ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ: ಯಾರೆಲ್ಲ ಗೈರು?
ಬೆಂಗಳೂರು, ಜುಲೈ 9: ಕಾಂಗ್ರೆಸ್ನ ಮಹತ್ವದ ಶಾಸಕಾಂಗ ಪಕ್ಷದ ಸಭೆ ಆರಂಭವಾಗಿದೆ. ದೋಸ್ತಿ ಸರ್ಕಾರದ ಶಾಸಕರ ರಾಜೀನಾಮೆ ಪರ್ವ ಕೈ ನಾಯಕರಲ್ಲಿ ನಡುಕ ಹುಟ್ಟಿಸಿದೆ. ಮೈತ್ರಿ ಸರ್ಕಾರ ಉಳಿಸಿಕೊಳ್ಳುವುದು ಮತ್ತು ಪಕ್ಷ ಉಳಿಸಿಕೊಳ್ಳುವುದು ಎರಡೂ ಒಂದೇ ಸವಾಲಿನದ್ದಾಗಿದೆ. ಹೀಗಾಗಿ ಈ ಸಭೆಯಲ್ಲಿ ತೆಗೆದುಕೊಳ್ಳುವ ತೀರ್ಮಾನ ಮುಖ್ಯವಾಗಲಿದೆ.
ಶಾಸಕಾಂಗ ಪಕ್ಷದ ಸಭೆಗೆ ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ ಹಾಗೂ ಬೆಂಗಳೂರಿನಲ್ಲಿಯೇ ಉಳಿದುಕೊಂಡಿರುವ ಶಾಸಕರಲ್ಲದೆ ಇತರೆ ಕೆಲವು ಶಾಸಕರೂ ಶಾಸಕಾಂಗ ಪಕ್ಷದ ಸಭೆಗೆ ಗೈರು ಹಾಜರಾಗಿದ್ದಾರೆ.
ಸ್ಲಂನಲ್ಲಿದ್ದು ದುರ್ವಾಸನೆ ಆಗೊಲ್ಲ ಎಂದರೆ ಹೇಗೆ?: ರಮೇಶ್ ಕುಮಾರ್ ಮಾರ್ಮಿಕ ನುಡಿ
ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ಸಭೆ ನಡೆಸಲಾಗಿದ್ದು, ರಾಜಕೀಯ ವಿದ್ಯಮಾನಗಳ ಬಗ್ಗೆ ಮಹತ್ವದ ಚರ್ಚೆ ನಡೆಸಲಾಯಿತು. ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ವಿಧಾನಸಭೆ, ವಿಧಾನಪರಿಷತ್ನ ಸದಸ್ಯರು, ಮುಖಂಡರು ಹಾಜರಾಗಿದ್ದರು. ಸಂಸದರು ಮತ್ತು ರಾಜೀನಾಮೆ ನೀಡಿದ ಸದಸ್ಯರು ಗೈರಾಗಿದ್ದರು. ಇನ್ನು ಕೆಲವು ಶಾಸಕರು ಹಾಜರಾಗಲು ಸಾಧ್ಯವಿಲ್ಲ ಎಂದು ಕಾರಣ ನೀಡಿ ಮೊದಲೇ ಅನುಮತಿ ಪಡೆದುಕೊಂಡಿದ್ದರು.
ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದ್ದ ಜಯನಗರ ಶಾಸಕಿ, ರಾಮಲಿಂಗಾ ರೆಡ್ಡಿ ಅವರ ಪುತ್ರಿ ಸೌಮ್ಯಾ ರೆಡ್ಡಿ ಸಭೆಗೆ ಹಾಜರಾಗಿದ್ದರು.
ಎಂಟಿಬಿ, ಅಂಜಲಿ ಗೈರು
ಈ ಮೊದಲೇ ರಾಜೀನಾಮೆ ನೀಡಿದ್ದ ಆನಂದ್ ಸಿಂಗ್, ಶನಿವಾರ ರಾಜೀನಾಮೆ ನೀಡಿರುವ ರಾಮಲಿಂಗಾ ರೆಡ್ಡಿ, ಮುನಿರತ್ನ ಅವರು ಬೆಂಗಳೂರಿನಲ್ಲಿಯೇ ಇದ್ದರೂ ಸಭೆಗೆ ಹಾಜರಾಗಿಲ್ಲ. ಇವರಲ್ಲದೆ ರಾಜೀನಾಮೆ ನೀಡುವ ಸಂಭಾವ್ಯ ಶಾಸಕರ ಪಟ್ಟಿಯಲ್ಲಿರುವ ಸಚಿವ ಎಂಟಿಬಿ ನಾಗರಾಜ್ ಮತ್ತು ಖಾನಾಪುರದ ಶಾಸಕಿ ಅಂಜಲಿ ನಿಂಬಾಳ್ಕರ್ ಗೈರುಹಾಜರಾಗಿದ್ದಾರೆ.
