ಬೆಂಗಳೂರಿನ ಜೆಡಿಎಸ್ ಕಚೇರಿ ವಿವಾದವೇನು?
ಬೆಂಗಳೂರು, ಜ.9 : ಜೆಡಿಎಸ್ ಪಕ್ಷದ ಕಚೇರಿ ನಿರ್ಮಿಸಲು ಬಿಬಿಎಂಪಿ ನೀಡಿದ್ದ ಜಾಗದಲ್ಲಿ ಯಾವುದೇ ಕಟ್ಟಡ ನಿರ್ಮಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸುಪ್ರೀಂಕೋರ್ಟ್ ಆದೇಶದಂತೆ ಕಾಂಗ್ರೆಸ್ಗೆ ಪಕ್ಷದ ಕಚೇರಿ ಬಿಟ್ಟುಕೊಡುವ ಜೆಡಿಎಸ್ಗೆ ಹೊಸ ಕಚೇರಿ ನಿರ್ಮಿಸಲು ಸ್ಥಳಾವಕಾಶದ ಕೊರತೆ ಎದುರಾಗಿದೆ.
ಜೆಡಿಎಸ್ ನಾಯಕರ ಮನವಿಗೆ ಸ್ಪಂದಿಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವೈಯಾಲಿಕಾವಲ್ನ ಸರ್ವೆ ಸಂಖ್ಯೆ 1 ಹಾಗೂ 4 ರಲ್ಲಿರುವ 1.1 ಎಕರೆ ಜಮೀನನ್ನು ಜೆಡಿಎಸ್ ಕಚೇರಿಗೆ 30 ವರ್ಷಗಳ ಅವಧಿಗೆ ಮಂಜೂರು ಮಾಡುವ ನಿರ್ಣಯವನ್ನು ಕೈಗೊಂಡಿತ್ತು. [ಬೆಂಗಳೂರಿನಲ್ಲಿ ಜೆಡಿಎಸ್ ಕಚೇರಿಗೆ ಜಾಗ ಸಿಕ್ಕಿತು]

ವೈಯಾಲಿಕಾವಲ್ನ ಚೌಡಯ್ಯ ಸ್ಮಾರಕ ಸಭಾಂಗಣದ ಹಿಂಭಾಗದಲ್ಲಿರುವ ಈ ಭೂಮಿಯಲ್ಲಿ ಜ.20ರವರೆಗೂ ಯಾವುದೇ ಕಟ್ಟಡ ನಿರ್ಮಿಸಬಾರದು ಎಂದು ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಉದ್ದೇಶಿತ ಜಾಗದ ವಾರಸುದಾರ ಎನ್ನಲಾದ ಕೆ.ಜಿ.ಚಂದ್ರಶೇಖರ್ ಭಟ್ ಅವರು ಹೈಕೋರ್ಟ್ಗೆ ಸಲ್ಲಿಸಿದ್ದ ತಕರಾರು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತಡೆಯಾಜ್ಞೆ ನೀಡಿದೆ. [ಕಚೇರಿಗಾಗಿ ಕೋರ್ಟ್ ಮೆಟ್ಟಿಲೇರಿದ ಜೆಡಿಎಸ್]
ವಿವಾದವೇನು : ಬಿಬಿಎಂಪಿ ಇದು ತನ್ನ ಜಾಗವೆಂದು ಅದನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟುಕೊಡಲು ತೀರ್ಮಾನಿಸಿತ್ತು. ಆದರೆ, ಚಂದ್ರಶೇಖರ ಭಟ್ ಎಂಬುವವರು ತಾವು ಈ ಜಮೀನಿನ ಒಡೆಯರು ಎಂದು ಹೇಳುತ್ತಿದ್ದು, ಬಿಬಿಎಂಪಿ ಕ್ರಮ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. [ಜೆಡಿಎಸ್ ಗೆ ಕಚೇರಿ ಖಾಲಿ ಮಾಡಲು ಸುಪ್ರೀಂ ಆದೇಶ]
ಚಂದ್ರಶೇಖರ ಭಟ್ ಅವರು ಹೇಳುವಂತೆ, ಅವರ ತಾಯಿ ಸುಬ್ಬಲಕ್ಷ್ಮೀ ಅವರು ಮೈಸೂರು ರಾಜಮನೆತನದ ರಾಜಮಹಲ್ ವಿಲಾಸ್ನಲ್ಲಿ ಸೇವಕರಾಗಿ ಕೆಲಸ ಮಾಡುತ್ತಿದ್ದರು. 1954ರಲ್ಲಿ ರಾಜಮನೆತನದವರು ಸುಬ್ಬಲಕ್ಮೀ ಅವರಿಗೆ ಈ ಜಾಗವನ್ನು ನೀಡಿದ್ದರು. ಆದರೆ, ಖಾತೆ ಮಾಡಿಸಿಕೊಂಡಿರಲಿಲ್ಲ.
ಹಿಂದೆ ಖಾತೆ ಮಾಡಿಸಿಕೊಡಲು ಬಿಬಿಎಂಪಿಗೆ ಆದೇಶ ನೀಡಬೇಕು ಎಂದು ಚಂದ್ರಶೇಖರ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಸಹ ಖಾತೆ ಮಾಡಿಸಿಕೊಡುವಂತೆ ಬಿಬಿಎಂಪಿಗೆ 2005ರಲ್ಲಿ ಆದೇಶ ನೀಡಿತ್ತು. ಆದರೆ, ಬಿಬಿಎಂಪಿ ಇದುವರೆಗೂ ಖಾತೆ ಮಾಡಿಸಿಕೊಟ್ಟಿಲ್ಲ.
ಸದ್ಯ ಈ ಜಾಗವನ್ನು ಜೆಡಿಎಸ್ಗೆ 30 ವರ್ಷಗಳ ಅವಧಿಗೆ ನೀಡುವ ನಿರ್ಣಯ ಕೈಗೊಂಡ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ತಕರಾರು ಅರ್ಜಿ ಸಲ್ಲಿಸಲಾಗಿದೆ. ಕಾಮಗಾರಿಗೆ ತಡೆಯಾಜ್ಞೆ ನೀಡಿರುವ ಕೋರ್ಟ್ ಬಿಬಿಎಂಪಿ ಮತ್ತು ಜೆಡಿಎಸ್ಗೆ ನೋಟಿಸ್ ನೀಡಿದೆ.
ರೇಸ್ಕೋರ್ಸ್ ರಸ್ತೆ ಕಚೇರಿ : ಸುಪ್ರೀಂಕೋರ್ಟ್ ಆದೇಶದಂತೆ ಜೆಡಿಎಸ್ ರೇಸ್ಕೋರ್ಸ್ ರಸ್ತೆಯಲ್ಲಿರುವ ಕಚೇರಿಯನ್ನು ಡಿ.31ರೊಳಗೆ ಖಾಲಿ ಮಾಡಿ ಕಾಂಗ್ರೆಸ್ಗೆ ಬಿಟ್ಟುಕೊಡಬೇಕಿತ್ತು. ಆದರೆ, ಸುಪ್ರೀಂಕೋರ್ಟ್ ತೀರ್ಪು ಪ್ರಶ್ನಿಸಿ ಜೆಡಿಎಸ್ ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ಜ.10ರ ನಂತರ ನಡೆಯಲಿದೆ.












Click it and Unblock the Notifications