ತ್ರಿಶಂಕು ಫಲಿತಾಂಶ : ಮಲ್ಲಿಕಾರ್ಜುನ ಖರ್ಗೆ ಬಾಯಿಗೆ ಲಡ್ಡು?
Recommended Video
ಬೆಂಗಳೂರು, ಮೇ 10 : ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾದಂತೆ, ರಾಜಕೀಯ ರಂಗದಲ್ಲಿ ಹಲವಾರು ಬದಲಾವಣೆಗಳಾಗುತ್ತಿದ್ದು, ಹಲವಾರು ಸ್ವರೂಪಗಳನ್ನು ಪಡೆಯುತ್ತಿದೆ, ಹಲವಾರು ಬಣ್ಣಗಳನ್ನು ಕೂಡ ಬಳಿದುಕೊಳ್ಳುತ್ತಿದೆ.
ಅವುಗಳಲ್ಲಿ ಒಂದು, ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ? ಸಿದ್ದರಾಮಯ್ಯನವರಾ, ಬಿ ಎಸ್ ಯಡಿಯೂರಪ್ಪನವರಾ, ಎಚ್ ಡಿ ಕುಮಾರಸ್ವಾಮಿಯವರಾ ಅಥವಾ ಬೇರಾದರೂ ಆಗುವ ಸಾಧ್ಯತೆ ಇದೆಯಾ? ಇದಕ್ಕೆಲ್ಲ ಉತ್ತರ, ಮೇ 12ರಂದು ಶನಿವಾರ ಮತದಾನವಾಗಿ, ಮೇ 15ರಂದು ಮಂಗಳವಾರ ಫಲಿತಾಂಶ ಪ್ರಕಟವಾದಾಗಲೇ ಗೊತ್ತಾಗುವುದು.
ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಸಿದ್ದರಾಮಯ್ಯ? ಖರ್ಗೆ ಪ್ರತಿಕ್ರಿಯೆ ಏನು?
ಆದರೆ, ಜನಮನದಲ್ಲಿ ಏನಿದೆ ಬಲ್ಲವರಾರು? ರಾಜ್ಯಾದ್ಯಂತ ಭರ್ಜರಿ ಪ್ರಚಾರದಲ್ಲಿ ತೊಡಗಿರುವ ರಾಜಕಾರಣಿಗಳು ಏನೇನು ಲೆಕ್ಕಾಚಾರ ಹಾಕುತ್ತಿದ್ದಾರೆ ಯಾರು ಬಲ್ಲರು? ಒಂದು ವೇಳೆ ಹಲವಾರು ಸಮೀಕ್ಷೆಗಳು ಹೇಳಿದಂತೆ ಅತಂತ್ರ ಸ್ಥಿತಿಯೇ ನಿರ್ಮಾಣವಾದರೆ ಯಾರು ಯಾರೊಂದಿಗೆ ಮೈತ್ರಿ ಮಾಡಿಕೊಳ್ಳಲಿದ್ದಾರೆ?
ಇದನ್ನೆಲ್ಲ ನೋಡಿದರೆ, ಕೆಲ ಬೆಳವಣಿಗೆಗಳು, ವ್ಯಾಖ್ಯಾನಗಳು ಅಚ್ಚರಿ ಮೂಡಿಸುತ್ತವೆ. ಎಲ್ಲರ ಲೆಕ್ಕಾಚಾರಗಳು ಬುಡಮೇಲಾದರೂ ಆಶ್ಚರ್ಯವಿಲ್ಲ. ನಾವು ನಿರೀಕ್ಷಿಸದೆ ಇರದ ಕೆಲ ರಾಜಕಾರಣಿಗಳು ಇದ್ದಕ್ಕಿದ್ದಂತೆ ಸ್ಟೇಜಿನ ಮೇಲೆ ಎಂಟ್ರಿ ಕೊಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅವುಗಳಲ್ಲಿ ಮುಂದಿನದೂ ಒಂದು.
ಮಲ್ಲಿಕಾರ್ಜುನ ಖರ್ಗೆ ಮುಖದಲ್ಲಿ ಮಂದಹಾಸ
ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಹಾಗೂ ತ್ರಿಶಂಕು ವಿಧಾನಸಭೆಯ ಸಾಧ್ಯತೆಯ ಸಮೀಕ್ಷಾ ವರದಿಗಳು ಕಾಂಗ್ರೆಸ್ನ ಅತ್ಯಂತ ಹಿರಿಯ ನಾಯಕ, ದಲಿತ ಮುಖ ಮಲ್ಲಿಕಾರ್ಜುನ ಖರ್ಗೆ ಮುಖದಲ್ಲಿ ಮಂದಹಾಸ ಮೂಡಿಸಿದೆ; ಮುಖ್ಯಮಂತ್ರಿ ಕನಸನ್ನು ಚಿಗುರಿಸಿದೆ.
ಸಿದ್ದರಾಮಯ್ಯ ಮೇಲಿನ ಮುನಿಸಿನ ಬಗ್ಗೆ ಖರ್ಗೆ ಹೇಳಿದ್ದು ಹೀಗೆ...
