ಅಂಬರೀಶ್ ಜೆಡಿಎಸ್ ಗೆ? ಕುತೂಹಲ ಕೆರಳಿಸಿದ ಅಂಬಿ-ಎಚ್ಡಿಕೆ ಭೇಟಿ!
ಬೆಂಗಳೂರು, ಮೇ 06: ರೆಬೆಲ್ ಸ್ಟಾರ್ ಅಂಬರೀಶ್ ಜೆಡಿಎಸ್ ಗೆ ಸೇರ್ತಾರಾ..? ನಿನ್ನೆ(ಮೇ 05) ರಾತ್ರಿ ಬೆಂಗಳೂರಿನ ಗಾಲ್ಫ್ ಕ್ಲಬ್ ನಲ್ಲಿರುವ ಅಂಬರೀಶ್ ಅವರ ಮನೆಗೆ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ದಿಢೀರ್ ಭೇಟಿ ನೀಡಿದರು. ಉಭಯನಾಯಕರ ಈ ಭೇಟಿ ರಾಜಕೀಯ ವಲಯದಲ್ಲಿ ಕುತೂಹಲ ಕೆರಳಿಸಿದೆ.
ಕಾಂಗ್ರೆಸ್ ಮಟ್ಟಿಗೆ ಅಕ್ಷರಶಃ 'ರೆಬೆಲ್' ಸ್ಟಾರ್ ಆಗಿರುವ ಅಂಬರೀಶ್, ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲಾರೆ ಎಂದು ಹಿಂದೆ ಸರಿದಿದ್ದರು.
ಕಾಂಗ್ರೆಸ್ ನಾಯಕರೇ ಅವರ ಮನೆಗೆ ತೆರಳಿ ಬಿ ಫಾರಂ ನೀಡಿದರೂ, ಅವರು ನಾಮಪತ್ರ ಸಲ್ಲಿಸಿರಲಿಲ್ಲ. ನಂತರ ರವಿ ಕುಮಾರ್(ಗಣಿಗ ರವಿ) ಅವರು ಕೊನೆಯ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಹೀಗೆ ತಮ್ಮನ್ನು ಕಡೆಗಣಿಸಿದ ಕಾಂಗ್ರೆಸ್ಸಿಗೆ ಅಂಬರೀಶ್ ಕಲಿಸಿದ ಪಾಠವನ್ನು ಬಿಜೆಪಿ-ಜೆಡಿಎಸ್ ನಾಯಕರು ತಲೆದೂಗಿ ಮೆಚ್ಚಿಕೊಂಡರು.

ಎಚ್ ಡಿಕೆ ಅಂಬಿ ಭೇಟಿ ಹಿಂದಿನ ಮರ್ಮವೇನು?
ಎಚ್ ಡಿಕೆ-ಅಂಬಿ ಭೇಟಿ ಇದೀಗ ರಾಜಕೀಯ ವಲಯದಲ್ಲಿ ಸಾಕಷ್ಟು ಗುಸುಗುಸುವನ್ನು ಎಬ್ಬಿಸಿದೆ. ಅಂಬಿ ಕಾಂಗ್ರೆಸ್ಸಿಗೆ ಗುಡ್ ಬೈ ಹೇಳುತ್ತಾರೆ, ಜೆಡಿಎಸ್ ಸೇರುತ್ತಾರೆ ಎಂಬಿತ್ಯಾದಿ ಸುದ್ದಿ ಹರಿದಾಡುತ್ತಿದೆ. ಆದರೆ ಕೆಲವು ಮೂಲಗಳ ಪ್ರಕಾರ ಕುಮಾರಸ್ವಾಮಿಯವರು ಅಂಬರೀಶ್ ಅವರ ಬಳಿ ಜೆಡಿಎಸ್ ಪರ ಪ್ರಚಾರ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲ, ಜೆಡಿಎಸ್ ಗೆ ಸೇರುವಂತೆಯೂ ಅವರಿಗೆ ಆಹ್ವಾನ ನೀಡಿದ್ದಾರೆ.

ಅವಮಾನದ ಅಳಲು ತೋಡಿಕೊಂಡ ಅಂಬಿ
ಕುಮಾರಸ್ವಾಮಿ ಅವರ ಮನವಿಯನ್ನು ಅಂಬರೀಶ್ ಅವರು ತಿರಸ್ಕರಿಸದೆ, ಕಾಂಗ್ರೆಸ್ ನಲ್ಲಿ ತಮಗಾದ ಅವಮಾನವನ್ನು ಅವರ ಬಳಿ ಹೇಳಿಕೊಂಡಿದ್ದಾರೆ. ನನ್ನನ್ನು ಯಾವ ವಿಷಯಕ್ಕೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಸಚಿವ ಸ್ಥಾನದಿಂದ ಕಿತ್ತುಹಾಕುವಾಗಲೂ ನನ್ನನ್ನು ಒಂದು ಮಾತನ್ನೂ ಕೇಳಿಲ್ಲ. ಆದ್ದರಿಂದಲೇ ನಾನು ಚುನಾವಣೆಯಿಂದ ಹಿಂದೆ ಸರಿದೆ. ಹಿರಿಯ ನಾಯಕರನ್ನು ಕಾಂಗ್ರೆಸ್ ನಾಯಕರು ನಡೆಸಿಕೊಳ್ಳುತ್ತಿರುವ ರೀತಿ ಸರಿಯಿಲ್ಲ ಎಂದು ಇದೇ ಸಂದರ್ಭದಲ್ಲಿ ಅವರು ತ್ಮ್ ಅಳಲು ತೋಡಿಕೊಂಡಿದ್ದಾರೆ.

