ಕರ್ನಾಟಕ ಚುನಾವಣೆ : ಬೆಂಗಳೂರಿನ ಜಿದ್ದಾಜಿದ್ದಿನ 13 ಕ್ಷೇತ್ರಗಳು!
Recommended Video
ಬೆಂಗಳೂರು, ಮೇ 10 : ಕರ್ನಾಟಕ ವಿಧಾನಸಭೆ ಚುನಾವಣೆ 2018ಕ್ಕೆ ವೇದಿಕೆ ಸಿದ್ಧವಾಗಿದೆ. ಬೆಂಗಳೂರು ನಗರದಲ್ಲಿ 28 ಕ್ಷೇತ್ರಗಳಿದ್ದು, ಜಯನಗರ ಹೊರತು ಪಡಿಸಿ 27 ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿದೆ.
ಒನ್ ಇಂಡಿಯಾ ಕನ್ನಡ ಬೆಂಗಳೂರು ನಗರದಲ್ಲಿ ಜಿದ್ದಾಜಿದ್ದಿನ ಪೈಪೋಟಿ ಇರುವ 13 ಕ್ಷೇತ್ರಗಳನ್ನು ಗುರುತಿಸಿದೆ. ಈ ಕ್ಷೇತ್ರಗಳಲ್ಲಿ ಮೂರು ಪಕ್ಷಗಳ ನಡುವೆ ಪ್ರಬಲ ಪೈಪೋಟಿ ನಡೆಯಬಹುದು, ಇಲ್ಲವೇ ಎರಡು ಪಕ್ಷಗಳ ನಡುವೆ ಗೆಲುವಿಗಾಗಿ ತೀವ್ರ ಹಣಾಹಣಿ ನಡೆಯಬಹುದು.
ಬೆಂಗಳೂರು ವಿಧಾನಸಭಾ ಕ್ಷೇತ್ರಗಳ ಪರಿಚಯ
ಬೆಂಗಳೂರು ನಗರದಲ್ಲಿ 2013ರ ಚುನಾವಣೆಯಲ್ಲಿ ಬಿಜೆಪಿ 12, ಕಾಂಗ್ರೆಸ್ 13 ಸ್ಥಾನಗಳಲ್ಲಿ ಜಯಗಳಿಸಿದ್ದವು. ಜೆಡಿಎಸ್ 3 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು. ಈ ಬಾರಿ ನಗರದಲ್ಲಿ ಯಾರು ಎಷ್ಟು ಸ್ಥಾನದಲ್ಲಿ ಜಯಗಳಿಸಲಿದ್ದಾರೆ? ಎನ್ನುವುದನ್ನು ತಿಳಿಯಲು ಮೇ 15ರ ತನಕ ಕಾಯಬೇಕಾಗಿದೆ.
ಸಿ.ವಿ.ರಾಮನ್ ನಗರದ ಕದನ : ತ್ರಿಕೋನ ಸ್ಪರ್ಧೆಯಲ್ಲಿ ಯಾರಿಗೆ ಜಯ?
ಅಭ್ಯರ್ಥಿಗಳ ಪ್ರಭಾವ, ಹಾಲಿ ಶಾಸಕರು, ಸಚಿವರು ಮುಂತಾದ ಅಂಶಗಳನ್ನು ಪರಿಗಣಿಸಿ ಜಿದ್ದಾಜಿದ್ದಿನ ಕ್ಷೇತ್ರಗಳನ್ನು ಆಯ್ಕೆ ಮಾಡಲಾಗಿದೆ. ಈ ಕ್ಷೇತ್ರಗಳನ್ನು ಹೊರತು ಪಡಿಸಿ ಉಳಿದ ಕ್ಷೇತ್ರದಲ್ಲೂ ಜಿದ್ದಾಜಿದ್ದಿನ ಪೈಪೋಟಿ ಇದೆ ಎಂದ ಅನ್ನಿಸಿದರೆ ಓದುಗರು ಕಮೆಂಟ್ ಮೂಲಕ ತಿಳಿಸಬಹುದಾಗಿದೆ..
