ದಲಿತ ಮತದಾರನ ಮರೆತರೆ ಚುನಾವಣೆ ಗೆಲವು ಕಷ್ಟ
ಬೆಂಗಳೂರು, ಜನವರಿ 19: ಇತ್ತೀಚಿನ ವರ್ಷಗಳಲ್ಲಿ ಚುನಾವಣೆಯಲ್ಲಿ ಹಣಕ್ಕಿಂತಲೂ ಹೆಚ್ಚು ಚಲಾವಣೆಯಾಗುವುದು ಜಾತಿ, ಯಾವ ಪಕ್ಷಗಳೂ ಸಹ ಜಾತಿ ವಿಷಯವನ್ನು ಬದಿಗೆ ಸರಿಸಿ ಚುನಾವಣೆ ಅಖಾಡಕ್ಕೆ ಇಳಿಯಲು ಸಾಧ್ಯವೇ ಇಲ್ಲ ಎನ್ನುವಷ್ಟು ರಾಜಕೀಯ ಮತ್ತು ಜಾತಿ ಸಮೀಕರಣಗೊಂಡುಬಿಟ್ಟಿವೆ.
ಬರುತ್ತಿರುವ ಚುನಾವಣೆಯಲ್ಲಿಯೂ ಜಾತಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿದ್ದು, ಅದರಲ್ಲಿಯೂ ದಲಿತ ಮತದಾರರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ ಎನ್ನುತ್ತಾರೆ ರಾಜ್ಯ ಚುನಾವಣಾ ಪಂಡಿತರು.
ದಲಿತರೇ ಮುಖ್ಯಮಂತ್ರಿಯಾಗಲಿ ಎಂದು ನಾನು ಹೇಳಿಲ್ಲ: ಮಲ್ಲಿಕಾರ್ಜುನ ಖರ್ಗೆ
ಸೋರಿಕೆಯಾಗಿರುವ ಜಾತಿ ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ ಶೇ 18ರಷ್ಟು ದಲಿತ ಮತದಾರರಿದ್ದಾರೆ. ಹಾಗಾಗಿ ಎಲ್ಲಾ ರಾಜಕೀಯ ಪಕ್ಷಗಳು ದಲಿತ ಮತದಾರರನ್ನು ಓಲೈಸುವ ಪ್ರಯತ್ನದಲ್ಲಿ ನಿರತರಾಗಿರುವುದು ಸ್ಪಷ್ಟ. ಚುನಾವಣೆ ಗೆಲ್ಲಲು ದಲಿತ ಮತದಾರನ ಆಶಿರ್ವಾದ ಅತ್ಯವ್ಯಶ್ಯಕವೂ ಆಗಿದೆ.
ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ 36 ಮೀಸಲು ಕ್ಷೇತ್ರಗಳಿವೆ, ಅಷ್ಟಲ್ಲದೆ 60 ಬೇರೆ ಕ್ಷೇತ್ರಗಳಲ್ಲಿ ದಲಿತ ಮತದಾರರು ತಮ್ಮ ಪ್ರಭಾವ ಬೀರಲಿದ್ದಾರೆ, ಹಾಗಾಗಿ ಒಟ್ಟು 96 ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ದಲಿತರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.
ರಾಜ್ಯದ ಮೂರೂ ಪ್ರಮುಖ ಪಕ್ಷಗಳು ದಲಿತ ಓಟಿನ ಮೇಲೆ ಕಣ್ಣಿಟ್ಟುಕೊಂಡೇ ರಾಜ್ಯ ಪ್ರವಾಸ ಮಾಡುತ್ತಿರುವುದು ಸುಲಭಕ್ಕೆ ಗಮನಿಸಬಹುದಾದ ಅಂಶವೇ. ಮುಖ್ಯಮಂತ್ರಿ ಅಬ್ಯರ್ಥಿಗಳೆನಿಸಿಕೊಂಡವರು ತಮ್ಮ ಪ್ರತಿ ಭಾಷಣದಲ್ಲಿ ದಲಿತರನ್ನು ಓಲೈಸಲೆಂದೇ ಕನಿಷ್ಠ 15 ನಿಮಿಷ ಮೀಸಲಿಟ್ಟಿರುವುದು ಕಾಣಬಹುದು.
ಒಟ್ಟು ಜನಸಂಖ್ಯೆಯಲ್ಲಿ 24% ದಲಿತರಿದ್ದಾರೆ, ಅದರಲ್ಲಿಯೂ ಪರಿಶಿಷ್ಟ ಜಾತಿಯ ಮಂದಿ ಹೆಚ್ಚಿಗೆ ಇದ್ದಾರೆ. ಕಾಂಗ್ರೆಸ್ ಪಕ್ಷವೂ ದಲಿತ ಮತದಾರರನ್ನು ಸೆಳೆಯಲು ಎಸ್/ಎಸ್ಟಿ ಸಮಾವೇಶವನ್ನು ಬಳ್ಳಾರಿಯಲ್ಲಿ ಆಯೋಜಿಸುತ್ತಿದೆ, ಈ ಸಮವೇಶಕ್ಕೆ ರಾಹುಲ್ ಗಾಂಧಿ ಅವರು ಆಗಮಿಸಲಿದ್ದಾರೆ.
ಬಿಜೆಪಿ ಕೂಡ ದಲಿತ ಮತದಾರರನ್ನು ಸೆಳೆಯಲು ಹಿಂದೆ ಬಿದ್ದಿಲ್ಲ, ದಲಿತ ಮತದಾರರನ್ನು ದೃಷ್ಠಿಯಲ್ಲಿಟ್ಟುಕೊಂಡೇ, ಮೈಸೂರು, ದಾವಣಗೆರೆ, ಕಲಬುರಗಿ, ಹುಬ್ಬಳ್ಳಿ, ಕೋಲಾರ, ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ಸಮಾವೇಶಗಳನ್ನು ಮಾಡಲಿದೆ.
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಮಧ್ಯೆ ದಲಿತ ಮತಗಳಿಗಾಗಿ ಕೆಸರೆರಚಾಟ ನಡೆಯಲಿದ್ದು, ಕಾಂಗ್ರೆಸ್ ಪಕ್ಷವು ಬಿಜೆಪಿ ಅಧಿಕಾರಲ್ಲಿರುವ ಮಹಾರಾಷ್ಟ್ರದಲ್ಲಿ ನಡೆದ 'ಭೀಮ ಕೊರೆಗಾಂವ್' ಗಲಭೆಯ ಪ್ರಸ್ತಾಪ ಮಾಡಿ ಬಿಜೆಪಿ ದಲಿತ ವಿರೋಧಿ ಎಂದು ಜರಿಯುವ ಸಾಧ್ಯತೆ ಇದೆ.
ಇನ್ನು ಬಿಜೆಪಿಯು, ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಪಕ್ಷವು ಚುನಾವಣೆಯಲ್ಲಿ ಸೋಲಿಸಿತ್ತು ಎಂದು ಹೇಳುವ ಮೂಲಕ ಕಾಂಗ್ರೆಸ್ ದಲಿತ ವಿರೋಧಿ ಎಂದು ಹೀಗಳೆಯುತ್ತಿದೆ. ಇದರ ಜೊತೆಗೆ ದಲಿತರಿಗೆ ಮೀಸಲಿಟ್ಟಿದ್ದ ಅನುದಾನವನ್ನು ಬಳಕೆಯಾಗದೇ ಇರಿಸಿರುವುದರ ಬಗ್ಗೆ ಬಿಜೆಪಿ ವಾಗ್ದಾಳಿ ನಡೆಸುತ್ತಿದೆ. ಇದರ ಜೊತೆ ಎಜೆ ಸದಾಶಿವ ವರದಿಯನ್ನು ಕಾಂಗ್ರೆಸ್ ಜಾರಿ ಗೊಳಿಸದೇ ಇರುವ ಬಗ್ಗೆಯೂ ಬಿಜೆಪಿ ಗಮನ ಸೆಳೆಯಲಿದೆ.
ಒಟ್ಟಿನಲ್ಲಿ ಮೂರು ಪಕ್ಷಗಳೂ ದಲಿತ ಮತದಾರರನ್ನು ಸೆಳೆಯಲು ದ್ರಾವಿಡ ಪ್ರಾಣಾಯಾಮ ಮಾಡುತ್ತಿವೆ, ಅದರೆ ಮತದಾರನ ಒಲವು ಯಾವ ಕಡೆಗಿದೆಯೆಂದು ಚುನಾವಣೆ ಫಲಿತಾಂಶದಂದೇ ಗೊತ್ತಾಗಲಿದೆ.