ಆಯುಧ ಪೂಜೆಗೆ 100 ರೂ. ಕೊಟ್ಟ ಸಾರಿಗೆ ಇಲಾಖೆ: ಸಿಬ್ಬಂದಿ ಆಕ್ರೋಶ
ಬೆಂಗಳೂರು, ಅಕ್ಟೋಬರ್ 14: ನಾಡಿನೆಲ್ಲಡೆ ಸಂಭ್ರಮದ ದಸರಾ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ಬಾರಿ ಕೊರೊನಾ ಸೋಂಕು ಪ್ರಕರಣಗಳು ತಗ್ಗಿದ್ದರಿಂದ ದಸರಾ ಆಚರಣೆ ತುಸು ಮೆರುಗನ್ನು ಪಡೆದುಕೊಂಡಿದೆ.
ಇಂದು ರಾಜ್ಯಾದ್ಯಂತ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದೆ. ಕಚೇರಿಗಳಲ್ಲಿ, ಮನೆಗಳಲ್ಲಿ, ವಾಹನಗಳಿಗೆ ಆಯುಧ ಪೂಜಾ ಹಬ್ಬವನ್ನು ಬಂಧು ಬಳಗದ ಜೊತೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ.
ಆದರೆ ಸದಾ ಸುದ್ದಿಯಲ್ಲಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ಟಿಸಿ) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಆಯುಧ ಪೂಜೆಗೆ ಒಂದು ವಾಹನಕ್ಕೆ ಕೇವಲ 100 ರೂ. ನೀಡಿ, ಎಲ್ಲರ ಹುಬ್ಬೇರುವಂತೆ ಮಾಡಿದೆ. ಹೀಗಾಗಿ 100 ರೂ.ನಲ್ಲಿ ಬಸ್ ಪೂಜೆ ಮಾಡುವುದು ಹೇಗೆ ಎಂಬ ಚಿಂತೆಯಲ್ಲಿ ಸಿಬ್ಬಂದಿ ಇದ್ದಾರೆ.
ಆಯೂಧ ಪೂಜೆ ನಿಮಿತ್ತ ರಾಜ್ಯದ ಹೆಮ್ಮೆಯ ಸಾರಿಗೆ ಸಂಸ್ಥೆಗಳಾದ ಕೆಎಸ್ಆರ್ಟಿಸಿ ಮತ್ತು ಬಿಎಂಟಿಸಿ ಆಯುಧ ಪೂಜೆಯ ದಿನ ಬಸ್ಗಳಿಗೆ ಪೂಜೆ ಸಲ್ಲಿಸಿಕೊಂಡು ಬಂದಿರುವುದು ಪ್ರತೀತಿ. ಆದರೆ ಈ ಬಾರಿಯೂ ಸಹ ಸಾರಿಗೆ ಆಡಳಿತವು ಒಂದು ಬಸ್ಸಿಗೆ 100 ರೂಪಾಯಿಗಳನ್ನು ಮಾತ್ರ ಆಯುಧ ಪೂಜೆಗಾಗಿ ನೀಡಿದ್ದು, ಚಾಲಕ ಮತ್ತು ನಿರ್ವಾಹಕರು ಪೇಚಿಗೆ ಸಿಲುಕುವಂತೆ ಮಾಡಿದ್ದಾರೆ.
ಮೊದಲೇ ಬೆಲೆ ಏರಿಕೆಯಿದ ಸಂಕಷ್ಟ ಅನುಭವಿಸುತ್ತಿದ್ದು, ಅದರಲ್ಲೂ ಹಬ್ಬದ ದಿನಗಳಲ್ಲಿ ಹೂವು, ಹಣ್ಣುಗಳ ಬೆಲೆ ದುಪ್ಪಟ್ಟು ಆಗಿರುತ್ತವೆ. ಅಂತಹದರಲ್ಲಿ ಒಂದು ಬಸ್ಗೆ ಕೇವಲ 100 ರೂ. ನೀಡಿ ಪೂಜೆ ಮಾಡಿ ಎಂದರೆ ಹೇಗಾಗಬೇಡ.
ಅಷ್ಟೇ ಅಲ್ಲದೆ ಸಾರಿಗೆ ಸಂಸ್ಥೆಯ ಕಾರು ಮತ್ತು ಜೀಪ್ಗಳ ಪೂಜೆಗಾಗಿ ಕೊಟ್ಟಿದ್ದು, ಕೇವಲ 40 ರೂಪಾಯಿಗಳು ಅಂದ್ರೆ ನೀವು ನಂಬಲೇಬೇಕು. ಅಚ್ಚರಿಗೀಡಾದ ಸಿಬ್ಬಂದಿ 100 ರೂ.ಗಳಿಗೆ ಒಂದು ಮಾರು ಹೂವು ಕೂಡ ಬರುವುದಿಲ್ಲ, ಇನ್ನು ನಾವು ಹಣ ಹಾಕಿ ಪೂಜೆ ಮಾಡೋಣ ಅಂದರೆ ಸರಿಯಾಗಿ ಸಂಬಳ ಕೂಡ ಬಂದಿಲ್ಲ. ಬಂದಿರುವ ಸಂಬಳ ನಮಗೆ ಸಾಕಾಗುವುದಿಲ್ಲ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.
Recommended Video