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಸಾಧ್ಯತೆಯೇ ಅಧಿಕ
ಬುಧವಾರ ತಡ ರಾತ್ರಿಯವರೆಗೆ ನಾನಾ ಟಿವಿಗಳು, ಸಂಸ್ಥೆಗಳು ಪ್ರಸಾರ ಮಾಡಿದ ಸಮೀಕ್ಷಾ ವರದಿಗಳ ಪೈಕಿ ಬಹುತೇಕ ತ್ರಿಶಂಕು ವಿಧಾನಸಭೆಯ ಮುನ್ಸೂಚನೆ ನೀಡಿದೆ. ಈ ಸಂದರ್ಭದಲ್ಲಿ ಕಾಂಗ್ರೆಸ್-ಜೆಡಿಎಸ್ನ ಮೈತ್ರಿಯ ಸಾಧ್ಯತೆಯೇ ಅಧಿಕ ಎನ್ನುವ ವಿಶ್ಲೇಷಣೆ ನಡೆದಿದೆ. ಈ ವಿಶ್ಲೇಷಣೆ ನಡುವೆಯೇ ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ ಎಂಬ ಎಚ್ ಡಿ ಕುಮಾರಸ್ವಾಮಿ ಹೇಳಿಕೆ ಪ್ರಾಮುಖ್ಯತೆ ಪಡೆದಿದೆ.
ಸಿದ್ದರಾಮಯ್ಯ ಮುಮಂ ಆಗುವುದು ಗೌಡರಿಗೆ ಇಷ್ಟವಿಲ್ಲ
ಸಿದ್ದರಾಮಯ್ಯ ಹಾಗೂ ಗೌಡರ ಕುಟುಂಬದ ನಡುವಿನ ಜಿದ್ದಾಜಿದ್ದಿಗೆ 12 ವರ್ಷಗಳ ಇತಿಹಾಸವಿದೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮರು ಆಯ್ಕೆಯಾಗುವುದು ಗೌಡರ ಕುಟುಂಬಕ್ಕೆ ಸುತಾರಾಂ ಇಷ್ಟವಿಲ್ಲ. ಜತೆಗೆ ಬಿಜೆಪಿ ಜೊತೆಗೆ ಕೈಜೋಡಿಸಿದರೆ ರಾಷ್ಟ್ರೀಯ ರಾಜಕೀಯದಲ್ಲಿ ತಮ್ಮ ಪ್ರಾಮುಖ್ಯತೆ ಕಡಿಮೆಯಾಗಲಿದೆ ಎಂಬ ಭೀತಿ ಗೌಡರಿಗಿದೆ. ಈ ಹಿನ್ನೆಲೆಯಲ್ಲಿ ತ್ರಿಶಂಕು ವಿಧಾನಸಭೆ ರಚನೆಯಾದರೆ ಜೆಡಿಎಸ್ ಖರ್ಗೆ ಬೆಂಬಲಕ್ಕೆ ನಿಲ್ಲಬಹುದು ಎಂಬ ವ್ಯಾಖ್ಯಾನ ಆರಂಭವಾಗಿದೆ.
ಒಂದೇ ಕಲ್ಲಿನಲ್ಲಿ ಎರಡು ಮಾವಿನ ಹಣ್ಣು
ಮಲ್ಲಿಕಾರ್ಜುನ ಖರ್ಗೆ ಅವರನ್ನು ಬೆಂಬಲಿಸುವ ಮೂಲಕ ಜೆಡಿಎಸ್ ಒಂದೇ ಕಲ್ಲಿನಲ್ಲಿ ಎರಡು ಮಾವಿನ ಹಣ್ಣು ಉರುಳಿಸುವ ಯೋಜನೆ ರೂಪಿಸಿದೆ. ಒಂದು ಪಕ್ಷದ ದಲಿತ ಮತ ಬ್ಯಾಂಕ್ ಗಟ್ಟಿಗೊಳಿಸುವುದು. ಇನ್ನೊಂದು ರಾಷ್ಟ್ರೀಯ ರಾಜಕೀಯದಲ್ಲಿ ಮತ್ತೆ ಚಲಾವಣೆಗೆ ಬರುವುದು. ಇದಕ್ಕೆ ಪೂರಕವೆಂಬಂತೆ, ಜೆಡಿಎಸ್ ರಾಷ್ಟ್ರಾಧ್ಯಕ್ಷರಾದ ದೇವೇಗೌಡ ಅವರು, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡರೆ ನೆಟ್ಟಗಿರಲ್ಲ ಎಂದು ಕುಮಾರಸ್ವಾಮಿಗೆ ಎಚ್ಚರಿಕೆ ನೀಡಿದ್ದಾರೆ.
ಡಿಕೆ ಶಿವಕುಮಾರ್ ಕೂಡ ಟವೆಲ್ ಹಾಕಲಿದ್ದಾರೆ
ತ್ರಿಶಂಕು ವಿಧಾನಸಭೆ ರಚನೆಯಾದರೆ ಕಾಂಗ್ರೆಸ್ನ ಇನ್ನೊಬ್ಬ ಪ್ರಭಾವಿ ನಾಯಕ ಡಿಕೆ ಶಿವಕುಮಾರ್ ಕೂಡಾ ಸಿಎಂ ಕುರ್ಚಿಗೆ ಟವೆಲ್ ಹಾಕಬಹುದು. ಆದರೆ ಜೆಡಿಎಸ್ ಒಪ್ಪುವ ಸಾಧ್ಯತೆ ಇದೆ. ಏಕೆಂದರೆ ಇನ್ನೊಬ್ಬ ಒಕ್ಕಲಿಗ ನಾಯಕ ಕುಮಾರಸ್ವಾಮಿ ಮೀರಿ ಬೆಳೆಯುವುದು ಪಕ್ಷಕ್ಕೆ ಬೇಕಿಲ್ಲ. ಒಟ್ಟಾರೆ ತ್ರಿಶಂಕು ವಿಧಾನಸಭೆ ರಚನೆಯಾದರೆ ಹಿರಿಯ ಕಾಂಗ್ರೆಸ್ ನಾಯಕ, ದಲಿತ ಮುಖಂಡ ಮಲ್ಲಿಕಾರ್ಜುನ ಖರ್ಗೆ ಅಥವಾ ಡಿಕೆಶಿ ಬಾಯಿಗೆ ಲಡ್ಡು ಬೀಳುವುದು ಖಚಿತ.