ಕರ್ನಾಟಕ ಕದನ 2018 : ಜಿದ್ದಾಜಿದ್ದಿನ ಹೋರಾಟ ನಿರೀಕ್ಷೆಯ ಕಣಗಳು
ಪ್ರಿಯಕೃಷ್ಣ, ವಿ.ಸೋಮಣ್ಣ
ಗೋವಿಂದರಾಜನಗರ ಕ್ಷೇತ್ರ ಬೆಂಗಳೂರು ನಗರದಲ್ಲಿ ಭಾರೀ ಕುತೂಹಲ ಹುಟ್ಟುಹಾಕಿದೆ. ಮಾಜಿ ಸಚಿವ, ಬಿಜೆಪಿ ನಾಯಕ ವಿ.ಸೋಮಣ್ಣ ಮತ್ತು ಕಾಂಗ್ರೆಸ್ನ ಪ್ರಿಯಕೃಷ್ಣ ನಡುವೆ ಪೈಪೋಟಿ ನಿರೀಕ್ಷಿಸಲಾಗಿದೆ. ಜೆಡಿಎಸ್ ಎ.ನಾಗೇಂದ್ರ ಪ್ರಸಾದ್ ಅವರನ್ನು ಕಣಕ್ಕಿಳಿಸಿದೆ.
2008ರಲ್ಲಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವಿ.ಸೋಮಣ್ಣ ಅವರು ನಂತರ ಪಕ್ಷ ಬದಲಾವಣೆ ಮಾಡಿ ಬಿಜೆಪಿ ಸೇರಿದ್ದರು. ನಂತರ ನಡೆದ ಉಪ ಚುನಾವಣೆಯಲ್ಲಿ ಪ್ರಿಯಕೃಷ್ಣ ವಿರುದ್ಧ ಸೋತಿದ್ದರು. ಪ್ರಿಯಕೃಷ್ಣ ಅವರು 2013ರ ಚುನಾವಣೆಯಲ್ಲಿ 40ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಬಾರಿ ಕ್ಷೇತ್ರ ಯಾರ ಪಾಲಾಗಲಿದೆ? ಕಾದು ನೋಡಬೇಕು.
ಗುರು-ಶಿಷ್ಯರ ನಡುವಿನ ಹಣಾಹಣಿ
ಪದ್ಮನಾಭನಗರ ಕ್ಷೇತ್ರದಲ್ಲಿ ಗುರು ಶಿಷ್ಯರ ನಡುವೆ ಹಣಾಹಣಿ ನಡೆಯುತ್ತಿದೆ. ಬೆಂಗಳೂರಿನ ಸಾಮ್ರಾಟ್ ಎಂದು ಕರೆಸಿಕೊಳ್ಳುವ ಆರ್.ಅಶೋಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ನಿಂದ ಎಂ.ಶ್ರೀನಿವಾಸ್, ಜೆಡಿಎಸ್ನಿಂದ ವಿ.ಕೆ.ಗೋಪಾಲ್ ಕಣದಲ್ಲಿದ್ದಾರೆ.
ಎಂ.ಶ್ರೀನಿವಾಸ್ ಅವರು ಅಶೋಕ ಅವರಿಗೆ ಒಂದು ಕಾಲದಲ್ಲಿ ರಾಜಕೀಯ ಗುರುವಾಗಿದ್ದವರು. ಶಿಷ್ಯನಿಗೆ ಸೋಲಿನ ರುಚಿ ತೋರಿಸಲು ಅವರು ಬಯಸಿದ್ದಾರೆ. ಆರ್.ಅಶೋಕ್ ಅವರನ್ನು ಸೋಲಿಸುವುದು ಸುಲಭದ ಮಾತಲ್ಲ. ವಿ.ಕೆ.ಗೋಪಾಲ್ ಅವರು ಸಹ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದರು. ಈ ಬಾರಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ನಿರೀಕ್ಷೆ ಮಾಡಲಾಗಿದೆ.
ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ
ಸಿ.ವಿ.ರಾಮನ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ನಡುವೆ ನೇರ ಹಣಾಹಣಿ ನಿರೀಕ್ಷೆ ಮಾಡಲಾಗಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪಿ.ರಮೇಶ್ ಈ ಬಾರಿ ಜೆಡಿಎಸ್ ಸೇರಿದ್ದು, ಕ್ಷೇತ್ರದಿಂದ ಕಣಕ್ಕಿಳಿದಿದ್ದಾರೆ.
ಬಿಜೆಪಿಯಿಂದ ಹಾಲಿ ಶಾಸಕ ಎಸ್.ರಘು, ಕಾಂಗ್ರೆಸ್ನಿಂದ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅಭ್ಯರ್ಥಿಗಳಾಗಿದ್ದಾರೆ. ಬಿಬಿಎಂಪಿ ಮೇಯರ್ ಎಂಬ ಹೆಸರು ಗೆಲುವು ತಂದುಕೊಡಬಹುದು ಎಂಬ ಲೆಕ್ಕಾಚಾರದಲ್ಲಿದೆ ಕಾಂಗ್ರೆಸ್. ಪಿ.ರಮೇಶ್ ಕಳೆದ ಚುನಾವಣೆಯಲ್ಲಿ 44 ಸಾವಿರ ಮತಗಳನ್ನು ಪಡೆದಿದ್ದರು. ಈ ಬಾರಿ ಏನಾಗಲಿದೆ? ಕಾದು ನೋಡಬೇಕು.
ಮುನಿರತ್ನ ವಿರುದ್ಧ ಯಾರಿಗೆ ಗೆಲುವು?
ರಾಜರಾಜೇಶ್ವರಿ ನಗರ ಬೇರೆ-ಬೇರೆ ಕಾರಣಗಳಿಗಾಗಿ ಸುದ್ದಿ ಮಾಡುತ್ತಿರುವ ಕ್ಷೇತ್ರ. ಹಾಲಿ ಶಾಸಕರು ಕಾಂಗ್ರೆಸ್ನ ಮುನಿರತ್ನ. ಬಿಜೆಪಿಯಿಂದ ಪಿ.ಎಂ.ಮುನಿರಾಜು ಗೌಡ, ಜೆಡಿಎಸ್ನಿಂದ ಜಿ.ಎಚ್.ರಾಮಚಂದ್ರ ಅವರು ಕಣದಲ್ಲಿದ್ದಾರೆ.
2013ರ ಚುನಾವಣೆಯಲ್ಲಿ ಮುನಿರತ್ನ ಅವರು 18 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಬಾರಿ ಬಿಜೆಪಿ ಟಿಕೆಟ್ಗೆ ಭಾರೀ ಪೈಪೋಟಿ ನಡೆದಿತ್ತು, ಜಿ.ಎಚ್.ರಾಮಚಂದ್ರ ಅವರು ಬಿಜೆಪಿ ಟಿಕೆಟ್ ಸಿಲಿಲ್ಲ ಎಂಬ ಕಾರಣಕ್ಕೆ ಜೆಡಿಎಸ್ ಸೇರಿದ್ದಾರೆ.
ಜಮೀರ್ ಅಹಮದ್ ಖಾನ್
ಜಮೀರ್ ಅಹಮದ್ ಖಾನ್ ಅವರ ಸ್ಪರ್ಧೆಯಿಂದಾಗಿ ಕುತೂಹಲ ಹುಟ್ಟಿಸಿರುವ ಕ್ಷೇತ್ರ ಚಾಮರಾಜಪೇಟೆ. ಮೂರು ಬಾರಿ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಜಮೀರ್ ಅಹಮದ್ ಖಾನ್ ಜೆಡಿಎಸ್ ತೊರೆದು ಕಾಂಗ್ರೆಸ್ನಿಂದ ಕಣಕ್ಕಿಳಿದಿದ್ದಾರೆ. ಆದ್ದರಿಂದ, ಸ್ವತಃ ದೇವೇಗೌಡರು ಅವರನ್ನು ಸೋಲಿಸಲು ಪಣ ತೊಟ್ಟಿದ್ದಾರೆ.