ಯಾವ ಕಾರಣಕ್ಕೂ ರಾಜೀನಾಮೆ ಹಿಂದಕ್ಕೆ ಪಡೆಯೊಲ್ಲ: ರಾಮಲಿಂಗಾ ರೆಡ್ಡಿ
ಮತ್ತಷ್ಟು ಶಾಸಕರ ಗೈರು
ಚಿಕ್ಕಬಳ್ಳಾಪುರ ಶಾಸಕ ಕೆ. ಸುಧಾಕರ್, ದಾವಣಗೆರೆ ಶಾಸಕ ಶ್ಯಾಮನೂರು ಶಿವಶಂಕರಪ್ಪ, ಶೃಂಗೇರಿ ಶಾಸಕ ಟಿಡಿ ರಾಜೇಗೌಡ, ಭದ್ರಾವತಿ ಶಾಸಕ ಬಿಕೆ ಸಂಗಮೇಶ್, ಸಂಡೂರು ಶಾಸಕ ಇ. ತುಕಾರಾಂ, ಆನೇಕಲ್ ಶಾಸಕ ಶಿವಣ್ಣ, ಬಳ್ಳಾರಿ ಶಾಸಕ ಬಿ. ನಾಗೇಂದ್ರ, ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಖನಿ ಫಾತಿಮಾ, ಹರಿಹರ ಶಾಸಕ ರಾಮಪ್ಪ, ಪಕ್ಷದಿಂದ ಅಮಾನತಾಗಿರುವ ಶಿವಾಜಿನಗರ ಶಾಸಕ ರೋಷನ್ ಬೇಗ್ ಸಿಎಲ್ಪಿ ಸಭೆಗೆ ಹಾಜರಾಗಿಲ್ಲ.
57 ಶಾಸಕರು ಹಾಜರ್
ಶಾಸಕಾಂಗ ಪಕ್ಷದ ಸಭೆಗೆ 78 ಶಾಸಕರ ಪೈಕಿ 57 ಶಾಸಕರು ಮಾತ್ರ ಹಾಜರಾಗಿದ್ದಾರೆ ಎಂದು ತಿಳಿದುಬಂದಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಅತೃಪ್ತ ಶಾಸಕರು ಕೂಡ ಸಭೆಯಿಂದ ದೂರವೇ ಉಳಿದಿದ್ದಾರೆ. ಅತೃಪ್ತ ಶಾಸಕರು ಮುಂಬೈನಿಂದ ಬಂದು ಸಿಎಲ್ಪಿ ಸಭೆಗೆ ಹಾಜರಾಗಲು ಮನಸು ಮಾಡಿಲ್ಲ. ಉಳಿದಂತೆ ಅತೃಪ್ತರ ಪಟ್ಟಿಯಲ್ಲಿ ಕೇಳಿಬರುತ್ತಿದ್ದ ಅನೇಕ ಶಾಸಕರು ಸಭೆಗೆ ಹಾಜರಾಗಿದ್ದರು.
ಅನಾರೋಗ್ಯದ ಕಾರಣ ಗೈರು
ಶೃಂಗೇರಿ ಶಾಸಕ ಟಿಡಿ ರಾಜೇಗೌಡ ಅವರು ಉಜಿರೆಯಲ್ಲಿ ಪ್ರಕೃತಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದರಿಂದ ಅವರು ಹಾಜರಾಗುವುದಿಲ್ಲ ಎಂದು ಮೊದಲೇ ತಿಳಿಸಿದ್ದರು ಎನ್ನಲಾಗಿದೆ. ಎಂಟಿಬಿ ನಾಗರಾಜ್, ಕೆ. ಸುಧಾಕರ್, ಶ್ಯಾಮನೂರು ಶಿವಶಂಕರಪ್ಪ ಅವರು ಅನಾರೋಗ್ಯದ ಕಾರಣ ಹಾಜರಾಗಲು ಆಗುವುದಿಲ್ಲ ಎಂದು ಮೊದಲೇ ತಿಳಿಸಿದ್ದರು ಎಂದು ಹೇಳಲಾಗಿದೆ.
ಸರ್ಕಾರದ ಭವಿಷ್ಯ ನಿರ್ಧಾರ, ಸ್ಪೀಕರ್ ರಮೇಶ್ ಮುಂದಿರುವ 7 ಆಯ್ಕೆಗಳು
ರೇವಣ್ಣ ವಿರುದ್ಧ ಅಸಮಾಧಾನ?
ಸಿಎಲ್ಪಿ ಸಭೆಯಲ್ಲಿ ಪಕ್ಷದ ಮುಂದಿನ ನಡೆಗಳ ಬಗ್ಗೆ ಚರ್ಚಿಸಲಾಗಿದೆ. ಪಕ್ಷದಲ್ಲಿ ದೋಸ್ತಿ ಸರ್ಕಾರದಲ್ಲಿ ನಡೆದಿರುವ ಅನ್ಯಾಯ ಮತ್ತು ಅವಕಾಶ ಸಿಗದೆ ಇರುವುದರ ಬಗ್ಗೆ ತೀವ್ರ ಚರ್ಚೆ ನಡೆದಿದೆ. ಸಿದ್ದರಾಮಯ್ಯ ಅವರ ನಾಯಕತ್ವದಲ್ಲಿ ನಡೆದ ಸಭೆಯಲ್ಲಿ ಕಾಂಗ್ರೆಸ್ನ ಅನೇಕ ಶಾಸಕರು ಸಚಿವ ರೇವಣ್ಣ ಅವರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರಿಂದಾಗಿಯೇ ರಾಜೀನಾಮೆ ಸಲ್ಲಿಸುವಂತಾಗಿದೆ ಎಂದು ಆರೋಪಿಸಿದರು ಎಂದು ತಿಳಿದುಬಂದಿದೆ.