Hebbal Traffic: ಹೆಬ್ಬಾಳ ಜಂಕ್ಷನ್ ಟ್ರಾಫಿಕ್ ನಿವಾರಣೆಗೆ ಮತ್ತೊಂದು ಮಾಸ್ಟರ್ ಪ್ಲ್ಯಾನ್
ಬೆಂಗಳೂರಿನ ಟ್ರಾಫಿಕ್ ಎಂದರೆ ವಾಹನ ಸವಾರರಿಗೆ ಮೊದಲಿಗೆ ನೆನಪಾಗೋದು ಹೆಬ್ಬಾಳ. ಬೆಂಗಳೂರಿನ ಹೆಬ್ಬಾಗಿಲಿನಂತಿರುವ ಹೆಬ್ಬಾಳ ಫ್ಲೈಓವರ್ ಬಳಿ ಪ್ರತಿ ನಿತ್ಯವೂ ಟ್ರಾಫಿಕ್ ಕಿರಿಕಿರಿ. ಇದು ಏರ್ಪೋರ್ಟ್ ರಸ್ತೆಗೆ ಪ್ರವೇಶ ಕಲ್ಪಿಸುವುದರಿಂದ ಗಂಟೆಗಟ್ಟಲೆ ಟ್ರಾಫಿಕ್ನಲ್ಲೇ ಕಳೆಯಬೇಕಾದ ಕೆಟ್ಟ ಪರಿಸ್ಥಿತಿ ಇದೆ. ಹೀಗಾಗಿ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಲು ಈಗಾಗಲೇ ಇಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಜಂಕ್ಷನ್ನಲ್ಲಿರುವ ಟ್ರೀ ಪಾರ್ಕ್ಗೆ ಹೆಚ್ಚುವರಿ ರ್ಯಾಂಪ್ ನಿರ್ಮಿಸುತ್ತಿದೆ. ಈಗ ಇದರ ಜೊತೆಗೆ ಮತ್ತೊಂದು ಮೇಲ್ಸೇತುವೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ತಯಾರಿ ನಡೆಸಿದೆ ಎಂದು ತಿಳಿದುಬಂದಿದೆ.
ಹೌದು, ನಗರದ ಹೆಬ್ಬಾಳ ಜಂಕ್ಷನ್ನಲ್ಲಿ ಟ್ರಾಫಿಕ್ ಸಮಸ್ಯೆ ಪರಿಹರಿಸಲು ಮತ್ತೊಂದು ಮೇಲ್ಸೇತುವೆ ನಿರ್ಮಾಣದ ಕುರಿತು ಕರ್ನಾಟಕ ಸರ್ಕಾರವು ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು (ಎನ್ಎಚ್ಎಐ) ಸಂಪರ್ಕಿಸಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ-44 (ಬಳ್ಳಾರಿ ರಸ್ತೆ) ಯೋಜನೆಯ ಕುರಿತು ಚರ್ಚಿಸಲು ಸಿಎಂ ಸಿದ್ದರಾಮಯ್ಯ ಅವರು ಇತ್ತೀಚೆಗೆ ದೆಹಲಿಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿದ್ದರು. ಇದೇ ವೇಳೆ ಮತ್ತೊಂದು ಮೇಲ್ಸೇತುವೆ ನಿರ್ಮಾಣದ ಮನವಿ ಮಾಡಿದೆ ಎನ್ನಲಾಗಿದೆ.

