ಏಪ್ರಿಲ್ನಿಂದ ಸರ್ಕಾರಿ ನೌಕರರ ವೇತನ ಹೆಚ್ಚಳ:ಸಿಎಂ
ಬೆಂಗಳೂರು, ಫೆಬ್ರವರಿ 24 : ರಾಜ್ಯ ಸರ್ಕಾರಿ ನೌಕರರ ವೇತನವನ್ನು ಏಪ್ರಿಲ್ 1 ರಿಂದ ಶೇ.30 ರಷ್ಟು ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಈ ವಿಷಯವನ್ನು ಮೇಲ್ಮನೆಯಲ್ಲಿ ಪ್ರಕಟಿಸುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ಬಜೆಟ್ ಮೇಲಿನ ಚರ್ಚೆಗೆ ಶುಕ್ರವಾರ ಉತ್ತರಿಸಿದ ಅವರು, ವೇತನ ಅಯೋಗದ ಮಧ್ಯಂತರ ಶಿಫಾರಸ್ಸನ್ನು ಸರ್ಕಾರ ಒಪ್ಪಿದ್ದು, ಈ ಬಗ್ಗೆ ಯಾವುದೇ ಅನುಮಾನ ಬೇಡ ಎಂದರು.
ಸರ್ಕಾರಿ ನೌಕರರೇ ಭರ್ಜರಿ ಉಡುಗೊರೆ ನಿರೀಕ್ಷಿಸಿ!
ಜೂನ್ ನಲ್ಲಿ ರಚಿಸಲಾಗಿದ್ದ 6 ನೇ ವೇತನ ಆಯೋಗಕ್ಕೆ ಅಂತಿಮ ವರದಿ ನೀಡಲು ಏಪ್ರಿಲ್ ವರೆಗೆ ಕಾಲಾವಕಾಶ ನೀಡಲಾಗಿದ್ದು, ಶಿಫಾರಸು ಬಂದ ಬಳಿಕ ಸರ್ಕಾರ ಅದನ್ನು ಪರಿಗಣಿಸಲಿದೆ.
ಮನೆ ಬಾಡಿಗೆ ಭತ್ಯೆ ಕಡಿಮೆ ಮಾಡಲಾಗಿದೆ ಎನ್ನುವುದು ಸುಳ್ಳು, ಊಹಾಪೋಹದ ಮಾತುಗಳನ್ನು ನಂಬಬೇಡಿ. ವೇತನ ಹೆಚ್ಚಳದಿಂದಾಗಿ5.93 ಲಕ್ಷ ನೌಕರರು ಮತ್ತು 5.73 ಲಕ್ಷ ಪಿಂಚಣಿದಾರರಿಗೆ ಅನುಕೂಲವಾಗಲಿದೆ. ಕಾಲ್ಪನಿಕ ವೇತನ ಪರಿಗಣನೆ: ಬಸವರಾಜ ಹೊರಟ್ಟಿ ನೇತೃತ್ವದ ಸಮಿತಿ ನೀಡಿರುವ ಕಾಲ್ಪನಿಕ ವೇತನ ಶಿಫಾರಸನ್ನು ಸರ್ಕಾರ ಪರಿಗಣಿಸಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
ಪದವಿಪೂರ್ವ ಪ್ರಾಂಶುಪಾಲರಿಗೂ ಕಡಿಮೆ ಸಂಬಳ ಇದ್ದು ಇದನ್ನು ಪರಿಗಣಿಸಬೇಕು ಎಎಂದು ಜೆಡಿಎಸ್ ನ ಕೆ.ಟಿ. ಶ್ರೀಕಂಠೇಗೌಡ ಆಗ್ರಹಿಸಿದರು.