ಕಾಂಗ್ರೆಸ್ ತೊರೆಯುತ್ತಾರಾ ಅಂಬಿ?
ಅವೆಲ್ಲ ಸರಿ, ಆದರೆ ನನ್ನ ಬೇಸರವೇನಿದ್ದರೂ ಕಾಂಗ್ರೆಸ್ಸಿನ ಕೆಲವು ರಾಜ್ಯ ನಾಯಕರ ಬಗ್ಗೆ. ಪಕ್ಷದ ಮೇಲಲ್ಲ ಎಂದು ಪಕ್ಷ ನಿಷ್ಠೆ ಮೆರೆದಿದ್ದ ಅಂಬರೀಶ್ ಈಗ ಏಕಾಏಕಿ ಕಾಂಗ್ರೆಸ್ ಗೆ ಗುಡ್ ಬೈ ಹೇಳುವ ನಿರ್ಧಾರ ಕೈಗೊಳ್ಳುತ್ತಾರಾ ಎಂದುಬು ಈಗ ಎದ್ದಿರುವ ಕುತೂಹಲದ ಪ್ರಶ್ನೆ. ಮೂಲಗಳ ಪ್ರಕಾರ ಶೀಘ್ರದಲ್ಲಿಯೇ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರುವ ನಿರ್ಧಾರ ಪ್ರಕಟಿಸುವುದಾಗಿ ಅಂಬಿ ಹೇಳಿದ್ದಾರೆ. ಅದೂ ಅಲ್ಲದೆ, ಇತ್ತೀಚೆಗೆ ಜೆಡಿಎಸ್ ನಾಯಕರು ಅಂಬರೀಶ್ ಅವರನ್ನು ಬಾಯ್ತುಂಬ ಹೊಗಳಿದ್ದು, ಮತ್ತು ಅಂಬರೀಶ್ ಅವರು ಸಹ ಜೆಡಿಎಸ್ ಅನ್ನು ಮೆಚ್ಚಿದ್ದು ಈ ಎಲ್ಲ ಘಟನೆಗಳನ್ನೂ ಒಂದಕ್ಕೊಂದು ತಾಳೆ ಮಾಡಿದರೆ ಸದ್ಯದಲ್ಲೇ ರಾಜಕೀಯ ವಲಯದಲ್ಲಿ ಮಹತ್ವದ ಬದಲಾವಣೆಯೊಂದು ಸಂಭವಿಸಿದರೆ ಅಚ್ಚರಿಯಿಲ್ಲ!

ಘಟಾನುಘಟಿ ನಾಯಕರಿಗೂ ಕ್ಯಾರೇ ಎನ್ನದ ಅಂಬರೀಶ್
ಮಂಡ್ಯದಲ್ಲಿ ಏ.24 ರಂದು ಸುದ್ದಿಗೋಷ್ಠಿ ನಡೆಸಿದ್ದ ಅಂಬರೀಶ್, ತಾವು ಚುನಾವಣಾ ರಾಜಕೀಯದಿಂದ ದೂರಸರಿಯುವುದಾಗಿ ಹೇಳಿದ್ದರು. ಈ ಗೋಷ್ಠಿಯಲ್ಲಿ ತಮ್ಮನ್ನು ಕಾಂಗ್ರೆಸ್ಸಿಗರು ಕಡೆಗಣಿಸುತ್ತಿರುವ ಬಗ್ಗೆ ಪರೋಕ್ಷವಾಗಿ ಹೇಳಿಕೊಂಡಿದ್ದರು. ಸುದ್ದಿಗೋಷ್ಠಿಯ ನಂತರ ನಾಮಪತ್ರವನ್ನು ಸಲ್ಲಿಸದೆ, ಅಂಬರೀಶ್ ಚುನಾವಣೆಯಿಂದ ಹಿಂದೆ ಸರಿಯುತ್ತಿದ್ದಂತೆಯೇ ಕಾಂಗ್ರೆಸ್ಸಿನ ಘಟಾನುಘಟಿ ನಾಯಕರೂ ಅವರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಅಂಬಿ ಅವರ ಮನೆಯವರೆಗೆ ಬಂದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಚುನಾವಣಾ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರನ್ನೂ ಮಾತನಾಡದೆ ಹಾಗೆಯೇ ವಾಪಸ್ ಕಳಿಸುವ ಮೂಲಕ ತಾನು ಯಾವತ್ತಿದ್ದರೂ 'ರೆಬೆಲ್ ಸ್ಟಾರ್' ಎಂಬುದನ್ನು ಅಂಬರೀಶ್ ಸಾಬೀತುಪಡಿಸಿದ್ದರು.












Click it and Unblock the Notifications