ನನ್ನ ಬೆಳೆಸಿದ್ದು ದೇವೇಗೌಡ ಅಲ್ಲ ರಾಮಕೃಷ್ಣ ಹೆಗಡೆ: ಸಿದ್ದರಾಮಯ್ಯ
ಬೆಂಗಳೂರು, ಮೇ 06: ನನ್ನನ್ನು ಗುರುತಿಸಿದ್ದು, ರಾಜಕೀಯದಲ್ಲಿ ಬೆಳೆಸಿದ್ದು ರಾಮಕೃಷ್ಣ ಹೆಗಡೆಯವರೇ ಹೊರತು ದೇವೇಗೌಡ ಅವರಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಪ್ರೆಸ್ಕ್ಲಬ್ನಲ್ಲಿ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ನನ್ನನ್ನು ಮೊದಲಿಗೆ ಕನ್ನಡ ಕಾವಲು ಸಮಿತಿ ಅಧ್ಯಕ್ಷನನ್ನಾಗಿಸಿದ್ದು ರಾಮಕೃಷ್ಣ ಹೆಗಡೆ, 1994ರಲ್ಲಿ ಮೊದಲಿಗೆ ಸಚಿವನನ್ನಾಗಿ ಮಾಡಿದ್ದು ಸಹ ರಾಮಕೃಷ್ಣ ಹೆಗಡೆ ಅವರೇ ಹೊರತು ದೇವೇಗೌಡ ಅವರು ಅಲ್ಲ ಎಂದರು.
ರಾಮಕೃಷ್ಣ ಹೆಗಡೆ, ಪಿಜಿಆರ್ ಸಿಂಧ್ಯ, ಬೊಮ್ಮಾಯಿ, ಎಂ.ಪಿ.ಪ್ರಕಾಶ್ ನಾವೆಲ್ಲರೂ ಸೇರಿ ಪಕ್ಷ ಕಟ್ಟಿದೆವು ಅದರಿಂದಲೇ ದೇವೇಗೌಡರು ಮುಖ್ಯಮಂತ್ರಿ ಆಗುವಂತಾಯಿತು ಎಂದರು.

ದೇವೇಗೌಡ ಅವರು ಅತ್ಯುತ್ತಮ ನಾಯಕ ಎನ್ನುವುದರಲ್ಲಿ ಎರಡು ಮಾತಿಲ್ಲ ಎಂದ ಸಿದ್ದರಾಮಯ್ಯ, ಅವರು ಮುಖ್ಯಮಂತ್ರಿ ಆಗಿದ್ದವರು, ದೇಶದ ಪ್ರಧಾನಿ ಆಗಿದ್ದವರು, ಅಂತಹವರನ್ನು ನಾಯಕ ಎನ್ನದಿರಲು ಸಾಧ್ಯವೇ ಇಲ್ಲ ಆದರೆ ಅವರು ನನ್ನನ್ನು ರಾಜಕೀಯದಲ್ಲಿ ಬೆಳಿಸಿಲ್ಲ ಎಂದು ಕಡ್ಡಿ ತುಂಡು ಮಾಡಿದಂತೆ ಹೇಳಿದರು.
ಜನರ ಅನುಕಂಪ ಗಳಿಸಿಕೊಳ್ಳಲು ದೇವೇಗೌಡರು 'ನಾನು ಸಿದ್ದರಾಮಯ್ಯನ ಬೆಳೆಸಿದೆ ಎಂದು ಹೇಳಿಕೊಳ್ಳುತ್ತಿದ್ದಾರೆಯೇ ಹೊರತು ಇದರಲ್ಲಿ ಯಾವ ಸತ್ಯವೂ ಇಲ್ಲ, ನಾನು ಕೆಲವು ಬಾರಿ ಸೋತಿದ್ದೇನೆ ಅದಕ್ಕೂ ಅವರೇ ಕಾರಣವಾ?' ಎಂದು ಮರು ಪ್ರಶ್ನೆ ಮಾಡಿದರು.












Click it and Unblock the Notifications