ಈ ಪ್ರಸ್ತಾವಿತ ಫ್ಲೈಓವರ್ನ ನಿರ್ದಿಷ್ಟ ವಿನ್ಯಾಸ, ಸ್ಥಳ ಸೇರಿದಂತೆ ಇನ್ನಿತರ ವಿವರಗಳು ಇನ್ನೂ ಅಂತಿಮಗೊಂಡಿಲ್ಲ. ಆದರೆ ಮೂಲಗಳ ಪ್ರಕಾರ ಈ ಯೋಜನೆಯು ಎಸ್ಟೀಮ್ ಮಾಲ್ನಿಂದ ಹೆಬ್ಬಾಳ ಫ್ಲೈಓವರ್ಗೆ ಎತ್ತರದ ಕಾರಿಡಾರ್ ಅನ್ನು ವಿಸ್ತರಿಸಬಹುದು ಎನ್ನಲಾಗಿದೆ. ಅಥವಾ ಮೇಖ್ರಿ ವೃತ್ತದ ಕಡೆಗೆ ನೇರ ಪ್ರವೇಶ ಕಲ್ಪಿಸಲು ರಸ್ತೆ ಮಾರ್ಗ ಅಥವಾ ಕೆ.ಆರ್.ಪುರ ಮಾರ್ಗದ ಹೊರ ವರ್ತುಲ ರಸ್ತೆಯ ಕಡೆಯಿಂದ ಹೊಸ ಫ್ಲೈಓವರ್ ಅನ್ನು ನಿರ್ಮಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಜಂಕ್ಷನ್ನಲ್ಲಿರುವ ಟ್ರೀ ಪಾರ್ಕ್ಗೆ ಹೆಚ್ಚುವರಿ ರ್ಯಾಂಪ್ ಅನ್ನು ನಿರ್ಮಿಸುತ್ತಿದೆ. ಈ ಹಿಂದೆ ಹೆಬ್ಬಾಳ ಜಂಕ್ಷನ್ನಲ್ಲಿ ಟ್ರಾಫಿಕ್ ಜಾಮ್ ಕಡಿಮೆ ಮಾಡಲು ಬಿಡಿಎ ಸುಮಾರು 400 ಕೋಟಿ ರೂಪಾಯಿಗಳ ಯೋಜನೆಯನ್ನು ಪ್ರಸ್ತಾಪ ಮಾಡಿತ್ತು. ಇದರಲ್ಲಿ ಕೆ.ಆರ್.ಪುರ ಕಡೆಯಿಂದ ಬಳ್ಳಾರಿ ರಸ್ತೆಗೆ ಸಂಪರ್ಕಿಸುವ ಫ್ಲೈಓವರ್, ಹೊಸ ರ್ಯಾಂಪ್ ಕೂಡ ಒಳಗೊಂಡಿವೆ. ಅಲ್ಲದೆ ಇದೇ ಯೋಜನೆಯಲ್ಲಿ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ತುಮಕೂರು ರಸ್ತೆ ಕಡೆಗೆ ಪ್ರಯಾಣಿಸುವ ವಾಹನಗಳಿಗೆ ಹೆಚ್ಚುವರಿ ರ್ಯಾಂಪ್ ಹಾಗೂ ಅಂಡರ್ಪಾಸ್ ನಿರ್ಮಾಣಕ್ಕೂ ಉದ್ದೇಶಿಸಲಾಗಿದೆ.
2023ರಲ್ಲೇ ಬ್ಯಾಪ್ಟಿಸ್ಟ್ ಆಸ್ಪತ್ರೆಯಿಂದ ಬಳ್ಳಾರಿ ರಸ್ತೆಯ ಎತ್ತರದ ಕಾರಿಡಾರ್ಗೆ ಸಂಪರ್ಕ ಕಲ್ಪಿಸುವ ಪ್ರತ್ಯೇಕ ಫ್ಲೈಓವರ್ಗಾಗಿ ಯೋಜನೆಯನ್ನು ರೂಪಿಸಲಾಯಿತು. ಇದು ಬ್ಯಾಪ್ಟಿಸ್ಟ್ ಕಡೆಯಿಂದ ಬರುವ ಹಾಗೂ ಏರ್ಪೋರ್ಟ್ಗೆ ಪ್ರವೇಶಿಸುವ ವಾಹನಗಳಿಗೆ ಭಾರಿ ಅನುಕೂಲವಾಗುತ್ತಿತ್ತು. ಆದರೆ ಈ ಯೋಜನೆ ಮುಂದಕ್ಕೆ ಹೆಜ್ಜೆ ಇಟ್ಟಿಲ್ಲ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಈಗ 1 ಕಿ.ಮೀ ಉದ್ದದ ರಸ್ತೆಯನ್ನು ಅಗಲೀಕರಣ ಮಾಡುತ್ತಿದೆ. ಇದರಿಂದ ಹೊರ ವರ್ತುಲ ರಸ್ತೆಯಿಂದ (ತುಮಕೂರು ರಸ್ತೆಯಿಂದ) ಬಳ್ಳಾರಿ ರಸ್ತೆ ಪ್ರವೇಶಿಸುವ ವಾಹನ ಚಾಲಕರಿಗೆ, ಹೆಬ್ಬಾಳ ಫ್ಲೈಓವರ್ನಿಂದ ಕೊಡಿಗೇಹಳ್ಳಿ ಕಡೆಗೆ ಹೋಗುವ ವಾಹನ ಸವಾರರಿಗೆ ಹೆಚ್ಚು ಪ್ರಯೋಜನವಾಗಲಿದೆ.

