ಹೆಬ್ಬಾಳದಲ್ಲಿ ಮತದಾರರ ಆಶೀರ್ವಾದ ನನ್ನ ಮೇಲಿದೆ: ನಾರಾಯಣಸ್ವಾಮಿ
ಬೆಂಗಳೂರು ಏಪ್ರಿಲ್ 19: ಹೆಬ್ಬಾಳದಲ್ಲಿ ಒಂದು ಋಣ ಮತ್ತೊಂದು ಹಣದ ಆಧಾರದ ಮೇಲೆ ಚುನಾವಣೆ ನಡೆಯುತ್ತಿದ್ದು, ಕಳೆದ 2 ವರ್ಷಗಳಲ್ಲಿ ನಾನು ಮಾಡಿದ ಸೇವೆಗೆ ಮತದಾರರು ನನ್ನನ್ನು ಹರಿಸಲಿದ್ದಾರೆ ಎಂದು ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವೈ ಎ ನಾರಾಯಣಸ್ವಾಮಿ ವಿಶ್ವಾಸವ್ಯಕ್ತಪಡಿಸಿದರು.
ನಗರದ ಜಯಮಹಲ್ ಬಿಬಿಎಂಪಿ ಕಚೇರಿಯಲ್ಲಿ ತನ್ನ ತಾಯಿ ಪತ್ನಿ ಯೊಂದಿಗೆ ನಾಮಪತ್ರ ಸಲ್ಲಿಸಿದ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಹೆಬ್ಬಾಳ ಚುನಾವಣೆಯಲ್ಲಿ ಹಣದಿಂದ ಮತದಾರರ ಮನವೊಲಿಸಲು ಸಾಧ್ಯವಿಲ್ಲ.
ಚುನಾವಣೆಗೆ ನಿಲ್ಲಲು ಅಂಬರೀಶ್ ಷರತ್ತು, ಒಪ್ಪುತ್ತಾ ಕಾಂಗ್ರೆಸ್
ತಮ್ಮ ಹಣ ಬಲದಿಂದಲೇ ಎಲ್ಲವನ್ನು ಸಾಧಿಸುವ ಉತ್ಸಾಹದಲ್ಲಿರುವ ಅಭ್ಯರ್ಥಿಗಳು ಸೋಲಿಸಿ ರುಚಿಯನ್ನು ಕಾಣಲಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ನಾನು ಪ್ರತಿನಿತ್ಯ ಜನರ ಸೇವೆಯನ್ನು ಮಾಡಿದ್ದೇನೆ. ಆ ಜನರು ನಮ್ಮ ಸೇವೆಗೆ ಚುನಾವಣೆಯಲ್ಲಿ ಉತ್ತರ ನೀಡಲಿದ್ದಾರೆ ಎಂದರು.
ವೈ ಎ ನಾರಾಯಣಸ್ವಾಮಿ ತಾಯಿ ಪಾಪಮ್ಮ ಮಾತನಾಡಿ, ನನ್ನ ಮಗ ಜನರ ಸೇವೆ ಸಲ್ಲಿಸಿದ್ದು ಬಹುಮತದಿಂದ ಗೆಲ್ಲಲಿದ್ದಾರೆ. ಅಲ್ಲದೆ, ಮಂತ್ರಿಯಾಗಿ ಇನ್ನೂ ಹೆಚ್ಚಿನ ಸೇವೆಯಲ್ಲಿ ಸಲ್ಲಿಸಲಿದ್ದಾರೆ ಎಂದರು. ಇದಕ್ಕೂ ಮುನ್ನ ರಾಧಾಕೃಷ್ಣ ಮಂದಿರದಿಂದ ನಡೆದ ಬೃಹತ್ ಮೆರವಣಿಗೆಯಲ್ಲಿ ಕೇಂದ್ರ ಸಚಿವ ಸದಾನಂದಗೌಡ ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.
ಕಳೆದ 2013ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಜಗದೀಶ್ ಕುಮಾರ್ ಆಯ್ಕೆಯಾಗಿದ್ದರು, ಆದರೆ 2016ರಲ್ಲಿ ಹೃದಯಾಘಾತದಿಂದ ಜಗದೀಶ್ ಕುಮಾರ್ ನಿಧನ ಹೊಂದಿದರು. ಆ ವೇಳೆ ವಿಧಾನ ಪರಿಷತ್ ಸದಸ್ಯರಾಗಿದ್ದ ನಾರಾಯಣಸ್ವಾಮಿ ಉಪ ಚುನಾವಣೆಯಲ್ಲಿ ಹೆಬ್ಬಾಳದಿಂದ ಸ್ಪರ್ಧಿಸಿ 15ಸಾವಿರಕ್ಕೂ ಅಧಿಕ ಮತಗಳಿಂದ ಗೆಲವು ಸಾಧಿಸಿದ್ದರು. ಇದೀಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕಾಂಗ್ರೆಸ್ ನಿಂದ ಭೈರತಿ ಸುರೇಶ್ ನಾರಾಯಣಸ್ವಾಮಿ ವಿರುದ್ಧ ಸ್ಪರ್ಧಿಸಲಿದ್ದಾರೆ.