರು.
ದೇವದತ್ ಕಾಮತ್ ವರ್ಷಗಳಿಂದಲೂ ಹಿಜಾಬ್ ಧರಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗುತ್ತಿದ್ದಾರೆ. ಫೆಬ್ರವರಿ 3ರಿಂದ ಮಾತ್ರ ನಿರ್ಬಂಧಿಸಲಾಗಿದೆ. ಸರ್ಕಾರದ ಸಮವಸ್ತ್ರ ಆದೇಶ ವಿವೇಚನಾರಹಿತವಾಗಿದೆ. ಹಿಜಾಬ್ ಧರಿಸುವುದು ಸಂವಿಧಾನದ 25(1) ರಡಿ ಹಕ್ಕಲ್ಲ ಎಂದು ಸರ್ಕಾರ ಹೇಳಿದೆ. ಕಾನೂನಿಗೆ ವಿರುದ್ಧವಾದ ನಿರ್ಧಾರಕ್ಕೆ ಸರ್ಕಾರ ಬಂದಿದೆ ಎಂದರು.
ಯಾರ ಯಾರ ಮುಂದೆ ಹಿಜಾಬ್ ಧರಿಸಲು ವಿನಾಯಿತಿ ಇದೆ ಎಂದು ಉಲ್ಲೇಖಿಸಲಾಗಿದೆ ಎಂದು ವಕೀಲ ದೇವದತ್ ಕಾಮತ್ ಕೋರ್ಟ್ಗೆ ವಿವರಣೆ ನೀಡುತ್ತಿದ್ದಾರೆ.
ದೇವದತ್ ಕಾಮತ್ ಧಾರ್ಮಿಕ ಗ್ರಂಥಗಳ ಪ್ಯಾರಾ 59ರ ಉಲ್ಲೇಖವನ್ನು ವಿವರಣೆ ನೀಡಿದರು. ಸೀಮಿತ ವ್ಯಕ್ತಿಗಳನ್ನು ಬಿಟ್ಟು ಉಳಿದ ಕಡೆ ಹಿಜಾಬ್ ಕಡ್ಡಾಯ ಎಂದಿದೆ ಎಂದು ವಾದಿಸಿದರು.
ಮುಖ್ಯ ನ್ಯಾಯಮೂರ್ತಿಗಳು ಅರ್ಜಿಯ ವಿಚಾರಣೆಯನ್ನು ಸೋಮವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿದರು. ಸೋಮವಾರ ಶಾಲಾ, ಕಾಲೇಜುಗಳನ್ನು ಆರಂಭಿಸಬಹುದು. ವಿದ್ಯಾರ್ಥಿಗಳು ಯಾವುದೇ ಧಾರ್ಮಿಕ ಗುರುತು ಬಳಸುವ ವಸ್ತ್ರ ಧರಿಸಬಾರದು ಎಂದು ಹೇಳಿದರು.












Click it and Unblock the Notifications