ಮುಂದಿನ ಎರಡು ತಿಂಗಳಲ್ಲೇ ಈ ರ್ಯಾಂಪ್ ನಿರ್ಮಾಣ ಪೂರ್ಣಗೊಳಿಸುವ ಗುರಿಯನ್ನು ಬಿಡಿಎ ಹೊಂದಿದೆ. ಈ ಹಿಂದೆ ಬ್ಯಾಪ್ಟಿಸ್ಟ್ ಆಸ್ಪತ್ರೆ ಕಡೆಯಿಂದ ಎಸ್ಟೀಮ್ ಮಾಲ್ವರೆಗೂ ರ್ಯಾಂಪ್ ನಿರ್ಮಿಸುವ ಯೋಜನೆ ಇತ್ತು. ಆದರೆ ಈ ಭಾಗದಲ್ಲಿ ಟ್ರಾಫಿಕ್ ಜಾಮ್ ಹೆಚ್ಚಾಗುವುದನ್ನು ಪರಿಗಣಿಸಿ ಈ ರ್ಯಾಂಪ್ ಉದ್ದವನ್ನು ಕಡಿಮೆ ಮಾಡಲು ಉನ್ನತ ಮಟ್ಟದಲ್ಲಿ ನಿರ್ಧರಿಸಲಾಗಿದೆ. ಹಾಗಾಗಿ ಈ ಹೊಸ ರ್ಯಾಂಪ್ ಅನ್ನು ಕೆ.ಆರ್.ಪುರ ಲೂಪ್ನೊಂದಿಗೆ ಸಂಪರ್ಕಿಸುವುದು, ತುಮಕೂರು ರಸ್ತೆಯ ಲೂಪ್ನೊಂದಿಗೆ ಸೇರಿಸಲಾಗುತ್ತಿದೆ.
ಗಡುವು ತಪ್ಪಿದ ಕಾಮಗಾರಿ
ಇಲ್ಲಿನ ಸರ್ವಿಸ್ ರಸ್ತೆ ಹಾಗೂ ತುಮಕೂರು ರಸ್ತೆ ಕಡೆಯಿಂದ ಬರುವ ವಾಹನ ಸವಾರರು ಮೇಖ್ರಿ ಸರ್ಕಲ್ ಅನ್ನು ತಲುಪಲು ಬಳಸುತ್ತಾರೆ ಈ ಮಾರ್ಗವನ್ನು ಬಳಸಬಹುದು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರರು ಕೂಡ ಇತ್ತೀಚೆಗೆ ಈ ನಿರ್ಮಾಣ ಹಂತದಲ್ಲಿರುವ ರ್ಯಾಂಪ್ ಅನ್ನು ಕೆಆರ್ ಪುರ ಲೂಪ್ನೊಂದಿಗೆ ಸೇರಿಸಲು ಬಿಡಿಎಗೆ ಮೂರು ತಿಂಗಳ ಡೆಡ್ಲೈನ್ ಕೂಡ ಕೊಟ್ಟಿದ್ದರು. ಆದರೂ ಗಡುವಿನಲ್ಲಿ ಕಾಮಗಾರಿ ಪೂರ್ಣಗೊಂಡಿಲ್ಲ.
