ಸುಳ್ಳು ಮಾಹಿತಿ: ಬಿಜೆಪಿ ಸಂಸದ ಪಿ.ಸಿ ಮೋಹನ್ಗೆ ಸಂಕಷ್ಟ
ಬೆಂಗಳೂರು, ಜನವರಿ 8: ಚುನಾವಣಾ ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿ ಆಸ್ತಿ ವಿವರ ಮರೆಮಾಚಿದ್ದ ಆರೋಪದಲ್ಲಿ ಬೆಂಗಳೂರು ಕೇಂದ್ರ ಕ್ಷೇತ್ರದ ಬಿಜೆಪಿ ಸಂಸದ ಪಿ.ಸಿ. ಮೋಹನ್ ವಿರುದ್ಧದ ವಿಚಾರಣೆ ಮುಂದುವರಿಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ತಮ್ಮ ವಿರುದ್ಧ ನಡೆಯುತ್ತಿರುವ ವಿಚಾರಣೆಯನ್ನು ರದ್ದುಪಡಿಸುವಂತೆ ಕೋರಿ ಪಿ.ಸಿ. ಮೋಹನ್ ಅರ್ಜಿ ಸಲ್ಲಿಸಿದ್ದರು. ಅದನ್ನು ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹ ಅವರ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.
ಪಿಸಿ ಮೋಹನ್ ವಿರುದ್ಧದ ದೂರು ದಾಖಲಿಸಿಕೊಂಡಿದ್ದ ವಿಶೇಷ ನ್ಯಾಯಾಲಯ, ಅದರ ತನಿಖೆ ನಡೆಸುವಂತೆ ಬೆಂಗಳೂರು ದಕ್ಷಿಣ ಡಿಸಿಪಿಗೆ ಸೂಚನೆ ನೀಡಿತ್ತು. ಈ ಪ್ರಕ್ರಿಯೆ ರದ್ದುಗೊಳಿಸುವಂತೆ ಕೋರಿ ಪಿಸಿ ಮೋಹನ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದಲ್ಲಿ ದೂರಿನ ತನಿಖೆ ನಡೆಸುವಂತೆ ವಿಶೇಷ ನ್ಯಾಯಾಲಯವು ಪೊಲೀಸರಿಗೆ ಆದೇಶಿಸಿರುವುದು ಸರಿಯಲ್ಲ. ವಿಶೇಷ ನ್ಯಾಯಾಲಯವೇ ಪ್ರಕರಣದ ಕುರಿತು ಸಂಸದರ ವಾದ ಆಲಿಸಿ ಮುಂದಿನ ವಿಚಾರಣೆ ನಡೆಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿತು.
ದೇವನಹಳ್ಳಿ ತಾಲ್ಲೂಕಿನ ಲಕ್ಷ್ಮೀಪುರ ದೇವಸ್ಥಾನ ಟ್ರಸ್ಟ್ಗೆ ಸಂಬಂಧಿಸಿದ 42 ಎಕರೆ 14 ಗುಂಟೆ ಜಾಗವನ್ನು ಪಿ.ಸಿ ಮೋಹನ್ ಅವರು ತಮ್ಮ ಸಹಭಾಗಿತ್ವ ಇರುವ ಪಿ.ಸಿ ರಿಯಾಲ್ಟಿ ಕಂಪೆನಿ ಹೆಸರಿನಲ್ಲಿ ಖರೀದಿಸಿದ್ದಾರೆ. ಇದಕ್ಕಾಗಿ ಅವರು 2013ರ ಮಾರ್ಚ್ 30ರಂದು 33.66 ಕೋಟಿ ರೂ ನೀಡಿದ್ದರು. ಆದರೆ ನಂತರ ನಡೆದ 2014 ಮತ್ತು 2019ರ ಲೋಕಸಭೆ ಚುನಾವಣೆಗಳಲ್ಲಿ ನಾಮಪತ್ರದೊಂದಿಗೆ ಸಲ್ಲಿಸಿದ್ದ ಅಫಿಡವಿಟ್ನಲ್ಲಿ ಈ ಆಸ್ತಿ ಖರೀದಿ ವಿಚಾರ ಮುಚ್ಚಿಟ್ಟಿದ್ದಾರೆ ಎಂದು ಶ್ರೀರಾಂಪುರದ ಟಿ.ಆರ್. ಆನಂದ್ ಎಂಬುವವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ್ದರು.