ಕೊರೊನಾ ಸೋಂಕು ಹೆಚ್ಚಳ: ವಿಧಾನಸೌಧಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಬೆಂಗಳೂರು, ಏಪ್ರಿಲ್ 18: ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ವಿಧಾನಸೌಧ ಹಾಗೂ ವಿಕಾಸಸೌಧಕ್ಕೆ ಸಾರ್ವಜನಿಕ ಭೇಟಿ ನಿಷೇಧಿಸಲಾಗಿದೆ.
ವಿಧಾನಸೌಧದಲ್ಲಿನ ಮುಖ್ಯಮಂತ್ರಿಯವರ ಸಚಿವಾಲಯ, ಸಚಿವ ಮತ್ತು ಸಚಿವಾಲಯದ ಇಲಾಖೆಗಳಿಂದ ಮುಂಚಿತವಾಗಿ ನಿಗದಿಪಡಿಸಿದ ಭೇಟಿ ಹೊರತುಪಡಿಸಿ ಸಾಮಾನ್ಯ ಭೇಟಿಗೆ ಸಾರ್ವಜನಿಕರ ಪ್ರವೇಶವನ್ನು ಕೂಡಲೇ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ ಎಂದು ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.

ಸಚಿವರ ಕಚೇರಿ ಮತ್ತು ಸಚಿವಾಲಯದ ಬಹುತೇಕ ಕಚೇರಿಯಲ್ಲಿ ನಿತ್ಯ ಕೋವಿಡ್-19 ಸೋಂಕಿನ ಪ್ರಕರಣ ವರದಿಯಾಗುತ್ತಲೇ ಇವೆ. ಹೀಗಾಗಿ ಸಚಿವಾಲಯದ ಸಿಬ್ಬಂದಿ, ಅಧಿಕಾರಿ ಮತ್ತು ಸಾರ್ವಜನಿಕರ ಆರೋಗ್ಯ ಹಾಗೂ ಆಡಳಿತದ ಹಿತದೃಷ್ಟಿಯಿಂದ ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ.
ಮುಖ್ಯಮಂತ್ರಿಯವರ ಸಚಿವಾಲಯ, ಸಚಿವರ ಕಚೇರಿ ಭೇಟಿಗೆ ಮುಂಚಿತವಾಗಿ ಸಮಯ ನಿಗದಿಯಾಗಿದ್ದರೆ ಅಂಥವರಿಗೆ ಮಾತ್ರ ಒಳಗೆ ಬಿಡಬೇಕು. ಅಂಥವರಿಗೆ ನೀಡಲಾದ ಪೂರ್ವಾನುಮತಿ ಪತ್ರವನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು.
ಜತೆಗೆ ಮಧ್ಯಾಹ್ನ 3.30ರ ಬಳಿಕವೇ ಈ ಭೇಟಿಗೆ ಅವಕಾಶ ನೀಡಬೇಕು. ಉಳಿದಂತೆ ಸಚಿವಾಲಯದ ನಾನಾ ಇಲಾಖೆಗಳಲ್ಲಿ ಕಡತಗಳ ವಿಚಾರಣೆ, ಫಾಲೋ ಅಪ್ ಕಾರಣಕ್ಕೆ ಸಾರ್ವಜನಿಕರಿಗೆ ಪ್ರವೇಶ ನೀಡುವಂತಿಲ್ಲ ಎಂದು ತಿಳಿಸಲಾಗಿದೆ.












Click it and Unblock the Notifications