ಜೆಡಿಎಸ್ನಿಂದ ಅಲ್ತಾಫ್ ಖಾನ್, ಬಿಜೆಪಿಯಿಂದ ಎಂ.ಲಕ್ಷ್ಮೀನಾರಾಯಣ ಅವರು ಕಣದಲ್ಲಿದ್ದಾರೆ. ಜಮೀರ್ ಅಹಮದ್ ಮತ್ತು ಅಲ್ತಾಫ್ ಖಾನ್ ನಡುವೆ ನೇರ ಪೈಪೋಟಿ ನಿರೀಕ್ಷೆ ಮಾಡಲಾಗಿದೆ.
ಬಿಜೆಪಿ-ಕಾಂಗ್ರೆಸ್ ಪೈಪೋಟಿ
ಶಿವಾಜಿನಗರ ಕ್ಷೇತ್ರದಲ್ಲಿ ಬಿಜೆಪಿಯ ಕಟ್ಟಾ ಸುಬ್ರಮಣ್ಯ ನಾಯ್ಡು ಮತ್ತು ಸಚಿವ ರೋಷನ್ ಬೇಗ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ. ಶೇಖ್ ಮಸ್ತಾನ್ ಅವರು ಜೆಡಿಎಸ್ನಿಂದ ಅಭ್ಯರ್ಥಿಯಾಗಿದ್ದಾರೆ.
ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಮೊದಲು ಶಿವಾಜಿನಗರ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದರು. 2008ರ ಚುನಾವಣೆಯಲ್ಲಿ ಹೆಬ್ಬಾಳ ಕ್ಷೇತ್ರದಿಂದ ಸ್ಪರ್ಧಿಸಿದ ಗೆಲುವು ಸಾಧಿಸಿದ್ದರು. 2013ರ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ಸಿಕ್ಕಿರಲಿಲ್ಲ.
ಸುರೇಶ್ ಕುಮಾರ್ ಸೋಲಿಸಲು ತಂತ್ರ
ರಾಜಾಜಿನಗರ ಕ್ಷೇತ್ರದಲ್ಲಿ ಬಿಜೆಪಿಯ ಸುರೇಶ್ ಕುಮಾರ್ ಅವರನ್ನು ಸೋಲಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ತಂತ್ರ ರೂಪಿಸಿವೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ಜಿ.ಪದ್ಮಾವತಿ ಅವರು ಕಾಂಗ್ರೆಸ್ನಿಂದ ಕಣದಲ್ಲಿದ್ದಾರೆ.
2008, 2013ರ ಚುನಾವಣೆಯಲ್ಲಿ ಸುರೇಶ್ ಕುಮಾರ್ ಗೆಲುವು ಸಾಧಿಸಿದ್ದಾರೆ. ಜಿ.ಪದ್ಮಾವತಿ ಅವರನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಹೊಸ ಲೆಕ್ಕಾಚಾರದಲ್ಲಿದೆ. ಜೆಡಿಎಸ್ನಿಂದ ಜೇಡರಹಳ್ಳಿ ಕೃಷ್ಣಪ್ಪ ಅಭ್ಯರ್ಥಿ.
ಚಿಕ್ಕಪೇಟೆ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್ ಹಣಾಹಣಿ
ಚಿಕ್ಕಪೇಟೆ ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಆರ್.ವಿ.ದೇವರಾಜ್. ಆದರೆ, ಕ್ಷೇತ್ರದ ಕಣ ಕುತೂಹಲ ಮೂಡಿಸಿರುವುದು ಜೆಡಿಎಸ್ನ ಹೇಮಚಂದ್ರ ಸಾಗರ್ ಮತ್ತು ಬಿಜೆಪಿಯ ಉದಯ್ ಗರುಡಾಚಾರ್ ನಡುವಿನ ಸ್ಪರ್ಧೆಯಿಂದಾಗಿ.