ಮತ್ತೊಂದೆಡೆ ಈ ಫ್ಲೈಓವರ್ ಬಳಿ ಇರುವ ರೈಲು ಹಳಿಗಳ ಮೇಲೆ ಸ್ಪ್ಯಾನ್ಗಳನ್ನು ಪ್ರಾರಂಭಿಸಲು ಅನುಮತಿ ಕೋರಿ ಹೆದ್ದಾರಿ ಪ್ರಾಧಿಕಾರವು ರೈಲ್ವೆ ಇಲಾಖೆಯನ್ನು ಕೂಡ ಸಂಪರ್ಕಿಸಿದೆ. ಹೊಸ ರ್ಯಾಂಪ್ಗಳು ಪೂರ್ಣಗೊಂಡ ಬಳಿಕವೂ ಈ ಜಂಕ್ಷನ್ನಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ವಾಹನಗಳ ಸಂಚಾರ ಆಗಬಹುದು ಎಂದು ಅಂದಾಜಿಸಲಾಗಿದೆ. ಈ ಮೊದಲು 2015ರಲ್ಲೇ ಪ್ರಸ್ತಾಪಿಸಿದ್ದ ಈ ರ್ಯಾಂಪ್ ಯೋಜನೆಯು ವಿಳಂಬವಾಗಿತ್ತು. ಬಳಿಕ 2017-18ರಲ್ಲಿ ಶುರುವಾದರೂ ಬಿಎಂಆರ್ಸಿಎಲ್ ಆಕ್ಷೇಪಣೆಯಿಂದ ಕೆಲಸ ಅರ್ಧಕ್ಕೆ ನಿಂತಿತ್ತು. ಬಳಿಕ ಯೋಜನೆಯ ವಿನ್ಯಾಸವೂ ಬದಲಾಗಿ 2022-23ರಲ್ಲಿ ಈ ಯೋಜನೆ ಶುರುವಾಗಿತ್ತು.

ಏನೆಲ್ಲ ಕಾಮಗಾರಿಗಳು ಪ್ರಗತಿಯಲ್ಲಿದ್ದರೂ ಹೆಬ್ಬಾಳ ಜಂಕ್ಷನ್ನಲ್ಲಿ ವಾಹನಗಳ ಸಂಚಾರ ತೀರಾ ಹದಗೆಟ್ಟಿದೆ. ಪ್ರತಿ ದಿನವೂ ವಾಹನ ಸವಾರರಿಗೆ ಈ ಜಂಕ್ಷನ್ ದಾಟುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಸದ್ಯದಲ್ಲೇ ಈ ಭಾಗದಲ್ಲಿ ಮೆಟ್ರೋ ನಿಲ್ದಾಣ, ಉಪನಗರ ರೈಲು ನಿಲ್ದಾಣ ಸೇರಿದಂತೆ ವಿವಿಧ ಸಾರಿಗೆ ವ್ಯವಸ್ಥೆಗೆ ಅನುಕೂಲವಾಗುವ ಯೋಜನೆಗಳು ಕೂಡ ಆರಂಭವಾಗಲಿದೆ. ಮುಖ್ಯವಾಗಿ ಸಿಲ್ಕ್ ಬೋರ್ಡ್ನಿಂದ ಕೆಂಪೇಗೌಡ ಏರ್ಪೋರ್ಟ್ವರೆಗಿನ ನೀಲಿ ಮಾರ್ಗದ ಮೆಟ್ರೋ ಯೋಜನೆ ಕೂಡ ಪ್ರಗತಿಯಲ್ಲಿದೆ.
ಬೆಂಗಳೂರಿನ ಅತಿ ಉದ್ದದ ಮೇಲ್ಸೇತುವೆ
ನಗರದ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಈಗಾಗಲೇ ದಕ್ಷಿಣ ಬೆಂಗಳೂರಿನ ರಾಗಿಗುಡ್ಡ-ಸಿಲ್ಕ್ ಬೋರ್ಡ್ ಸ್ಟ್ರೆಚ್ನಲ್ಲಿ 5 ಕಿ.ಮೀ ಡಬಲ್ ಡೆಕ್ಕರ್ ಯೋಜನೆ ಯಶಸ್ವಿಯಾಗಿದೆ. ಇದೇ ರೀತಿ ಒಂದೇ ಮಾರ್ಗದಲ್ಲಿ ರಸ್ತೆ ಹಾಗೂ ಮೆಟ್ರೋ ಕಾರಿಡಾರ್ ಅನ್ನು ಜೆ.ಪಿ.ನಗರ ಹಾಗೂ ಹೆಬ್ಬಾಳ ನಡುವಿನ ಹೊರವರ್ತುಲ ರಸ್ತೆಯ (ಒಆರ್ಆರ್) ಪಶ್ಚಿಮ ಭಾಗದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಸುಮಾರು 32.15 ಕಿ.ಮೀ ಉದ್ದದವರೆಗೆ ನಿರ್ಮಾಣವಾಗಲಿರುವ ಈ ಡಬಲ್ ಡೆಕ್ಕರ್ ಬೆಂಗಳೂರಿನ ಅತಿ ಉದ್ದದ ಮೇಲ್ಸೇತುವೆ ಎನಿಸಿಕೊಳ್ಳಲಿದೆ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications