ರಾಹುಲ್ ಗಾಂಧಿ ಆಗಮನಕ್ಕೆ ಸಜ್ಜಾಗುತ್ತಿದೆ ಕರ್ನಾಟಕ
ಬೆಂಗಳೂರು, ಡಿಸೆಂಬರ್ 19: ಗುಜರಾತ್ ನಲ್ಲಿ ಸಮಾಧಾನಕರ ಪ್ರದರ್ಶನವನ್ನೇ ನೀಡಿರುವ ಕಾಂಗ್ರೆಸ್ ನ ಚಿತ್ತ ಈಗ ಕರ್ನಾಟಕದತ್ತ ಹರಿದಿದೆ.
ಬಿಜೆಪಿಯ ಭಧ್ರ ಕೋಟೆಗೆ ಬಿರುಕು ಮೂಡಿಸುವಲ್ಲಿ ಸಫಲವಾಗಿರುವ ರಾಹುಲ್ ಗಾಂಧಿ ಅವರು ಹಲವು ವರ್ಷಗಳಿಂದ ಮೋದಿ ಅಲೆಯಿಂದಾಗಿ ಗುಜರಾತ್ನಲ್ಲಿ ತೆರೆಮರೆಗೆ ಸರಿದಂತಾಗಿದ್ದ ಕಾಂಗ್ರೆಸ್ಗೆ ರಾಹುಲ್ ಗಾಂಧಿ ಈ ಚುನಾವಣೆಯಲ್ಲಿ ಸಣ್ಣ ಮಟ್ಟಿನ ಹೊಸ ಚೈತನ್ಯವನ್ನು ನೀಡಿದ್ದಾರೆ.
ಅನಭಿಷಿಕ್ತ ದೊರೆಯಂತೆ ಮೆರೆಯುತ್ತಿದ್ದ ಬಿಜೆಪಿಗೆ ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾಡುವಲ್ಲಿ ಅವರು ಯಶಸ್ವಿ ಆಗಿದ್ದಾರೆ. ಆದರೆ ಹೊಸದಾಗಿ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷ ಗಾದಿಗೇರಿರುವ ರಾಹುಲ್ ಗಾಂಧಿ ಅವರಿಗೆ ಬೇಕಿರುವುದು ಒಂದು ಪರಿಪೂರ್ಣ ಗೆಲುವು ಅದಕ್ಕಾಗಿ ಈಗ ರಾಹುಲ್ ಗಾಂಧಿ ಅವರ ಸಂಪೂರ್ಣ ಚಿತ್ತ ಕರ್ನಾಟಕದತ್ತ ಹರಿದಿದೆ.

ದಿನಾಂಕ ಪ್ರಕಟಣೆ ಬಾಕಿ
ರಾಜ್ಯ ಕಾಂಗ್ರೆಸ್ ಕೂಡ ರಾಹುಲ್ ಗಾಂಧಿಗೆ ತಾರಾ ಪಟ್ಟ ತಂದುಕೊಡುವ ಪ್ರಯತ್ನದಲ್ಲಿ ನಿರತವಾಗಿದ್ದು, ಮಂಗಳೂರು ಮತ್ತು ಬೆಳಗಾವಿಯಲ್ಲಿ ಭಾರಿ ಸಮಾವೇಶ ಆಯೋಜಿಸುವ ಮೂಲಕ ನೂತನ ಕಾಂಗ್ರೆಸ್ ಅಧ್ಯಕ್ಷರನ್ನು ಕರ್ನಾಟಕಕ್ಕೆ ಸ್ವಾಗತಿಸಲು ಚಿಂತನೆ ನಡೆಸಿದೆ. ಈ ಕುರಿತಂತೆ ಈಗಾಗಲೇ ಒಂದು ಸುತ್ತಿನ ಸಭೆಯೂ ಆಗಿದ್ದು, ದಿನಾಂಕ ಇನ್ನಷ್ಟೆ ಪ್ರಕಟವಾಗಬೇಕಿದೆ.

ಭಾಷಣದಲ್ಲಿ ರಾಹುಲ್ ಗಾಂಧಿ ಗುಣಗಾನ
ರಾಹುಲ್ ಅವರ ತಾರಾಮೌಲ್ಯ ಹೆಚ್ಚಿಸುವತ್ತಲೂ ಚಿಂತನೆ ನಡೆಸಿರುವ ರಾಜ್ಯ ಕಾಂಗ್ರೆಸ್ ತನ್ನ ಚುನಾವಣಾ ಪ್ರಚಾರದಲ್ಲಿ ರಾಹುಲ್ ಗಾಂಧಿ ಅವರ ಹೆಸರು ಬಳಕೆ ಮಾಡಿ, ಅವರ ಜನಪ್ರಿಯತೆ ಹೆಚ್ಚಿಸಲು ಮುಂದಾಗುತ್ತಿದೆ.

ಅಭಿವೃದ್ಧಿಯೂ ವಿಷಯವೇ
ಇಂದಿರಾಗಾಂಧಿ ಅವರು ಗೆದ್ದಿದ್ದ ಮಂಗಳೂರು, ಸೋನಿಯಾ ಗಾಂಧಿ ಅವರು ಗೆದ್ದಿದ್ದ ಬೆಳಗಾವಿಯನ್ನೇ ರಾಹುಲ್ ಅವರ ರಾಜ್ಯ ಪ್ರವಾಸಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು, ಈ ಭಾಗಗಳಲ್ಲಿ ಕಾಂಗ್ರೆಸ್ ಜನತೆಯೊಂದಿಗೆ ಭಾವನಾತ್ಮಕ ಹೊಂದಿರುವುದರಿಂದ ರಾಹುಲ್ ಅವರಿಗೆ ಇಲ್ಲಿನ ಜನರೊಂದಿಗೆ ಸಂವಹನ ಸುಲಭವಾಗಲಿದೆ ಎನ್ನಲಾಗುತ್ತಿದೆ. ಹಾಗೂ ರಾಹುಲ್ ಗಾಂಧಿ ಅವರು ಅಭಿವೃದ್ಧಿಯ ಜೊತೆಗೆ ಜನರೊಂದಿಗೆ ಕಾಂಗ್ರೆಸ್ ಪಕ್ಷದ ಭಾವನಾತ್ಮಕ ಸಂಬಂಧದ ಬಗ್ಗೆಯೂ ಮಾತನಾಡಲಿದ್ದಾರೆ ಎಂಬ ಸೂಚನೆ ಇದೆ.

ಮೋಡಿ ಮಾಡಿಯಾರೇ ರಾಹುಲ್ ಗಾಂಧಿ?
ಸಿದ್ದರಾಮಯ್ಯ ಅವರೂ ಕೂಡ ರಾಹುಲ್ ಗಾಂಧಿ ಅವರಿಗೆ ಕರ್ನಾಟಕ ಗೆಲುವಿನ ಉಡುಗೊರೆ ನೀಡಲಿದೆ ಎಂದು ಹೇಳಿದ್ದು ಕರ್ನಾಟಕದ ರಾಜಕೀಯ ಕಣದಲ್ಲಿ ಹೊಸ ಮಹರಾಜ ರಾಹುಲ್ ಗಾಂಧಿ ಏನು ಮೋಡಿ ಮಾಡುತ್ತಾರೊ ಕಾದು ನೋಡಬೇಕು. ರಾಜ್ಯದಲ್ಲಿ ಕಾಂಗ್ರೆಸ್ಗೆ ಹಿನ್ನೆಡೆ ಉಂಟಾದರೆ ರಾಹುಲ್ ಗಾಂಧಿ ನಾಯಕತ್ವದ ಮೇಲೆ ಪ್ರಶ್ನೆಗಳು ಏಳುವ ಸಾಧ್ಯತೆ ಇದೆ.












Click it and Unblock the Notifications