ಹೇಮಚಂದ್ರ ಸಾಗರ್ ಚಿಕ್ಕಪೇಟೆ ಕ್ಷೇತ್ರದ ಮಾಜಿ ಶಾಸಕರು. ಈ ಬಾರಿಯ ಚುನಾವಣೆಯಲ್ಲಿಯೂ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್ ಕೈ ತಪ್ಪಿದ ಕಾರಣ ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದಾರೆ.
ಎಸ್.ಟಿ.ಸೋಮಶೇಖರ್, ಜಗ್ಗೇಶ್
ಯಶವಂತಪುರ ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಎಸ್.ಟಿ.ಸೋಮಶೇಖರ್. 2008ರಲ್ಲಿ ಬಿಜೆಪಿಯ ಶೋಭಾ ಕರಂದ್ಲಾಜೆ ಅವರು ಕ್ಷೇತ್ರದಲ್ಲಿ ಜಯಗಳಿಸಿದ್ದರು.
ಕ್ಷೇತ್ರದ ಚುನಾವಣೆ ಕುತೂಹಲ ಕೆರಳಿಸಿರುವುದು ನಟ ಜಗ್ಗೇಶ್ ಅವರ ಸ್ಪರ್ಧೆಯ ಕಾರಣದಿಂದಾಗಿ. ಬಿಜೆಪಿ ಅಭ್ಯರ್ಥಿಯಾಗಿ ಅವರು ಕಣಕ್ಕಿಳಿದಿದ್ದಾರೆ. ಟಿ.ಎನ್.ಜವರಾಯಿ ಗೌಡ ಅವರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ. 2008, 2013ರ ಚುನಾವಣೆಯಲ್ಲಿ ಅವರು ಕ್ಷೇತ್ರದಲ್ಲಿ ಸೋತಿದ್ದರು.
ಬಿಜೆಪಿ-ಕಾಂಗ್ರೆಸ್ ಜಿದ್ದಾಜಿದ್ದಿ
ಹೆಬ್ಬಾಳ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಿರೀಕ್ಷಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾದ ಭೈರತಿ ಸುರೇಶ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ.
ಕ್ಷೇತ್ರದ ಹಾಲಿ ಶಾಸಕರು ಬಿಜೆಪಿಯ ವೈ.ಎ.ನಾರಾಯಣ ಸ್ವಾಮಿ. 2013ರಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಆಪ್ತರಾದ ಆರ್.ಜಗದೀಶ್ ಗೆಲುವು ಸಾಧಿಸಿದ್ದರು. ಆದರೆ, ಹೃದಯಾಘಾತದಿಂದ ಅವರು ಮೃತಪಟ್ಟಿದ್ದರಿಂದ ಉಪ ಚುನಾವಣೆ ನಡೆದು ನಾರಾಯಣ ಸ್ವಾಮಿ ಗೆದ್ದಿದ್ದಾರೆ. ಹನುಮಂತೇ ಗೌಡ ಅವರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ.
ಕಾಂಗ್ರೆಸ್-ಬಿಜೆಪಿ ಜಿದ್ದಾಜಿದ್ದಿ
ಬೆಂಗಳೂರಿನ ಕೆ.ಆರ್.ಪುರಂ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಪೈಪೋಟಿ ನಿರೀಕ್ಷಿಸಲಾಗಿದೆ. ಕ್ಷೇತ್ರದ ಹಾಲಿ ಶಾಸಕರು ಕಾಂಗ್ರೆಸ್ನ ಭೈರತಿ ಬಸವರಾಜು, ಎನ್.ಎಸ್.ನಂದೀಶ್ ರೆಡ್ಡಿ ಬಿಜೆಪಿ ಅಭ್ಯರ್ಥಿ.
2008ರ ಚುನಾವಣೆಯಲ್ಲಿ ಗೆದ್ದಿದ್ದ ನಂದೀಶ್ ರೆಡ್ಡಿ ಅವರು 2013ರ ಚುನಾವಣೆಯಲ್ಲಿ ಸೋತಿದ್ದಾರೆ. ಈ ಬಾರಿ ಪುನಃ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಗೋಪಾಲ್ ಡಿ.ಎ. ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ.
ಎನ್.ಎ.ಹ್ಯಾರೀಸ್ ವಿರುದ್ಧ ಯಾರಿಗೆ ಜಯ?
ಎನ್.ಎ.ಹ್ಯಾರೀಸ್ ಶಾಂತಿ ನಗರ ಕ್ಷೇತ್ರದ ಕಾಂಗ್ರೆಸ್ ಶಾಸಕರು. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಅವರನ್ನು ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಬಿಜೆಪಪಿಯಿಂದ ವಾಸುದೇವಮೂರ್ತಿ ಅವರು ಕಣದಲ್ಲಿದ್ದಾರೆ.
2013ರ ಚುನಾವಣೆಯಲ್ಲಿ ವಾಸುದೇವಮೂರ್ತಿ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದರು. 34,155 ಮತಗಳನ್ನು ಪಡೆದು ಸೋಲು ಕಂಡಿದ್ದರು. ಬಿಜೆಪಿ ಟಿಕೆಟ್ಗೆ ಶ್ರೀಧರ್ ರೆಡ್ಡಿ ಅವರು ಪ್ರಯತ್ನ ಪಟ್ಟಿದ್ದರು. ಟಿಕೆಟ್ ಕೈ ತಪ್ಪಿದ ಕಾರಣ ಜೆಡಿಎಸ್ ಸೇರಿ ಅಭ್ಯರ್ಥಿಯಾಗಿದ್ದಾರೆ.
ಬಿಜೆಪಿ-ಜೆಡಿಎಸ್ ಪೈಪೋಟಿ
ಒಕ್ಕಲಿಗರ ಪಾಬಲ್ಯವಿರುವ ಕ್ಷೇತ್ರ ಮಹಾಲಕ್ಷ್ಷೀ ಲೇಔಟ್. ಹಾಲಿ ಶಾಸಕರು ಜೆಡಿಎಸ್ನ ಕೆ.ಗೋಪಾಲಯ್ಯ. ಗೋಪಾಲಯ್ಯ ವಿರುದ್ಧ 2013ರ ಚುನಾವಣೆಯಲ್ಲಿ ಸೋತಿದ್ದ ಮಾಜಿ ಶಾಸಕ ನೆಲ.ನರೇಂದ್ರಬಾಬು ಈ ಬಾರಿ ಬಿಜೆಪಿಯಿಂದ ಅಭ್ಯರ್ಥಿಯಾಗಿದ್ದಾರೆ.
2013ರಲ್ಲಿ ಕೆ.ಗೋಪಾಲಯ್ಯ ಅವರು 66,127 ಮತಗಳನ್ನು ಪಡೆದಿದ್ದಾರೆ. ಕಳೆದ ಬಾರಿ ಕಾಂಗ್ರೆಸ್ನಲ್ಲಿದ್ದ ನೆ.ಲ.ನರೇಂದ್ರ ಬಾಬು ಅವರು ಬಿಜೆಪಿ ಸೇರಿದ್ದು, ಮತ್ತೆ ಗೋಪಾಲಯ್ಯ ಎದುರಾಳಿಯಾಗಿದ್ದಾರೆ. ಎಚ್.ಎಸ್.ಮಂಜುನಾಥ್ ಎಂಬುವವರು ಕಾಂಗ್ರೆಸ್ ಅಭ್ಯರ್ಥಿ. ಆದರೆ, ನೇರ ಪೈಪೋಟಿ ಇರುವುದು ಬಿಜೆಪಿ-ಜೆಡಿಎಸ್ ನಡುವೆ.